ಎಐ ಕೌಶಲ ಕುರಿತು ರಾಜ್ಯ ಸರಕಾರದ ಜತೆ ಒಡಂಬಡಿಕೆಗೆ ಮೈಕ್ರೋಸಾಫ್ಟ್ ಒಲವು : ಎಂ.ಬಿ. ಪಾಟೀಲ್

Update: 2024-09-03 16:24 GMT

ಬೆಂಗಳೂರು : ಜನರೇಟೀವ್ ಎಐ ಮತ್ತು ಮುಂಚೂಣಿಗೆ ಬರುತ್ತಿರುವ ಆಧುನಿಕ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕೌಶಲಗಳನ್ನು ಕಲಿಸಲು ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಮೈಕ್ರೋಸಾಫ್ಟ್ ಕಂಪನಿಯು ಉತ್ಸುಕವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮೈಕ್ರೋಸಾಫ್ಟ್ ಕಂಪನಿಯ ಭಾರತ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಾಂದೋಕ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಅವರು ವಿಚಾರ ವಿನಿಮಯ ನಡೆಸಿದರು.

ಕರ್ನಾಟಕವನ್ನು ಭಾರತದ ಎಐ ತಂತ್ರಜ್ಞಾನದ ಪ್ರಮುಖ ತಾಣವನ್ನಾಗಿ ಮಾಡಲು ಮೈಕ್ರೋಸಾಫ್ಟ್ ಬಯಸಿದೆ. ಹೂಡಿಕೆದಾರರಿಗೆ ನೆರವು ನೀಡುವಂತಹ ಪ್ರಕ್ರಿಯೆಗಳಿಗೆ ಎಐ ತಂತ್ರಜ್ಞಾನವನ್ನು ಹೇಗೆ ಅನ್ವಯಿಸಬಹುದು ಮತ್ತು ಇದಕ್ಕೆ ಪರಿಣತರನ್ನು ಹೇಗೆ ತೊಡಗಿಸಬಹುದು ಎಂದು ಕಂಪನಿಯು ಚಿಂತಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಸರಕಾರವು ತಂತ್ರಜ್ಞಾನದ ಬಳಕೆಯ ಪರವಾಗಿದ್ದು, ಮೈಕ್ರೋಸಾಫ್ಟ್ ತರಹದ ದೈತ್ಯ ಕಂಪನಿಗಳು ಇದಕ್ಕೆ ಮುಂದಡಿ ಇಡಬೇಕು. ಮೊದಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಡಳಿತದಲ್ಲಿ ಎಐ ತಂತ್ರಜ್ಞಾನ ಅಳವಡಿಕೆ ಬಗ್ಗೆ ನೆರವಾಗಬಹುದು ಎಂದು ಎಂ.ಬಿ.ಪಾಟೀಲ್ ನುಡಿದರು.

ಫೆ.12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಸಕ್ರಿಯ ಪಾಲ್ಗೊಳ್ಳುವಿಕೆ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಮೈಕ್ರೋಸಾಫ್ಟ್ ಇಂಡಿಯಾದ ನಿಯೋಗದಲ್ಲಿ ಅದರ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಷ್, ಸ್ಟ್ರಾಟೆಜಿ ಹೆಡ್ ಶೀನು ಶೇಖರಿ, ಹಿರಿಯ ನಿರ್ದೇಶಕ ಅನೀಶ್ ಚಾಂಡಿ, ನಿರ್ದೇಶಕ ಸಂದೀಪ್ ಮಹಾಪಾತ್ರ ಮುಂತಾದವರು ಇದ್ದರು. ಸರಕಾರದ ಪ್ರತಿನಿಧಿಗಳಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News