ಮಂಗಳೂರು | ಫುಟ್ಬಾಲ್ ಪಂದ್ಯದ ವಿವಾದ: ವಿದ್ಯಾರ್ಥಿಗಳನ್ನು ಅಪಹರಿಸಿ, ಹಲ್ಲೆ

Update: 2024-08-20 07:21 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಆ.20: ನಗರದ ನೆಹರೂ ಮೈದಾನದಲ್ಲಿ ಇತ್ತೀಚೆಗೆ ಫುಟ್ಬಾಲ್ ಪಂದ್ಯದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ತಂಡವೊಂದು ಮೂವರು ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆಗೈದಿರುವ ಘಟನೆ ಸೋಮವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಮಂಗಳೂರಿನ ಎರಡು ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಈ ಘಟನೆ ನಡೆದಿದೆ.

ದಿಯಾನ್, ತಸ್ಲೀಮ್, ಸಲ್ಮಾನ್ ಎಂಬವರ ಸಹಿತ ಅಪ್ರಾಪ್ತ ವಯಸ್ಸಿನ ಇನ್ನಿಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಜಪ್ಪು ಮಹಾಕಾಳಿ ಪಡ್ಪು ಬಳಿ ಹಲ್ಲೆ ನಡೆಸಲಾಗಿದೆ.

ಯದ್ವಾತದ್ವಾ ಹೊಡೆದು ಸಿಗರೇಟ್ನಿಂದ ಸುಟ್ಟು ಹಲ್ಲೆಗೈದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಗರದ ಎರಡು ಕಡೆ ಕರೆದೊಯ್ದು ವಿದ್ಯಾರ್ಥಿಗಳ ಬಟ್ಟೆಬಿಚ್ಚಿ, ಬಸ್ಕಿ ತೆಗೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗಾಯಾಳು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯ ವೀಡಿಯೊ ವೈರಲ್ ಆದೊಡನೆ ಪೊಲೀಸರು ತನಿಖೆ ಕೈಗೆತ್ತಿಕೊಂಡು ಇಬ್ಬರನ್ನು ಬಂಧಿಸಿ ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News