ಬಿಸಿಲ ಧಗೆಯಿಂದ ರಕ್ಷಣೆ ಹೇಗೆ?

ಬಿಸಿಲಿನ ಬೇಗೆಯಲ್ಲಿ ಬಳಲಿ ಬೆಂಡಾಗಿ ಬಸವಳಿದು ಬಿದ್ದವರ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿ ಈಗ ಜನತೆ ಬೆಚ್ಚಿ ಬೀಳುವಂತಾಗಿದೆ. ಇದಕ್ಕೆ ಬಿಸಿಗಾಳಿಯೂ ಕಾರಣವೆನ್ನಲಾಗುತ್ತಿದೆ.
ಬಿಸಿಗಾಳಿ ಎಂದರೇನು?
ಉಷ್ಣಾಂಶ ಸಹಿಸಿಕೊಳ್ಳುವ ಮಿತಿಯನ್ನು ಮೀರಿದ ಅಸಾಮಾನ್ಯ ಉಷ್ಣವಾತಾವರಣಕ್ಕೆ ಬಿಸಿಗಾಳಿ (Heat wave) ಎನ್ನುತ್ತಾರೆ. ಸಾಮಾನ್ಯವಾಗಿ ಎರಡು ದಿನಗಳವರೆಗಿದ್ದು, ಅಪರೂಪಕ್ಕೆ ತಿಂಗಳವರೆಗೂ ವಿಸ್ತಾರಗೊಳ್ಳಬಹುದಾಗಿದೆ. ಇನ್ನೊಂದು ವ್ಯಾಖ್ಯಾನದ ಪ್ರಕಾರ, ಐದು ದಿನಗಳ ನಿರಂತರ ಉಷ್ಣಾಂಶ ಸಾಮಾನ್ಯ ಸರಾಸರಿ ಉಷ್ಣಾಂಶಕ್ಕಿಂತ 5 ಡಿಗ್ರಿ ಸೆಂಟಿಗ್ರೇಡ್ ಹೆಚ್ಚಾಗಿದ್ದರೆ ಅದಕ್ಕೆ ಬಿಸಿಗಾಳಿ ಎನ್ನುತ್ತಾರೆ. ಉಷ್ಣಾಂಶ ಸಹಿಸಿಕೊಳ್ಳುವ ಮಿತಿ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಯುರೋಪ್ ರಾಷ್ಟ್ರಗಳಲ್ಲಿ ಇದು 250 ಸೆಂಟಿಗ್ರೇಡ್ಗೆ ಸೀಮಿತವಾಗಿದ್ದರೆ, ಅಮೆರಿಕದಲ್ಲಿ 32.20 ಸೆಂ. ಇರುತ್ತದೆ. ಕ್ಯಾಲಿಫೋರ್ನಿಯಾದಲ್ಲಿ 37.80 ಸೆಂ. ಮತ್ತು ದಕ್ಷಿಣ ಆಫ್ರಿಕಾದಲ್ಲಿ 350 ಸೆಂ. ನಮ್ಮ ದೇಶದಲ್ಲಿ 400 ಸೆಂ. ಇರುತ್ತದೆ.
ಬಿಸಿಗಾಳಿ ಬೇಗೆಯ ಬಗೆಗಳು
ಬಿಸಿಗಾಳಿಯಿಂದ ಬಿಸಿಲಿನ ಬಳಲಿಕೆ, ಸೂರ್ಯಾಘಾತ- ಉಷ್ಣಾಘಾತ, ಸ್ನಾಯು ಸೆಳೆತ, ಚರ್ಮದ ದದ್ದುಗಳು ಕಂಡು ಬರುತ್ತವೆ. ಇವುಗಳಿಂದ ರಕ್ಷಿಸಿಕೊಳ್ಳಬೇಕು. ಅಲಕ್ಷಿಸಿದರೆ ಅನಾಹುತಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಬಗ್ಗೆ ಸಾಮೂಹಿಕ ಜನಜಾಗೃತಿ ಮೂಡಿಸುವುದು ಅವಶ್ಯಕ.
