ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳಲು ಬಹಳ ಪ್ರೀತಿ ಹಾಗೂ ಬದ್ಧತೆ ಇರಬೇಕು: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2023-12-01 18:05 GMT

ಮೈಸೂರು: ವಿಕಲಚೇತನ ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅವರನ್ನು ನೋಡಿಕೊಳ್ಳಲು ಪ್ರೀತಿ ಹಾಗೂ ಬಹಳ ಬದ್ಧತೆ ಇರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯ ಪಟ್ಟರು.

ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೈಸೂರು ಜಿಲ್ಲೆಯ ವಿಕಲಚೇತನರ ಕ್ರೀಡಾಕೂಟ 2023-24 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 25 ವರ್ಷಗಳಿಂದ ಸರ್ಕಾರ ವಿಕಲಚೇತನ ಮಕ್ಕಳ ಕ್ರೀಡಾಕೂಟವನ್ನು ನಡೆಸುತ್ತಾ ಬಂದಿದೆ. ಈ ಹಿಂದೆ ಕೆಲವು ಸಂಘ ಸಂಸ್ಥೆಗಳು ಇದನ್ನು ನಡೆಸುತ್ತಿದ್ದವು. ಇಂದು ವಿಕಲಚೇತನರ ಕ್ರೀಡಾಕೂಟ ನಡೆಸಲು ಸರ್ಕಾರ ಪ್ರತಿ ಜಿಲ್ಲೆಗೂ 50 ಸಾವಿರ ಪ್ರೋತ್ಸಾಹ ಧನ ನೀಡುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಕ್ರೀಡಾಕೂಟ ಹಲವು ಬುದ್ಧಿಮಾಂದ್ಯ ಹಾಗೂ ವಿಕಲ ಚೇತನ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಇಂತಹ ಮಕ್ಕಳನ್ನು ಪ್ರೀತಿಸುವ ಹಾಗೂ ಕ್ರೀಡೆಯ ಮೂಲಕ ರಂಜಿಸುವ ಉತ್ತಮ ಕೆಲಸವಾಗುತ್ತಿದೆ ಎಂದರು.

ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ ಕ್ರೀಡೆಯಲ್ಲಿ ವಿಶೇಷ ಚೇತನ ಮಕ್ಕಳು ಭಾಗವಹಿಸುತ್ತಿರುವುದು ವಿಶೇಷದಾಯಕವಾಗಿದೆ. ವಿಶೇಷ ಚೇತನ ಮಕ್ಕಳು ಕೂಡ ಅವರಲ್ಲಿರುವ ಸಾಮಥ್ರ್ಯವನ್ನು ಸಾಬೀತುಪಡಿಸುವ ಕೆಲಸ ಈ ಕ್ರೀಡಾ ಸ್ಪರ್ಧೆಯಲ್ಲಿ ಆಗಲಿದೆ. ಸೋಲು ಗೆಲುವಿನ ಪ್ರಶ್ನೆ ಬೇಡ. ಅವಕಾಶಗಳು ಮುಂದೆ ಬರುತ್ತವೆ. ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News