ಕರ್ಮ ಸಿದ್ಧಾಂತದ ವಿರುದ್ಧ ಮೊದಲು ಯುದ್ಧ ಸಾರಿದವರು ಗೌತಮ ಬುದ್ಧ : ಪುರುಷೋತ್ತಮ ಬಿಳಿಮಲೆ

ಮೈಸೂರು : ಕರ್ಮ ಸಿದ್ಧಾಂತ ವಿರುದ್ಧ ಮೊದಲು ಯುದ್ಧ ಸಾರಿದವರು ಗೌತಮ ಬುದ್ಧ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಸಾಹಿತ್ಯ ಅಕಾಡಮಿ, ತಥಾಗತ ಬುದ್ಧ ವಿಹಾರ ನಂಜನಗೂಡು, ವಿಶ್ವಮೈತ್ರಿ ಬುದ್ಧ ವಿಹಾರ ಮೈಸೂರು, ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಸಂಶೋಧಕರ ಸಂಘ ಸಹಯೋಗದಲ್ಲಿ ಮಾನಸಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿರುವ ಎರಡು ದಿನಗಳ ಮಾನವ ಮೈತ್ರಿ ಸಂಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹಿರೋಶಿಮಾ ನಾಗಸಾಕಿ ಮೇಲೆ ಅಣುಬಾಂಬ್ ಹಾಕಲಾಯಿತು. ಅಲ್ಲಿನ ಜನತೆ 20 ವರ್ಷಗಳಲ್ಲಿ ದೇಶವನ್ನು ಮರು ಕಟ್ಟಿದರು. ಆದರೆ, ಕರ್ಮ ಸಿದ್ಧಾಂತ ಶತಮಾನಗಳಿಂದ ನಮ್ಮನ್ನು ಕೊಲ್ಲುತ್ತಿದೆ. ಮೋದಿ ಸಾಹೇಬರು ಅಧಿಕಾರಕ್ಕೆ ಬಂದ ಮೇಲೆ ಅದರ ವೇಗ ದ್ವಿಗುಣಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ, ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ, ಹಿರಿಯ ಕವಿ, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಕಲಬುರಗಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ.ಎಚ್.ಟಿ.ಪೋತೆ ಉಪಸ್ಥಿತರಿದ್ದರು.
ಲೇಖಕ ಸಿ.ಹರಕುಮಾರ್, ಮಲ್ಕುಂಡಿ ಮಹದೇವಸ್ವಾಮಿ, ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ ಧಮ್ಮೋಪದೇಶ ಪಂಚಶೀಲ ತಿಸರಣದಲ್ಲಿ ಬೆಂಗಳೂರಿನ ಮಹಾಬೋಧಿ ಆನಂದ ಥೇರೋ ಬಂತೇಜಿ, ಬೌದ್ಧ ಬಿಕ್ಕುಗಳಾದ ಸುಗತಪಾಲ ಬಂತೇಜಿ, ಭಂತೆ ಸುಮನ, ಮಾತೆ ಗೌತಮಿ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ದಲಿತ ವಿದ್ಯಾರ್ಥಿ ಒಕ್ಕೂಟದ ಪುನೀತ್ ಹಾಜರಿದ್ದರು.
ನಾನು ಬೌದ್ಧ, ಅಂಬೇಡ್ಕರ್ ವಾದಿ ಎನ್ನುವವರೇ ಹಿಂದೂ ಆಚರಣೆಯ ಪೂಜೆಗಳನ್ನು ಮಾಡುತ್ತಾರೆ. ಇವರ ನಂಬಿಕೆಗಳೆ ಬೇರೆ, ಪ್ರಪಂಚಕ್ಕೆ ಹೇಳುವುದೇ ಬೇರೆ. ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದೆ.
-ಮರಿಸ್ವಾಮಿ, ನಿವೃತ್ತ ಐಪಿಎಸ್ ಅಧಿಕಾರಿ.
ಅಸ್ಪಶ್ಯತೆ ಅಪಮಾನ ಸಹಿಸಿಕೊಂಡು ಹಿಂದೂ ಧರ್ಮದಲ್ಲಿದ್ದರೆ ನಿಮ್ಮಂತ ಮೂರ್ಖರಿಲ್ಲ. ಯಾವ ಧರ್ಮ ನಿಮ್ಮನ್ನು ಮುಟ್ಟಿಸಿಕೊಳ್ಳುತ್ತಿಲ್ಲ, ಅಪಮಾನ ಮಾಡಿ ನೀಚತನದಿಂದ ನೋಡುತ್ತಿದೆ ಆ ಧರ್ಮದಲ್ಲಿ ಇರಬಾರದು.
-ಡಾ.ಎಚ್.ಟಿ.ಪೋತೆ, ಪ್ರಾಧ್ಯಾಪಕ