ಬಸವಕಲ್ಯಾಣದ ನಗರಸಭೆ ಮಹಿಳಾ ಸಿಬ್ಬಂದಿ ಕೊಲೆ ಪ್ರಕರಣ; ಆರೋಪಿ ಬಂಧನ
Update: 2025-04-02 17:09 IST

ಬಂಧಿತ ಆರೋಪಿ
ಬೀದರ್ : ಬಸವಕಲ್ಯಾಣದ ನಗರಸಭೆಯ ಮಹಿಳಾ ಸಿಬ್ಬಂದಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪ್ರತಾಪುರ್ ಗ್ರಾಮದ ನಿವಾಸಿ ಸಂತೋಷ್ ಪವಾರ್ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಶನಿವಾರದಂದು ನಗರಸಭೆಯ ಸಿಬ್ಬಂದಿಯಾಗಿದ್ದ ನಗರದ ಶಾ ಹುಸೇನ್ ಗಲ್ಲಿಯ ನಿವಾಸಿ ರೇಷ್ಮಾ ಶೇಖ್ ಹೈದರ್ (34) ಎನ್ನುವ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಸವಕಲ್ಯಾಣ ನಗರಸಭೆಯಲ್ಲಿಯೇ ಆರೋಪಿ ಸಂತೋಷ್ ಕೂಡ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೊಲೆಯಾದ ರೇಷ್ಮಾಳ ಜೊತೆಗೆ ಈತನ ಅಕ್ರಮ ಸಂಬಂಧವಿತ್ತು. ಆಕೆಯು ಮದುವೆಗಾಗಿ ಒತ್ತಾಯಿಸಿದಾಗ ಮೊಬೈಲ್ ಚಾರ್ಜರ್ ವೈರ್ ನಿಂದ ಆಕೆಯ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬಸವಕಲ್ಯಾಣ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.