ಹೆಲಿಕಾಪ್ಟರ್‌ ದುರಂತದಲ್ಲಿ ಇರಾನ್‌ ಅಧ್ಯಕ್ಷರ ಸಾವಿನ ನಂತರ ಹುಟ್ಟಿವೆ ಹಲವು ಪ್ರಶ್ನೆಗಳು...

Update: 2024-05-20 08:10 GMT

ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ (PTI)

ಟೆಹ್ರಾನ್: ಇರಾನ್‌ ಅಧ್ಯಕ್ಷ ಇಬ್ರಾಹಿಂ ರಯೀಸಿ, ದೇಶದ ವಿದೇಶ ಸಚಿವ ಸಹಿತ ಹಲವು ಅಧಿಕಾರಿಗಳು ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಘಟನೆಯು ಆಘಾತ ಸೃಷ್ಟಿಸಿರುವ ನಡುವೆ ಇದೊಂದು ಅಪಘಾತವೇ ಅಥವಾ ಈ ದುರ್ಘಟನೆಯ ಹಿಂದೆ ಇಸ್ರೇಲ್‌ ಕೈವಾಡವಿರಬಹುದೇ ಎಂಬ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ.

ಸದ್ಯದ ಮಟ್ಟಿಗೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಾಗೂ ಹೆಲಿಕಾಪ್ಟರ್‌ ಹಾರಾಟ ನಡೆಸಿದ ಪರ್ವತ ಪ್ರದೇಶದಲ್ಲಿ ಆವೃತವಾಗಿದ್ದ ದಟ್ಟ ಮಂಜಿನಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆಯಾದರೂ ಈ ದುರ್ಘಟನೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ.

ರಯೀಸಿ ಅವರ ವಿವಾದಾತ್ಮಕ ಅಧಿಕಾರಾವಧಿ, ಇರಾನ್‌ ಎದುರಿಸುತ್ತಿರುವ ಆಂತರಿಕ ಹಾಗೂ ಬಾಹ್ಯ ಸವಾಲುಗಳು ಹಾಗೂ ದೇಶದೊಳಗಿನ ವೈರಿಗಳು ಅಥವಾ ಇಸ್ರೇಲ್‌ನಂತಹ ಬಾಹ್ಯ ವೈರಿಗಳ ಕೈವಾಡ ಇರಬಹುದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಇರಾನ್‌ ಮತ್ತು ಇಸ್ರೇಲ್‌ ನಡುವೆ ದೀರ್ಘ ಕಾಲದಿಂದ ವೈರತ್ವ ಇರುವುದರಿಂದ ಈ ಹೆಲಿಕಾಪ್ಟರ್‌ ಪತನದ ಹಿಂದೆ ಇಸ್ರೇಲ್‌ ಇರಬಹುದೆಂದು ಕೆಲ ಇರಾನ್‌ ನಾಗರಿಕರು ಶಂಕಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇರಾನ್‌ನ ಜನರಲ್‌ ಒಬ್ಬರನ್ನು ಡಮಾಸ್ಕಸ್‌ನಲ್ಲಿ ಇಸ್ರೇಲ್‌ ಹತ್ಯೆಗೈದಿರುವುದು ಹಾಗೂ ಇದರ ಬೆನ್ನಲ್ಲೇ ಇಸ್ರೇಲ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿರುವ ಬೆಳವಣಿಗೆಗಳತ್ತ ಹಲವರು ಬೊಟ್ಟು ಮಾಡುತ್ತಾರೆ.

ಇಸ್ರೇಲ್‌ನ ಗುಪ್ತಚರ ಏಜನ್ಸಿ ಮೊಸ್ಸಾದ್‌ ಇರಾನ್‌ ಹಿತಾಸಕ್ತಿಗಳನ್ನು ಗುರಿಯಾಗಿಸಿದೆಯಾದರೂ ದೇಶದ ಮುಖ್ಯಸ್ಥರೊಬ್ಬರನ್ನು ಇಲ್ಲಿಯ ತನಕ ಗುರಿಯಾಗಿಸಿಲ್ಲ.

ಆದರೆ ಇಸ್ರೇಲ್‌ ಶಾಮೀಲಾತಿ ಇರಲಿಕ್ಕಿಲ್ಲ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ. ದೇಶದ ಮುಖ್ಯಸ್ಥರೊಬ್ಬರನ್ನು ಹತ್ಯೆಗೈಯ್ಯುವುದು ಯುದ್ಧಕ್ಕೆ ಪ್ರಚೋದಿಸಿದಂತೆ ಎಂದು ಅವರು ಹೇಳುತ್ತಾರೆ.

ಆದರೆ ಈ ದುರ್ಘಟನೆ ಸಂಭವಿಸಿದ ಸಮಯ ಹಾಗೂ ಲೆಬನಾನ್‌, ಸಿರಿಯಾ, ಇರಾಕ್‌, ಯೆಮೆನ್‌ ದೇಶಗಳಲ್ಲಿ ಇರಾನ್‌ನ ಪ್ರಾಕ್ಸಿ ಜಾಲ ಹಾಗೂ ಹಮಾಸ್‌ ಜೊತೆಗಿನ ಇಸ್ರೇಲ್‌ ಯುದ್ಧ ಪರಿಸ್ಥಿತಿಗಳನ್ನು ಕ್ಲಿಷ್ಟಕರವಾಗಿಸಿದೆ. ಇರಾನ್‌ನ ನಾಯಕತ್ವ ವಿಚಾರದಲ್ಲಿ ಅಸ್ಥಿರತೆಯು ಅದರ ಬೆಂಬಲ ಗುಂಪುಗಳನ್ನು ಪ್ರಚೋದಿಸಿ, ಇನ್ನಷ್ಟು ಸಂಘರ್ಷಮಯ ಸ್ಥಿತಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News