ಹನಿಟ್ರ್ಯಾಪ್ ಪ್ರಕರಣ : ಪಾರದರ್ಶಕ ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ವಿಧಾನಸೌಧ ದೇವಾಲಯದಂತೆ. ಇಂತಹ ದೇವಾಲಯದಲ್ಲಿ ವಿಷಯಾಧಾರಿತ ಚರ್ಚೆ ನಡೆಯಬೇಕು. ಇತ್ತೀಚೆಗೆ ಸರ್ಕಾರದ ಪ್ರಭಾವಿ ಸಚಿವರ ಸದಸನದೊಳಗೆ ಹನಿಟ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರ ಎಲ್ಲಿಗೆ ಬಂದು ನಿಂತಿದೆ ಎಂದು ನಿಖಿಲ್ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಎಸ್ ಐಟಿ ತನಿಖೆ ನಡೆದರೆ ಸಮಾಧಾನ ಆಗುವುದಿಲ್ಲ, ನಿವೃತ್ತ ನ್ಯಾಯಾಧೀಶರ ಮೂಲಕ ಪಾರದರ್ಶಕ ತನಿಖೆ ಬೇಕು ಎಂದು ಸದನದೊಳಗೆ ಸಚಿವರೇ ಹೇಳಿದ್ದಾರೆ. ನಮ್ಮ ಪಕ್ಷದ ಶಾಸಕರು, ಮಿತ್ರ ಪಕ್ಷದವರು ಈ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಲು ಕೇಳಿದಾಗ ಸದನದಲ್ಲಿ ನಡೆದ ಘಟನೆ ಸರಿಯಲ್ಲ ಎಂದು ಕಿಡಿಕಾರಿದರು.
ಸಭಾಧ್ಯಕ್ಷರು ಆರು ತಿಂಗಳು ಶಾಸಕರನ್ನು ಅಮಾನತು ಮಾಡಿರೋದು ರಾಜ್ಯದ ಜನ ಒಪ್ಲೋದಿಲ್ಲ. ರಾಹುಲ್ ಗಾಂಧಿ ಪರಿಶಿಷ್ಟ ಜಾತಿ, ಪಂಗಡ ಪರ ಎಂದು ಹೇಳುತ್ತಾರೆ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿತ್ತು. ಕೊನೆಗೆ ಟಿಕೆಟ್ ಕೊಟ್ಟಿಲ್ಲ, ನಡು ಬೀದಿಯಲ್ಲಿ ಬಿಟ್ರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹನಿಟ್ರ್ಯಾಪ್ ವ್ಯಕ್ತಿಗತವಾಗಿ ಟಾರ್ಗೆಟ್ :
ಹನಿಟ್ರ್ಯಾಪ್ ಮಾಡಿ ವ್ಯಕ್ತಿಗತವಾಗಿ ಟಾರ್ಗೆಟ್ ಮಾಡಿ, ತೇಜೋವಧೆ ಮಾಡುವುದು ಸರಿಯಲ್ಲ, ವೈಯಕ್ತಿಕ ಟಾರ್ಗೆಟ್ ಮಾಡಬಾರದು. ಇದರ ಹಿಂದೆ ಯಾರು ಪ್ರಭಾವಿಗಳು ನಿಂತಿದ್ದಾರೆ. ಅವರು ಎಷ್ಟೇ ಪ್ರಭಾವಿಗಳದರೂ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಒಂದೇ ಒಂದು ಇಂಚು ಬೇರೆಯವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ :
ಕೇತಗಾನಹಳ್ಳಿ ಜಮೀನಿನಲ್ಲಿ ಒಂದೇ ಒಂದು ಇಂಚು ಬೇರೆ ಅವರ ಜಾಗಕ್ಕೆ ನಾವು ಬೇಲಿ ಹಾಕಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಮಾತನಾಡಿದ ಅವರು, ನಾನು ಎಲ್ಲಾ ದಾಖಲಾತಿಗಳನ್ನ ಕಲೆ ಹಾಕಿದ್ದೇನೆ. ಇದರ ಬಗ್ಗೆ ನಾನು ಸುದ್ದಿಗೋಷ್ಟಿ ಕರೆದು ಮಾತನಾಡುತ್ತೇನೆ. 46 ಎಕರೆ ಜಮೀನು ಕುಮಾರಸ್ವಾಮಿ ರೈತರಿಂದ ಖರೀದಿ ಮಾಡಿರೋ ಜಮೀನು. ಅದರಲ್ಲಿ ಸರ್ವೆ ನಂಬರ್ 7,8,9, ಇವು P ನಂಬರ್ ಜಮೀನು. ಪೋಡಿ ಆಗದ ಜಮೀನು. ಪೋಡಿ ಆಗದ ಜಮೀನು ತೆಗೆದುಕೊಳ್ಳೋದಕ್ಕೆ ಅವತ್ತು ಅವಕಾಶ ಇತ್ತು. ಪೋಡಿ ದುರಸ್ತಿ ಮಾಡೋಕೆ ಅದನ್ನು ಸರಿ ಮಾಡಬೇಕಿರೋದು ಸರ್ಕಾರ. ನಾವು ಅರ್ಜಿ ಕೊಟ್ಟರೂ ಸರ್ಕಾರ ಅದನ್ನು ಮಾಡಿಲ್ಲ ಎಂದು ಕಿಡಿಕಾರಿದರು.
