ಅಧಿವೇಶನ | ತುರ್ತುಪರಿಸ್ಥಿತಿ, ‘ಗೂಂಡಾ’ ಗದ್ದಲ : ಕಲಾಪ ಮುಂದೂಡಿಕೆ

Update: 2024-07-23 17:06 GMT

ಬೆಂಗಳೂರು : ಬಿಜೆಪಿ ಸದಸ್ಯ ಹರೀಶ್ ಪೂಂಜ ಗೂಂಡಾ ಎಂದು ಆಡಳಿತ ಪಕ್ಷದ ಸದಸ್ಯ ಟಿ.ಡಿ.ರಾಜೇಗೌಡ ಅವರು ಕರೆದಿದ್ದು ಸದನದಲ್ಲಿ ಕೆಲ ತೀವ್ರ ಗದ್ದಲ, ಕೋಲಾಹಲಕ್ಕೆ ಕಾರಣವಾಗಿ, ಕಲಾಪವನ್ನೆ ಹತ್ತು ನಿಮಿಷಗಳ ಕಾಲ ಮುಂದೂಡಿಕೆ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಜರುಗಿತು.

ಮಂಗಳವಾರ ವಿಧಾನಸಭೆಯ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಿರುವ ಕುರಿತಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಯು.ಟಿ.ಖಾದರ್‌ಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಂವಿಧಾನ ಪರ ಯಾರು, ವಿರೋಧಿಗಳು ಯಾರೆಂಬ ಬಗ್ಗೆ ಎರಡು ಕಡೆಯವರಿಂದ ಆರೋಪ-ಪ್ರತ್ಯಾರೋಪ ನಡೆಯಿತು.

ಈ ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರರ ಪಾಲ್ಗೊಂಡರು. ಇದೇ ವೇಳೆ ತುರ್ತು ಪರಿಸ್ಥಿತಿ ಜಾರಿಗೊಳಿಸುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ಆರೋಪ ಮಾಡಿದರೆ, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಸದಸ್ಯರು ಟೀಕಿಸಿದರು.

ಬಳಿಕ ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ‘1975ನೆ ಸಾಲಿನಲ್ಲಿ ಗುಜರಾತ್‌ನಿಂದ ಕರ್ನಾಟಕದ ಕರಾವಳಿಯ ವರೆಗೆ ಸ್ಮಗ್ಲರ್‌ಗಳು ಆಳುತ್ತಿದ್ದರು. ಆದರೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕರೀಂ ಲಾಲ್, ಹಾಝಿ ಮಸ್ತಾನ್ ಸೇರಿದಂತೆ ಸ್ಮಗ್ಲರ್ ಗಳನ್ನು ಜೈಲಿಗೆ ಹಾಕಿದ್ದು ತುರ್ತುಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿ. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಸಾಧಕ-ಬಾಧಕ ಬಗ್ಗೆ ಚರ್ಚೆ ಆಗಲಿ’ ಎಂದು ನುಡಿದರು.

ಸ್ಪೀಕರ್ ಖಾದರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಆರಗ ಜ್ಞಾನೇಂದ್ರ, ‘ಸಂವಿಧಾನದ ಮೇಲೆ ಅತ್ಯಾಚಾರ ಮಾಡಿದ್ದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ. ಹಾಗಾಗಿ ಸಮರ್ಥನೆ ಮಾಡಬಾರದು. ನಾವು ಜೈಲಿನಲ್ಲಿ ಇದ್ದೆವು. ಸಾಮಾನ್ಯ ಜನರಿಗೆ ಕಿರುಕುಳ ಆಗಿದೆ. ಎಳೆದುಕೊಂಡು ಹೋಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದರು ಎಂದರು.

ಆರ್.ಅಶೋಕ್ ಮಾತನಾಡಿ, ‘ತಾವು ಆ ಸ್ಥಾನದಲ್ಲಿ ಕುಳಿತುಕೊಂಡು ಈ ಹೇಳಿಕೆ ಕೊಟ್ಟರೆ ಅದು ಸಮರ್ಥನೆ ಮಾಡಿದಂತೆ ಆಗುತ್ತದೆ. ಸ್ಪೀಕರ್ ಸ್ಥಾನದಿಂದ ಕೆಳಗಿಳಿದು ವಾದ-ವಿವಾದ ಮಾಡಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ವಿರೋಧ ಪಕ್ಷದಲ್ಲಿದ್ದು ಸಂವಿಧಾನ ಬಾಹಿರ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಬೇಕಲ್ಲ. ತುರ್ತುಪರಿಸ್ಥಿತಿ ಬಳಿಕವೂ ಇಂದಿರಾ ಗಾಂಧಿಯನ್ನು ಜನರು ಪ್ರಧಾನಿ ಮಾಡಿದರು. ನೀವು ಸಂವಿಧಾನ ಇರಲೇಬಾರದು ಎನ್ನುವವರು. ಇವಾಗ ಸಂವಿಧಾನದ ಬಗ್ಗೆ ಮಾತನಾಡುತ್ತೀರಾ? ನೀವು ಸಂವಿಧಾನದ ವಿರೋಧಿಗಳು ಎಂದು ತಿರುಗೇಟು ನೀಡಿದರು.

‘ಜನ ಸರಿಯಾದ ಬುದ್ಧಿ ಕಲಿಸಿದ್ದಾರೆ. ಅದಕ್ಕೆ ಇವಾಗ ಸುಮ್ಮನಿದ್ದೀರಿ. ಇಂದಿರಾಗಾಂಧಿ ವಿಚಾರ ಮಾತನಾಡಲು ಯಾವ ರೀತಿಯ ಯೋಗ್ಯತೆ ಇದೆ? ಅವರು ದೇಶಕ್ಕೆ ಪ್ರಾಣ ಕೊಟ್ಟವರು. ನಿಮ್ಮ ಕೈಯಿಂದ ಏನು ಮಾಡಲು ಆಗಲ್ಲ. ಜನ ನಿಮಗೆ ಬುದ್ಧಿ ಕಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯ ಟಿ.ಡಿ.ರಾಜೇಗೌಡ, ಬಿಜೆಪಿ ಸದಸ್ಯರನ್ನು ವಿರೋಧಿಸುವ ಭರದಲ್ಲಿ ಸದಸ್ಯ ‘ಹರೀಶ್ ಪೂಂಜ ಗೂಂಡಾ’ ಎಂದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ‘ರಾಜೂಗೌಡರು ಯಾವ ರೀತಿಯಲ್ಲಿ ಗೂಂಡಾ ಎನ್ನುತ್ತಾರೆ? ಎರಡು ಬಾರಿ ಶಾಸಕರಾದವರನ್ನು ಗೂಂಡಾ ಎನ್ನುತ್ತಾರೆ. ಅದಕ್ಕೆ ಕ್ಷಮೆ ಕೇಳಬೇಕು’ ಎಂದು ಪಟ್ಟುಹಿಡಿದರು.

ಗದ್ದಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಅವರು ಸದನವನ್ನು ಕೆಲ ಕಾಲ ಮುಂದೂಡಿದರು. ಆನಂತರ ಸದನ ಆರಂಭವಾಗುತ್ತಿದ್ದಂತೆ ‘ಗೂಂಡಾ ಪದ’ ಕಡತದಿಂದ ತೆಗೆಯಲಾಗುವುದು ಎಂದು ಪ್ರಕಟಿಸಿ, ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಗದ್ದಲಕ್ಕೆ ತೆರೆಬಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News