ಮ್ಯಾನ್ಮಾರ್ನ ಸೈಬರ್ ವಂಚಕ ಕಾಲ್ ಸೆಂಟರ್ಗಳಿಂದ 60ಕ್ಕೂ ಅಧಿಕ ಭಾರತೀಯರ ರಕ್ಷಣೆ; ಐವರು ಏಜೆಂಟರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಪಾಟ್ನಾ: ಮ್ಯಾನ್ಮಾರ್ನ ಸೈಬರ್ ವಂಚಕ ಕಾಲ್ ಸೆಂಟರ್ಗಳಲ್ಲಿ ಕೆಲಸ ಮಾಡುವ ಬಲವಂತಕ್ಕೆ ಒಳಗಾದ 60ಕ್ಕೂ ಅಧಿಕ ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಓರ್ವ ವಿದೇಶಿ ಪ್ರಜೆ ಸೇರಿದಂತೆ ಐವರು ಏಜೆಂಟರನ್ನು ಬಂಧಿಸಲಾಗಿದೆ. ಈ ವಿಷಯದ ಕುರಿತಂತೆ 3 ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಾಲ್ಯಾಂಡ್ ಹಾಗೂ ಇತರ ಪೂರ್ವ ಏಷ್ಯಾದ ರಾಷ್ಟ್ರಗಳಲ್ಲಿ ಅತ್ಯಧಿಕ ವೇತನದ ಉದ್ಯೋಗದ ಭರವಸೆ ನೀಡಿ ಏಜೆಂಟರು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಆಕರ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಪಾಸ್ಪೋರ್ಟ್ಗಳು ಹಾಗೂ ವಿಮಾನಗಳನ್ನು ವ್ಯವಸ್ಥೆ ಮಾಡಿದ್ದಾರೆ. ಅನಂತರ ಜನರನ್ನು ಟೂರಿಸ್ಟ್ ವಿಸಾದಲ್ಲಿ ಥಾಯ್ಲ್ಯಾಂಡ್ ಗೆ ಕಳುಹಿಸಿದ್ದಾರೆ. ಅಲ್ಲಿಗೆ ತಲುಪಿದ ಬಳಿಕ ಅವರನ್ನು ಥಾಯ್-ಮ್ಯಾನ್ಮಾರ್ ಗಡಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘‘ಅಲ್ಲಿಂದ ಅವರನ್ನು ಸಣ್ಣ ದೋಣಿಗಳಲ್ಲಿ ನದಿ ದಾಟಿಸಿ ಮ್ಯಾನ್ಮಾರ್ ಗೆ ಕಳುಹಿಸಿ ಕೊಡಲಾಯಿತು. ಅನಂತರ ಅವರನ್ನು ಶಸಸ್ತ್ರ ಗುಂಪುಗಳು ನಿಯಂತ್ರಿಸುವ ಭಾರೀ ಭದ್ರತೆಯ ಆವರಣದ ಒಳಗೆ ಇರಿಸಲಾಯಿತು’’ ಎಂದು ಮಹಾರಾಷ್ಟ್ರ ಸೈಬರ್ ಪೊಲೀಸ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಂಪೌಂಡಿನ ಒಳಗೆ ಒಂದು ವರ್ಷದ ಗುತ್ತಿಗೆಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ಅಲ್ಲದೆ, ಅವರನ್ನು ನಕಲಿ ಹೂಡಿಕೆ ಯೋಜನೆಗಳಿಂದ ಡಿಜಿಟಲ್ ಅರೆಸ್ಟ್ ವರೆಗೆ ಸೈಬರ್ ವಂಚನೆಯಲ್ಲಿ ತೊಡಗಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಮನೀಷ್ ಗ್ರೇ ಆಲಿಯಾಸ್ ಮಡ್ಡಿ, ತೈಸನ್ ಆಲಿಯಾಸ್ ಆದಿತ್ಯ ರವಿ ಚಂದ್ರನ್, ರೂಪನಾರಾಯಣ್ ರಾಮ್ದಾರ್ ಗುಪ್ತಾ, ಝಾನ್ಸಿ ರಾಣಿ ಡಿ ಹಾಗೂ ಚೀನಾ-ಕಝಕಿಸ್ತಾನದ ಪ್ರಜೆ ಟಾಲಾನಿಟಿ ನ್ಯುಲಾಕ್ಸಿ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