ಸರ್ವೆ ನಂಬರ್ 7 ರಲ್ಲಿ 1 ಎಕರೆ ನಾವು ಅನುಭವದಲ್ಲಿ ಇದ್ದೇವೆ. ಉಳಿದ 4 ಎಕರೆ ಪೋಡಿ ದುರಸ್ತಿ ಮಾಡಬೇಕು. ಅದನ್ನ ಸರ್ಕಾರ ಮಾಡಬೇಕು. ರೈತರ ಜಮೀನು ಖರೀದಿ ಮಾಡಿದಾಗ ರೈತರು ಹಾಕಿದ್ದ ಬೌಂಡರಿಯನ್ನ ನಾವು ಹಾಗೇ ಉಳಿಸಿಕೊಂಡಿದ್ದೇವೆ. ಅರ್ಧ ಇಂಚು ಬೇರೆಯದಕ್ಕೆ ಬೇಲಿ ಹಾಕಿಲ್ಲ. ಸಿಎಂ ಆದಾಗ ಎಷ್ಟೋ ಜನರಿಗೆ ಸಾಗುವಳಿ ಚೀಟಿಯನ್ನ ಕೊಡಿಸಿದ್ದಾರೆ. ಎರಡು ಬಾರಿ ಸಿಎಂ ಆಗಿದ್ರು. ತಪ್ಪಿದ್ದರೆ ಆಗ ಸರಿ ಮಾಡಿಸಿಕೊಳ್ಳಬಹುದಿತ್ತು. ಆದರೆ ಅದನ್ನ ಮಾಡಿಲ್ಲ. ನೋಟಿಸ್ ಕೊಡದೇ ತೆರವು ಮಾಡುತ್ತೇನೆ ಎಂದು ಡಿಸಿ ಬಂದರೆ ಅದು ಕಾನೂನುಬಾಹಿರ. ಡಿಸಿ ಅವರು 14 ಎಕರೆ ಜಮೀನು ಒತ್ತುವರಿ ಆಗಿದೆ ಎನ್ನುತ್ತಾರೆ. ಯಾವ 14 ಎಕರೆ ಒತ್ತುವರಿ ಆಗಿದೆ ಎಂದು ನಿಖಿಲ್ ಅವರು ಪ್ರಶ್ನಿಸಿದರು.
ಕಾಲ ಹೇಗಿದೆ ಅಂದರೆ ಆರೋಪ ಬಂದ ಕೂಡಲೆ ಅಪರಾಧಿ ಮಾಡುತ್ತಾರೆ. ರೀಲ್ಸ್, ಶಾರ್ಟ್ಸ್ ಕಾಲ ಇದು. ಅಂತಿಮವಾಗಿ ಕುಮಾರಸ್ವಾಮಿ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರಬೇಕು, ಮಸಿ ಬಳಿಯಬೇಕು ಅಷ್ಟೇ ತಾನೆ ಅಂತಿಮ. ಇದರ ಹಿಂದೆ ಯಾರ್ಯಾರು ಇದ್ದಾರೆ ಎಂದು ಈಗ ಚರ್ಚೆ ಮಾಡಲ್ಲ. ಎಲ್ಲಾ ದಾಖಲಾತಿ ತೆಗೆಸಿದ್ದೇನೆ. ಸಂಪೂರ್ಣ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಅಡ್ಡ ಹಾಕಿದ್ದು ಕುಮಾರಸ್ವಾಮಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಕೈಲಾಗದೇ ಇರೋರು ಕುಣಿಯೋದಕ್ಕೆ ನೆಲ ಡೊಂಕು ಎಂದು ಡಿ ಕೆ ಶಿವಕುಮಾರ್ ವಿರುದ್ದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ ಅನ್ನೋದಕ್ಕೆ ಏನಾದ್ರು ಸಾಕ್ಷಿ ಇದೆಯಾ.? ರಾಮನಗರ ಜಿಲ್ಲೆಯ ಅಸ್ಮಿತೆ ಕಾಪಾಡಬೇಕು ಅನ್ನೋದು ಜಿಲ್ಲೆಯ ಜನರ ಭಯಕೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ರೆ ಅದು ಅಭಿವೃದ್ಧಿ ಆಗುತ್ತಾ? ಎಂದು ಕಿಡಿಕಾರಿದರು.
ಸ್ಮಾರ್ಟ್ ಮೀಟರ್ ನಲ್ಲಿ ದೊಡ್ಡ ಅಕ್ರಮ ನಡೆಯುತ್ತಿದೆ. 7,500 ಸಾವಿರ ಕೋಟಿ ರೂ. ಹಗರಣ ಅದು. ಬ್ಲ್ಯಾಕ್ ಲೀಸ್ಟ್ ನಲ್ಲಿ ಇರೋರಿಗೆ ಸ್ಮಾರ್ಟ್ ಮೀಟರ್ ಟೆಂಡರ್ ಕೊಟ್ಟಿದ್ದಾರೆ. 1,500 ರೂ. ಮೀಟರ್ ಗೆ 5,500 ರೂಪಾಯಿ ಕೊಟ್ಟು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.