ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರ

Update: 2024-07-02 11:53 GMT

ಬೆಂಗಳೂರು, ಜುಲೈ 2:- ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಬಿಜೆಪಿಯವರಿಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೋ, ಅಲ್ಲಿಯವರೆಗೂ ಅವರು ಗೊಂದಲದಲ್ಲಿರುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶ.ವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆ ವಿಚಾರ ಕುರಿತು, ನಾನು ಸಿಎಂ ಅವರನ್ನು ಪ್ರತಿದಿನ ಭೇಟಿ ಮಾಡುತ್ತೇನೆ. ಇಲಾಖೆಯ ಅನೇಕ ವಿಚಾರಗಳನ್ನು ಅವರ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರದಲ್ಲಿ ಅನೇಕ ತೀರ್ಮಾನಗಳನ್ನು ಮಾಡುವಂತಹ ಸಂದರ್ಭದಲ್ಲಿ ಅವರೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಹೇಳಿದರು.

ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರಿಗೆ ಡಿ.ಕೆ.ಶಿವಕುಮಾರ್ ನೋಟಿಸ್ ಜಾರಿ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿತಿಯಿಸಿ, ನೋಟಿಸ್ ನೀಡುವುದು ಅಧ್ಯಕ್ಷರು ಮಾಡುವ ಕೆಲಸ. ಕಾರ್ಯಕರ್ತರು, ಶಾಸಕರು, ಸಚಿವರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದಾಗಿ ಹೇಳಿದ್ದಾರೆ ಎಂಬರ್ಥದಲ್ಲಿ ಅರ್ಥೈಸಿಕೊಂಡಿದ್ದೇನೆ. ಪಕ್ಷದ ಮತ್ತು ಅಧ್ಯಕ್ಷರ ದೃಷ್ಟಿಯಲ್ಲಿ ಸರಿ ಇಲ್ಲ ಎಂಬುದು ಕಂಡು ಬಂದರೆ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಹೈಕಮಾಂಡ್ ಮತ್ತು ಪಕ್ಷದ ಅಧ್ಯಕ್ಷರು ಏನು ಮಾಡುತ್ತಾರೆ ಕೇಳಬೇಕಾಗುತ್ತದೆ. ಯಾವ ಶಿಸ್ತು ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಆ ವ್ಯಕ್ತಿಯನ್ನು ಕರೆದು ಶಿಸ್ತು ಸಮಿತಿ ಹೇಳಬೆಕಾಗುತ್ತದೆ. ಆ ನಂತರದ ಬೆಳವಣಿಗೆ ಪಕ್ಷದ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದು ಹೇಳಿದರು.

ರಾಜ್ಯಮಟ್ಟದಲ್ಲಿ ಸತ್ಯಶೋಧನೆ ಸಮಿತಿಯನ್ನು ಮಾಡಿಕೊಳ್ಳಬಹುದು. ಕೆಪಿಸಿಸಿ ಅಧ್ಯಕ್ಷರಾದವರು ಮಾಡುವ ಜವಾಬ್ದಾರಿ ಇದು. ಎಐಸಿಸಿಯವರು ದೇಶ ಮಟ್ಟದಲ್ಲಿ ಸತ್ಯಶೋಧನ ಸಮಿತಿ ಮಾಡಿದ್ದಾರೆ. ನಾನು ಸಹ ಈ ಹಿಂದೆ ಸತ್ಯಶೋಧನಾ ಸಮಿತಿಯನ್ನು ನೇಮಕ ಮಾಡಿದ್ದೆ. ಎಐಸಿಸಿ ಸತ್ಯಶೋಧನಾ ಸಮಿತಿ ಜುಲೈ 10 ಅಥವಾ 12ರಂದು ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದರು.

ಹೊಸ ಕಾನೂನು ಚರ್ಚೆಯಾಗಬೇಕು:- ಹೊಸ ಮೂರು ಅಪರಾಧ ಕಾನೂನು ಜಾರಿಯಾಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹೊಸ ಕಾನೂನುಗಳು ಒಂದು ರಾಜ್ಯಕ್ಕೆ ಮಾತ್ರ ಸಂಬಂಧಪಟ್ಟಿದ್ದರೆ ವಾಪಸ್ ಪಡೆಯುವಂತೆ ಹೇಳಬಹುದಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದು. ಹೊಸ ಕಾನೂನು ಅಡಿ ರಾಜ್ಯದಲ್ಲಿ 80 ಪ್ರಕರಣಗಳು, ಬೆಂಗಳೂರು ನಗರದಲ್ಲಿ 25ಕ್ಕು ಹೆಚ್ಚು ಪ್ರಕರಣಗಳು ನಿನ್ನೆ ದಾಖಲಾಗಿವೆ. ಮುಂದೆ ಲಕ್ಷಾಂತರ ಕೇಸ್ಗಳು ದಾಖಲಾಗುತ್ತವೆ. ಇದೆಲ್ಲವನ್ನು ಹೊಸ ಕಾನೂನಿನ ಅಡಿ ದಾಖಲಿಸಬೇಕು. ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು ಕಲಿತುಕೊಳ್ಳುತ್ತಾರೆ ಎಂದರು.