ಬಿಸಿ ಮತ್ತು ಆರ್ದ್ರತೆಯ ವಾತಾವರಣದಲ್ಲಿ ಜನರು ದೀರ್ಘಕಾಲಿಕವಾಗಿ ಇದ್ದರೆ ಬಿಸಿಲಿನ ಬಳಲಿಕೆಗೆ ಈಡಾಗಬಹುದು. ಇಲ್ಲಿ ವ್ಯಕ್ತಿ ಅಶಕ್ತತೆಯಿಂದ ಜೋಲಿ ಹೊಡೆಯಬಹುದು. ಮುಖ ಬಿಳುಚಿಕೊಳ್ಳಬಹುದು. ಉಸಿರುಗಟ್ಟಿದ ವಾತಾವರಣದ ಬಿಸಿ ಕೋಣೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಇದಕ್ಕೆ ತುತ್ತಾಗುವ ಸಂಭವ ಹೆಚ್ಚು.
ಸೂರ್ಯನ ಪ್ರಖರ ಕಿರಣಗಳಿಗೆ ದೀರ್ಘಕಾಲದವರೆಗೆ ಮೈಯೊಡ್ಡುವುದರಿಂದ ಸೂರ್ಯಾಘಾತ ಸಂಭವಿಸುತ್ತದೆ. ಅತ್ಯಂತ ಉಷ್ಣ ವಾತಾವರಣದ ಕೋಣೆಯಲ್ಲಿ ಕೆಲಸ ಮಾಡುವವರಿಗೆ ಉಷ್ಣಾಘಾತ ಸಂಭವಿಸಬಹುದು.
ಸಿಡಿಯುವಂತಹ ತಲೆನೋವು, ವಿಪರೀತ ಜ್ವರ ಸೂರ್ಯಾ ಘಾತದ ಮುಖ್ಯ ಲಕ್ಷಣ. ತಲೆ ಸುತ್ತು, ವಾಂತಿ ಆಗಬಹುದು. ಚರ್ಮ ಬಿಸಿಯಾಗಿದ್ದು ಒಣಗುವುದು. ಮುಖ ಕೆಂಪಾಗಬಹುದು. ಹೊಟ್ಟೆಯಲ್ಲಿ ಕಿಚ್ಚು ತುಂಬಿದಷ್ಟು ಸಂಕಟವಾಗುವುದು. ಚಡಪಡಿಸಿ ಒಮ್ಮಿಂದೊಮ್ಮೆಲೇ ಪ್ರಜ್ಞಾಹೀನರಾಗಬಹುದು.
ಬಿಸಿಗಾಳಿ ಹಾವಳಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವುದೆಂದು ಹಮಾವಾನ ತಜ್ಞರು ಹೇಳುತ್ತಾರೆ. ಬಿಸಿಗಾಳಿಗೆ ಹೆಚ್ಚು ಸಿಲುಕುವವರು ನಿರ್ಜಲೀಕರಣದಿಂದ ನಿಸ್ತೇಜಿತರಾಗುವುರಲ್ಲದೆ, ಹಲವಾರು ಆರೋಗ್ಯದ ಸಮಸ್ಯೆಗಳು ಕಾಡಬಹುದು. ಮೂತ್ರಪಿಂಡದ ಮೇಲೆ ಮಾರಕ ಪರಿಣಾಮ, ಹೃದಯ ಸಂಬಂಧಿ ಮತ್ತು ಉಸಿರಾಟ ಮಂಡಲದ ರೋಗಗಳು ಉಲ್ಬಣಗೊಳ್ಳಬಹುದು.
ಅಪಾಯದ ಅಂಚಿನಲ್ಲಿರುವವರು
1. ಹಿರಿಯ ನಾಗರಿಕರು, ಆದರಲ್ಲೂ 75 ವರ್ಷಕ್ಕಿಂತ ಮೇಲ್ಪಟ್ಟವರು, ಮಹಿಳೆಯರು ಮತ್ತು ಮಕ್ಕಳು.
