ರಾಜ್ಯದ ಜನರ ಅರ್ಥಿಕ, ಸಾಮಾಜಿಕ ಭದ್ರತೆ ಹಾಗೂ ಸ್ವಾಭಿಮಾನದ ಬದುಕಿಗಾಗಿ ಗ್ಯಾರಂಟಿ ಯೋಜನೆಗಳ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ

Update: 2024-03-30 16:50 GMT

ಕಲಬುರಗಿ : ರಾಜ್ಯದ ಜನರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಹಾಗೂ ಸ್ವಾಭಿಮಾನದ ಬದುಕು ನಿರ್ಮಿಸುವ ಉದ್ದೇಶದಿಂದ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುಮಠಕಲ್ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರ ಮತಯಾಚಿಸಿ ಮಾತನಾಡುತ್ತಿದ್ದರು.

ರಾಜ್ಯದಲ್ಲಿ1.50 ಕೋಟಿ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ಸಿಗುತ್ತಿದೆ. 4.30 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ 65 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಯುವನಿಧಿ ಯೋಜನೆಯಡಿಯಲ್ಲಿ 1.30 ಕೋಟಿ ಯುವಕರಿಗೆ ಲಾಭ ಸಿಗುತ್ತಿದೆ. ರಾಜ್ಯದ 6.50 ಕೋಟಿ ಜನರಲ್ಲಿ ಅಂದಾಜು 4.80 ಕೋಟಿ ಜನರು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ವಾರ್ಷಿಕ 52,000 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ. ಇಂತಹ ಜನ ಪರ ಯೋಜನೆಗಳನ್ನು ಬಿಜೆಪಿಗರು ಬಿಟ್ಟಿ ಭ್ಯಾಗ್ಯ ಎಂದು ಟೀಕಿಸುತ್ತಿದ್ದಾರೆ. ನಾವು ನಿಮ್ಮ ದುಡ್ಡನ್ನು ನಿಮಗೆ ವಾಪಸ್ ಕೊಡಬೇಕು ಎಂದು ಈ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ, ಬಿಜೆಪಿ ಸರಕಾರ ಅಧಿಕಾರಲ್ಲಿದ್ದಾಗ ನಿಮ್ಮ ದುಡ್ಡನ್ನು ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಮೇಶ್ ಜಾಧವ ಕಲಬುರಗಿ ಸಂಸದರಲ್ಲ. ಅವರೇನಿದ್ದರೂ ಚಿಂಚೋಳಿ ಎಂಪಿ. ನಮ್ಮ ಪಕ್ಷವನ್ನು ಹಾಗೂ ನಾಯಕರನ್ನು ಟೀಕಿಸುವಾಗ ಮಾತ್ರ ಅವರು ಬಾಯಿ ತೆಗೆಯುತ್ತಾರೆ. ಆದರೆ ಅಭಿವೃದ್ದಿ ವಿಚಾರ ಬಂದಾಗ ಮೌನವಾಗಿರುತ್ತಾರೆ. ಹಾಗಾಗಿ ಕಲಬುರಗಿ ಹಾಗೂ ಗುರುಮಠಕಲ್ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದರು.

ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. 40 ಲಕ್ಷ ಹೆಕ್ಟರ್ ಬೆಳೆ ಹಾನಿಯಾಗಿದೆ. 18171 ಕೋಟಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಅನುದಾನ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸರಕಾರ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಅರ್ಧಪಾಲು ರಾಜ್ಯ ಸರಕಾರದ್ದೂ ಇದೆ. ಆದರೆ, ಕೇಂದ್ರ ಸರಕಾರ ಇವುಗಳನ್ನು ತನ್ನದೇ ಗ್ಯಾರಂಟಿ ಎಂದು ಬಿಂಬಿಸುತ್ತಿದೆ ಎಂದು ಕುಟುಕಿದರು.

ಕಲಬುರಗಿ ಅಭ್ಯರ್ಥಿ ರಾಧಾಕೃಷ್ಣ ಅವರು ಮಾತನಾಡಿ, ಗುರುಮಠಕಲ್ ಪಟ್ಟಣದಲ್ಲಿ ಭವ್ಯ ಸ್ವಾಗತ ನೀಡಿದ್ದೀರಿ. ಈ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಖರ್ಗೆ ಸಾಹೇಬರು ವಿಧಾನಸಭೆ ಸತತ ಎಂಟು ಸಲ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಜಗನ್ನಾಥ್ ರಾವ್ ಚಂಡ್ರಕಿ ಹಾಗೂ ಕೋಯಿಲೂರು ಮಲ್ಲಪ್ಪ ಅವರಂತವರು ಇಲ್ಲಿ ಸಂಸದರಾಗಿ ಆಯ್ಕೆ‌ಯಾಗಿ ಹೋಗಿದ್ದಾರೆ. ಈ ಸಲ ನನಗೆ ಅವಕಾಶ ಸಿಕ್ಕಿದೆ. ಹಾಗಾಗಿ ಅತ್ಯಂತ ಹೆಚ್ಚಿನ ಲೀಡ್ ತಂದು ಗೆಲ್ಲಿಸಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News