ಸಮಾಜದ ಎಲ್ಲರೂ ಒಟ್ಟಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕಿದೆ : ಕೃಷ್ಣ ಬೈರೇಗೌಡ

Update: 2024-09-26 17:00 GMT

ಬೆಂಗಳೂರು : ಸಮಾಜದಲ್ಲಿರುವ ಪ್ರತಿಯೊಬ್ಬರೂ ಹೆಚ್ಚಿನ ಪ್ರಯತ್ನ ಮಾಡಿ ಸರಕಾರಿ ಶಾಲೆಗಳಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಖಾಸಗಿ ಶಾಲೆಯ ಮಕ್ಕಳೂ ಸರಕಾರಿ ಶಾಲೆಗಳ ಕಡೆ ಮುಖಮಾಡುವಂತಹ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಗುರುವಾರ ವಿದ್ಯಾಶಿಲ್ಪ್ ಕಮ್ಯೂನಿಟಿ ಟ್ರಸ್ಟ್‌ ನ ಸಿಎಸ್‍ಆರ್ ನಿಧಿ ಹಾಗೂ ಉದ್ಯಮಿ ಆನಂದ್ ಪೈ ಕುಟುಂಬದವರ ಸಹಯೋಗದೊಂದಿಗೆ ಬ್ಯಾಟರಾಯನಪುರದಲ್ಲಿ 4.5 ಕೋಟಿ ರೂ.ವೆಚ್ಚದಲ್ಲಿ 17 ನೂತನ ತರಗತಿ ಕೊಠಡಿ, ಉತ್ತಮ ಗುಣಮಟ್ಟದ ಶೌಚಾಲಯ ಹಾಗೂ ಅಡುಗೆ ಕೊಣೆಯನ್ನು ಒಳಗೊಂಡ ಹೈಟೆಕ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವಂತಹ ಉತ್ತಮ ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಯ ಮಕ್ಕಳಿಗೂ ಸಿಗುವಂತಾಗಬೇಕು ಎಂಬುದೇ ಎಲ್ಲರ ಆಶಯ. ಆ ನಿಟ್ಟಿನಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಪ್ರಸ್ತುತ ನಿರ್ಮಿಸಲಾಗಿರುವ ಈ ಶಾಲೆ ಯಾರೇ ಆದರೂ ಒಮ್ಮೆ ತಿರುಗಿ ನೋಡುವಂತೆ ಅಭಿವೃದ್ಧಿಯಾಗಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.

ಬ್ಯಾಟರಾಯನಪುರದಲ್ಲಿ ಅನೇಕ ಸರಕಾರಿ ಶಾಲೆಗಳನ್ನು ಈಗಾಗಲೇ ಸಿಎಸ್‍ಆರ್ ಫಂಡ್ ಬಳಸಿ ಉನ್ನತ ಮಟ್ಟಕ್ಕೆ ಏರಿಸಲಾಗಿದೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಕಟ್ಟಡ ಹಾಗೂ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಪರಿಣಾಮ ಸರಕಾರಿ ಶಾಲೆಗಳಿಗೆ ಆಗಮಿಸುವ ಮಕ್ಕಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಇದೇ ಮಾದರಿಯಲ್ಲಿ ಇದೀಗ ಮತ್ತೊಂದು ಶಾಲೆ ಲೋಕಾರ್ಪಣೆಯಾಗಿದ್ದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಚಾರ. ಈ ಮೂಲಕ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ, ನಾಳಿನ ಸಮಾಜಕ್ಕೆ ಅವರನ್ನು ಆಸ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಿಗೂ ಕಿವಿಮಾತು ಹೇಳಿದ ಕೃಷ್ಣ ಬೈರೇಗೌಡ, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ ಕೂಡಲೆ ಶಾಲೆಗಳು ಉತ್ತಮಗೊಳ್ಳುವುದಿಲ್ಲ. ಬದಲಾಗಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿದಾಗ ಮಾತ್ರ ನಮ್ಮ ಕೆಲಸ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಹೇಳಿದರು.

ಶಾಲೆಯ ಶಿಕ್ಷಕರು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಕೆಲಸ ಮಾಡಲಿ, ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳೂ ನಾಳೆ ದೊಡ್ಡ ಉದ್ಯಮಿಗಳಾಗಿ ನಮ್ಮ ಸಮಾಜಕ್ಕೆ ಹಾಗೂ ಎಲ್ಲ ಶಿಕ್ಷಕರಿಗೂ ಮತ್ತಷ್ಟು ಸ್ಫೂರ್ತಿ ಪ್ರೇರಣೆಯಾಗಲಿ ಎಂದು ಕೃಷ್ಣ ಬೈರೇಗೌಡ ಆಶಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಪಿ.ರವೀಂದ್ರ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಮೂರ್ತಿ, ಡಾ.ಪಿ.ದಯಾನಂದ ಪೈ ಹಾಗೂ ಕುಟುಂಬ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News