ಬೆಂಗಳೂರು | ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ: ಎಫ್ಐಆರ್ ದಾಖಲು
ಬೆಂಗಳೂರು : ಸಾಲದ ಹಣದ ಕಂತು ಪಡೆಯಲು ಹೋದ ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎ.1ರಂದು ನಾಗರಭಾವಿಯ 2ನೆ ಹಂತದಲ್ಲಿರುವ ಬಿಡಿಎ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಚಂದನ್ಎಂಬಾತನ ಮೇಲೆ ಕಲ್ಲುಗಳಿಂದ ಮಾರಣಾಂತಿಕವಾಗಿ ಹಲ್ಲೆಗೈದು, ಜೀವಬೆದರಿಕೆ ಹಾಕಲಾಗಿದೆ.ಹಲ್ಲೆಗೊಳಗಾದ ಚಂದನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನೀಡಿರುವ ದೂರಿನನ್ವಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಖರೀದಿಸಲು ಖಾಸಗಿ ಬ್ಯಾಂಕ್ನ ಮೂಲಕ ಸಾಲ ಪಡೆದಿದ್ದ ರಮೇಶ್, ಎರಡು ತಿಂಗಳಿಂದ ಇಎಂಐ ಪಾವತಿಸಿರಲಿಲ್ಲ. ಇಎಂಐ ಹಣ ವಸೂಲಿ ಮಾಡಲು ಬ್ಯಾಂಕ್ನ ಸಿಬ್ಬಂದಿ ಚಂದನ್ ರಮೇಶ್ ಮನೆ ಬಳಿ ತೆರಳಿದ್ದರು. ಈ ವೇಳೆ 'ಹಣ ಪಾವತಿ ಮಾಡಲ್ಲ' ಎಂದು ರಮೇಶ್ ಹೇಳಿದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಅದೇ ಸಂದರ್ಭದಲ್ಲಿ ಕೈ ಮತ್ತು ಕಲ್ಲುಗಳಿಂದ ತನ್ನ ಮೇಲೆ ಹಲ್ಲೆ ನಡೆಸಿರುವ ರಮೇಶ್, ಜೀವಬೆದರಿಕೆ ಹಾಕಿದ್ದಾರೆ ಎಂದು ಚಂದನ್ ದೂರಿದ್ದಾರೆ.