2.ದೀರ್ಘಕಾಲಿಕ ಕಾಯಿಲೆಗಳ ಕರಿನೆರಳಿನಲ್ಲಿ ಇರುವವರು- ಹೃದ್ರೋಗ ಮತ್ತು ಉಸಿರಾಟ ತೊಂದರೆಗಳಿಂದ ಬಳಲುತ್ತಿರು ವವರು, ಮಾನಸಿಕ ಸಮಸ್ಯೆ, ಡಯಾಬಿಟಿಸ್, ಮೂತ್ರಪಿಂಡದ ಕಾಯಿಲೆ, ಪಾರ್ಕಿನ್ಸನ್ ಕಾಯಿಲೆಗಳ ಕಪಿ ಮುಷ್ಟಿಯಲ್ಲಿರುವವರು.
3. ಬಹಳಷ್ಟು ಔಷಧಿ ಸೇವಿಸುತ್ತಿರುವವರು, ಮಾದಕ ವಸ್ತುಗಳ ವ್ಯಸನಿಗಳು, ಮದ್ಯಪಾನ ಮಾಡುವವರು, ಅಲ್ಝೀಮರ್ಸ್ನಿಂದ ಬಳಲುವವರು, ಬಹಳಷ್ಟು ಸಮಯ ಮನೆಯ ಹೊರಗಿದ್ದು ಸುಡು ಬಿಸಿಲಿನಲ್ಲಿ ದುಡಿಯುವವರು, ನಿರ್ಗತಿಕರು ಇತ್ಯಾದಿ...
ಮುಂಜಾಗ್ರತಾ ಕ್ರಮಗಳು
ಬಿರುಬಿಸಿಲಿನಲ್ಲಿ ಅಡ್ಡಾಡದೇ ಇರುವುದು ಕ್ಷೇಮಕರ. ಅನಿವಾರ್ಯವಾಗಿ ಹೊರಗೆ ಹೋಗಬೇಕಾದವರು ತಲೆಗೆ ಟೋಪಿ ಧರಿಸಬೇಕು ಅಥವಾ ಛತ್ರಿಯನ್ನು ಬಳಸಬೇಕು.
ಬಿರುಬೇಸಿಗೆ ವೇಳೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ, ದಣಿವಾಗುವ ವ್ಯಾಯಾಮಗಳಿಗೆ ಕಡಿವಾಣಹಾಕಬೇಕು. ಜನನಿಬಿಡ ಪ್ರದೇಶಗಳಲ್ಲಿ, ಉಸಿರು ಕಟ್ಟಿಸುವ ಬಿಸಿ ಹವೆಯ ಕೋಣೆಯಲ್ಲಿ ವಾಸಿಸಬಾರದು. ಯಥೇಚ್ಛ ಭೋಜನ, ಮದ್ಯಪಾನ ಮಾಡುವುದು ಒಳ್ಳೆಯದಲ್ಲ. ಸುಲಭವಾಗಿ ಜೀರ್ಣವಾಗುವ ಆಹಾರ ಸೇವನೆ ಉತ್ತಮ. ಬಿಸಿಲಲ್ಲಿ ಅಡ್ಡಾಡುವವರು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕು. ಲಸ್ಸೀ, ಅಕ್ಕಿಗಂಜಿ, ಪಾನಕ, ಮಜ್ಜಿಗೆ, ಎಳನೀರು ಇತ್ಯಾದಿ ದ್ರವ ಆಹಾರ ಸಾಕಷ್ಟು ಸೇವಿಸಿ. ಬಿಸಿಗಾಳಿಯ ಕಾಲದಲ್ಲಿ ವಯೋವೃದ್ಧರು, ಮಕ್ಕಳು, ಹೃದ್ರೋಗಿಗಳು, ಉಸಿರಾಟದ ತೊಂದರೆಯವರು ತಲ್ಲಣಗೊಳ್ಳುವುದು ಸರ್ವೇಸಾಮಾನ್ಯ. ಇವರಿಗೆ ವಿಶೇಷ ಕಾಳಜಿ ಅಗತ್ಯ. ಹಸುಗೂಸು, ಮಕ್ಕಳ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳದಂತೆ ನೋಡಿಕೊಳ್ಳಿ.
