ಮಂಗಳೂರು | ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ; ಯುವಕ ಮೃತ್ಯು

Update: 2024-03-23 14:17 GMT

ಮಂಗಳೂರು: ನಗರದ ಪಂಪ್‌ವೆಲ್ ಬಳಿ ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ತೊಕ್ಕೊಟ್ಟುವಿನ ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್‌ರ ಮೊಮ್ಮಗ ಶಮಿತ್ ಶೆಟ್ಟಿ ಯಾನೆ ಬಂಟಿ (29) ಸಾವನ್ನಪ್ಪಿದ ಕಾರು ಚಾಲಕ.

ಶಮಿತ್ ಶುಕ್ರವಾರ ರಾತ್ರಿ ಬಜ್ಪೆಯಲ್ಲಿ ಸಂಬಂಧಿಕರ ಮನೆಯ ಕೋಲಕ್ಕೆ ಹೋಗಿದ್ದು, ಅಲ್ಲಿಂದ ತೊಕ್ಕೊಟ್ಟುವಿನ ತನ್ನ ಮನೆಗೆ ಕಾರಿನಲ್ಲಿ ಮರಳುತ್ತಿದ್ದರು. ಅತೀ ವೇಗದಿಂದ ಚಲಿಸುತ್ತಿದ್ದ ಕಾರು ಶಮಿತ್‌ನ ನಿಯಂತ್ರಣ ತಪ್ಪಿ ಏಕಾಏಕಿ ಡಿವೈಡರ್‌ಗೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಡಿವೈಡರ್‌ಗೆ ಹಾಕಿದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಹೆದ್ದಾರಿಯ ಡಿವೈಡರ್‌ಗೆ ಏರಿದ ಕಾರನ್ನು ಶನಿವಾರ ಬೆಳಗ್ಗೆ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಶಮಿತ್ ಶೆಟ್ಟಿ ಉಳ್ಳಾಲ ನಗರ ಸಭೆಯ ನಾಮನಿರ್ದೇಶಿತ ಕೌನ್ಸಿಲರ್ ಲಲಿತ್ ಸುಂದರ್‌ರ ಮೊಮ್ಮಗನಾಗಿದ್ದು, ಎಂಬಿಎ ಪದವೀಧರ. ದೇರಳಕಟ್ಟೆಯ ಕುಕ್ಕುದಕಟ್ಟೆ ಎಂಬಲ್ಲಿ ದ್ವಿಚಕ್ರ ವಾಹನದ ಶೋ ರೂಂ ಹೊಂದಿದ್ದರು. ಮಂಗಳೂರು ಮಂಡಲ ಬಿಜೆಪಿ ಯುವ ಮೋರ್ಚಾ ಮಾಜಿ ಉಪಾಧ್ಯಕ್ಷರೂ ಆಗಿದ್ದ ಶಮಿತ್‌ರ ತಂದೆ ಸಂತೋಷ್ ಯಾನೆ ಸಂತು ಕೆಲವು ವರ್ಷದ ಹಿಂದೆ ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News