ಬೀದರ್ | ಶಿಕ್ಷಣ ಎಷ್ಟೇ ಕಲಿತರೂ ಉತ್ತಮ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ವ್ಯರ್ಥ : ವಿಜಯಕುಮಾರ್ ಬಾಬಣೆ

ಬೀದರ್ : ಶಿಕ್ಷಣ ಎಷ್ಟೇ ಕಲಿತರೂ ಸಹ ಉತ್ತಮ ಮಾನವೀಯ ಮೌಲ್ಯಗಳು ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆ ಎಂದು ಜ್ಞಾನ ದಾಸೋಹ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ಬಾಬಣೆ ತಿಳಿಸಿದರು.
ಇಂದು ಔರಾದ್ ತಾಲ್ಲೂಕಿನ ಜ್ಞಾನ ಭಾರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಮಾತೆಯರಿಂದ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮ, ವಿಜ್ಞಾನ ಮೇಳ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಜೊತೆಗೆ ನಾಗರಿಕತೆ ಮತ್ತು ಸಂಸ್ಕಾರ ಕಲಿಸುವುದು ತುಂಬಾ ಅಗತ್ಯವಾಗಿದೆ. ಪೋಷಕರು, ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಕಲಿಸಬೇಕಾಗಿದೆ. ಇತ್ತೀಚೆಗೆ ಮೊಬೈಲ್ ಎಂಬ ಮಾಯ ಕನ್ನಡಿ ಬಂದ ಬಳಿಕ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಲಿಯುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಡಾ.ಸುರೇಂದ್ರ ಅವರು ಮಾತನಾಡಿ, ಬಾಲ್ಯದಲ್ಲಿ ತಾಯಿ ನೀಡುವ ಕೈತುತ್ತು ಕೇವಲ ಆಹಾರವಲ್ಲ. ಅದರಲ್ಲಿ ಪ್ರೀತಿ, ವಾತ್ಸಲ್ಯ, ಅಂತಃಕರಣ, ಆನಂದ ಹಾಗೂ ಸದ್ಭಾವನೆ ಇರುತ್ತದೆ. ಅಮ್ಮನ ಕೈ ತುತ್ತು ಅಮೃತಕ್ಕೆ ಸಮವಾಗಿದೆ. ಅಮ್ಮನ ಉಪಕಾರ ತೀರಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಳ್ಳಬೇಕಾದರೆ ಪೋಷಕರ ಕಾಳಜಿ, ಜವಾಬ್ದಾರಿ ಮುಖ್ಯವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಬಿತ್ತಿದರು.
ಶಿಕ್ಷಕ ದೇವಿಪ್ರಸಾದ್ ಕಲಾಲ್, ಶಿಕ್ಷಕ ಮಹಮ್ಮದ್ ರಫಿ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಬಾಲಾಜಿ ಕುಂಬಾರ್, ಮಲ್ಲಪ್ಪಗೌಡ, ಸಂಸ್ಥೆಯ ಕಾರ್ಯದರ್ಶಿ ಗುರುನಾಥ ದೇಶಮುಖ, ಖಾಸಗಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಬಸವರಾಜ್ ಶೆಟಕಾರ್, ಸಂಜುಕುಮಾರ್ ಶೆಟಕಾರ್, ಜೈವಂತ್ ಉಜನಿ, ಲಕ್ಷ್ಮಿಕಾಂತ್ ಅಚಿಗಾಂವೆ, ಪ್ರಭುಸ್ವಾಮಿ, ಸಂಜು ಕಂಠಾಳೆ, ಭೀಮಾಶಂಕರ್ ಜೀರ್ಗೆ, ಸೂರ್ಯಕಾಂತ್, ಸುಧಾಕರ್ ಬಿರಾದಾರ್, ಸಂಜು ಬಿರಾದಾರ್ ಹಾಗೂ ಅನೀಲಕುಮಾರ್ ಸಿಂಧೆ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು.