ಬಾಗಿಲು ಮುಚ್ಚಿದ ಕಾರು ಮತ್ತು ವಾಹನಗಳಲ್ಲಿ ಮಕ್ಕಳನ್ನು ಮತ್ತು ಸಾಕು ಪ್ರಾಣಿಗಳನ್ನು ಬಿಡಬಾರದು. ಬವಳಿ ಬಂದಂತಾದರೆ ತಕ್ಷಣ ವೈದ್ಯರನ್ನು ಕಾಣಬೇಕು. ಬೇಸಿಗೆಯ ಕಾಲದಲ್ಲಿ ಸಡಿಲವಾಗಿರುವ ಹತ್ತಿ ಬಟ್ಟೆಗಳನ್ನು ತೊಡುವುದು ಉತ್ತಮ. ಪಾಲಿಸ್ಟರ್ ಬಟ್ಟೆಗಳು ರಂಧ್ರರಹಿತವಾಗಿರುವುದರಿಂದ ಗಾಳಿ ಸಂಚಾರವಿಲ್ಲದೆ, ಮೈಗೆ ಅಂಟಿಕೊಂಡಂತಾಗಿ ಸೆಕೆ ಹೆಚ್ಚಾಗಿ ಹಿಂಸೆಯಾಗುತ್ತದೆ. ತಣ್ಣನೆಯ ನೀರಿನಿಂದ ಮೇಲಿಂದ ಮೇಲೆ ಸ್ನಾನ ಮಾಡಿ.
ಒಆರ್ಎಸ್ ಪ್ಯಾಕೆಟ್ಗಳು ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ, ಉಪಕೇಂದ್ರಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪುಕ್ಕಟೆಯಾಗಿ ಸಿಗುತ್ತವೆ. ಅವುಗಳ ಉಪಯೋಗ ಮಾಡಿಕೊಳ್ಳಿ. ಸಿಗದಿದ್ದರೆ ಮನೆಯಲ್ಲಿಯೂ ಇದನ್ನು ತಯಾರಿಸಬಹುದು. ಎಲ್ಲರ ಮನೆಯಲ್ಲಿ ಸರ್ವೇಸಾಮಾನ್ಯವಾಗಿ ಸಿಗುವ ಸಾಮಗ್ರಿಗಳಾದ ಚಿಟಿಕೆ ಉಪ್ಪು, ಅಡಿಗೆ ಸೋಡಾ, ಸಕ್ಕರೆ ಮತ್ತು ನಿಂಬೆಹಣ್ಣನ್ನು ಕುದಿಸಿ, ಆರಿಸಿದ ನೀರಿಗೆ ಬೆರೆಸಿಕೊಂಡು ‘ಜೀವಜಲ’ವನ್ನು ಸುಲಭವಾಗಿಯೇ ಕಡಿಮೆ ಖರ್ಚಿನಲ್ಲಿಯೇ ತಯಾರಿಸಬಹುದು. ಹೀಗೆ ತಯಾರಿಸಿದ ಜೀವಜಲವನ್ನು 24 ಗಂಟೆಗಳಲ್ಲಿಯೇ ಉಪಯೋಗಿಸಬೇಕು. ಒಮ್ಮೆ ತಯಾರಿಸಿದ ದ್ರಾವಣವನ್ನು ಮತ್ತೆ ಕಾಯಿಸಬಾರದು. ದ್ರಾವಣವನ್ನು ತಯಾರಿಸುವಾಗ ಶುಚಿತ್ವದ ಕಡೆಗೆ ಹೆಚ್ಚು ಗಮನ ಕೊಡಬೇಕು.