ಕೇಸರಿಶಾಲು ಹಾಕಿದರೆ ದೇಶಭಕ್ತಿ ಎನ್ನುವುದು ತಪ್ಪು ಕಲ್ಪನೆ: ಸಿಎಂ ಸಿದ್ದರಾಮಯ್ಯ

Update: 2024-02-29 15:03 GMT

ಬೆಂಗಳೂರು: ಬಿಜೆಪಿ ಶ್ರೀಮಂತರ ಪರವಾಗಿರುವ ಪಕ್ಷ. ಬಿಜೆಪಿಯವರು ಕೇಸರಿಶಾಲು ಹಾಕಿಕೊಂಡರೆ ದೇಶಭಕ್ತಿ ಬರುತ್ತದೆ ಎಂದುಕೊಂಡಿರುವುದು ತಪ್ಪು ಕಲ್ಪನೆ. ಇವರಿಗೆ ದೇಶದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಪರಿಷತ್ತಿನಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ನಮ್ಮ ಸರಕಾರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ರಾಜ್ಯದ ಜನರಿಗೆ ಶಕ್ತಿ ತುಂಬುವ ಸಲುವಾಗಿ ಜನಪರ, ಬಡವರ ಪರ ಬಜೆಟ್ ಮಂಡಿಸಿದೆ. ದೇಶದ ಪ್ರಧಾನಿಯವರು ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃಧ್ಧಿ ಕೆಲಸ ಕುಂಟಿತವಾಗುತ್ತವೆ ಎಂದು ಮೂದಲಿಸಿದ್ದರು ಎಂದರು.

ಭಾರತಕ್ಕೆ ಸ್ವಾತಂತ್ರ್ಯ ತಂದಿರುವುದು ಕಾಂಗ್ರೆಸ್ ಪಕ್ಷದವರು. 1942ನೆ ಸಾಲಿನಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುವಾಗ ಬಿಜೆಪಿಯವರು ಎಲ್ಲಿದ್ದರು. ಬಿಜೆಪಿಯವರು ಬ್ರಿಟಿಷರ ಜೊತೆಗೆ ಶಾಮೀಲು ಆಗಿದ್ದರು. ಇವರಿಗೆ ದೇಶದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿಲ್ಲ. ನಮ್ಮ ಹೋರಾಟವೇ ಬಿಜೆಪಿ ವಿರುದ್ಧ. ಕಾಂಗ್ರೆಸ್ ಪಕ್ಷ ಸಂವಿಧಾನ ತಂದುಕೊಟ್ಟ ಮೇಲೆ ಬಿಜೆಪಿಯವರು ಇಲ್ಲಿಗೆ ಬಂದಿದ್ದಾರೆ. ಬಿಜೆಪಿಯವರು ಬಡವರ, ದೀನದಲಿತರ, ಅಲ್ಪಸಂಖ್ಯಾಂತರ ಜನರ ದ್ವೇಷಿಗಳು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

‘ಸುಳ್ಳೇ ಬಿಜೆಪಿಯ ಮನೆ ದೇವರು’: ‘ಧರ್ಮ-ಜಾತಿ ಹೆಸರನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಯವರ ನಾಟಕವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರಿಗೆ ಜನರ ಆರ್ಶೀವಾದ ಮಾಡಿಲ್ಲ. ಹಿಂಬಾಗಿನಿಂದ ಬಂದು ಅಧಿಕಾರ ಮಾಡುವುದಕ್ಕೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಹಸಿವು ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಹೇಳುವುದನ್ನು ಬಿಟ್ಟು, ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಣೆ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News