ಉಪವಾಸ ಸತ್ಯಾಗ್ರಹ ಮಾಡಿದರೆ ಆತ್ಮಹತ್ಯೆ ಪ್ರಕರಣ ದಾಖಲಾಗುವ ಕುರಿತು ಮಾತನಾಡಿ, ಹೀಗೆ ಅನೇಕ ವಿಚಾರಗಳ ಕುರಿತು ಡಿಬೇಟ್ ಮಾಡಬಹುದು. ಕೆಲವು ಉತ್ತಮವಾದ ಅಂಶಗಳು ಇವೆ. ಎಲ್ಲವನ್ನು ತೆಗೆದು ಹಾಕಲು ಆಗುವುದಿಲ್ಲ. ಬ್ರಿಟಿಷ್ ಕಾಲದಲ್ಲಿ ಇದ್ದ ಕಾನೂನುಗಳನ್ನು ಬದಲಾವಣೆ ಮಾಡಿ, ಆಧುನಿಕ ಜಗತ್ತಿಗೆ ಬೇಕಾದ ಕಾನೂನುಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಕೆಲವನ್ನು ನಾನು ಈಗಲೇ ಹೇಳುವುದಿಲ್ಲ. ಹೇಳಿದರೆ ಬೇರೆ ರೀತಿಯ ಅರ್ಥ ಬರುತ್ತದೆ. ಕೆಲವು ಕಾನೂನಿನ ಪ್ರಾವಿಷನ್ಸ್ ಸರಿಯಾಗಿ ಕಾಣಿಸುವುದಿಲ್ಲ. ಈ ಹಿಂದೆ ದಾಖಲಿಸುತ್ತಿದ್ದ ಪ್ರಕರಣಗಳು, ಈಗ ದಾಖಲಿಸಬೇಡಿ ಎಂಬರ್ಥದಲ್ಲಿವೆ. ಅವುಗಳ ಬಗ್ಗೆ ಚರ್ಚೆಯಾಗಬೇಕಿದೆ ಎಂದರು.

ನಾವು ಕೆಲವು ವ್ಯಕ್ತಿಗಳನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಅಂತವುಗಳನ್ನು ಬಿಟ್ಟು ಬಿಡಬೇಕು ಎಂದು ಹೊಸ ಕಾನೂನಿನಲ್ಲಿ ಬಂದಿದೆ. ಮುಂದೆ ಅಂತಹ ಪ್ರಕರಣ ಬಂದಾಗ ದಾಖಲಿಸಬೇಡಿ ಎಂಬ ಲೆಕ್ಕದಲ್ಲಿವೆ. ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಾಗುತ್ತದೆ. ಇದರಂತೆ ಸರಿಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಮೂಡಾ ಅಕ್ರಮದ ಕುರಿತು ಮಾತನಾಡಿ, ಸಾಕ್ಷ್ಯಗಳನ್ನು ನಾಶ ಮಾಡುತ್ತಾರೆ ಎಂಬ ಕಾರಣದಿಂದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ಆರೋಪಗಳು ಕೇಳಿ ಬಂದಾಗ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದು. ಮುಂದೆ ಇಲಾಖಾ ವಿಚಾರಣೆಯಲ್ಲಿ ಅಕ್ರಮ ನಡೆದಿರುವುದು ಕಂಡು ಬಂದರೆ, ಪೊಲೀಸ್ ತನಿಖೆಗೆ ವಹಿಸುವ ಬಗ್ಗೆ ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಎಚ್.ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿ, ಕೆಲವರು ಹೇಳಿದ್ದೆಲ್ಲವು ಸತ್ಯವಲ್ಲ. ತನಿಖೆ ಮಾಡಿ, ಸತ್ಯಾಂಶಗಳು ಬೆಳಕಿಗೆ ಬಂದ ನಂತರ ಯೋಚಿಸೋಣ ಎಂದರು.

ವಿಶೇಷ ಸತ್ಕಾರವಿಲ್ಲ:- ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪದ ಕುರಿತು ಮಾತನಾಡಿ, ದರ್ಶನ್ ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News