ದಿಲ್ಲಿ ಅಬಕಾರಿ ಹಗರಣದಲ್ಲಿ ಮಾಫಿ ಸಾಕ್ಷಿದಾರನ ತಂದೆಗೆ ಎನ್‌ಡಿಎ ಯಿಂದ ಸ್ಪರ್ಧಿಸಲು ಟಿಕೆಟ್‌

Update: 2024-03-30 09:46 GMT

ಮಗುಂಟ ಶ್ರೀನಿವಾಸುಲು ರೆಡ್ಡಿ

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರ ಬಂಧನಕ್ಕೆ ಕಾರಣವಾಗಿರುವ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಾಗೂ ನಂತರ ಮಾಫಿ ಸಾಕ್ಷಿಯಾದ ರಾಘವ ಮಗುಂಟ ರೆಡ್ಡಿ ಎಂಬಾತನ ತಂದೆ ಮಗುಂಟ ಶ್ರೀನಿವಾಸುಲು ರೆಡ್ಡಿಗೆ ಬಿಜೆಪಿಯ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಪಾರ್ಟಿ ಆಂಧ್ರ ಪ್ರದೇಶದ ಒಂಗೋಲೆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಿದೆ.

ಅಪ್ಪ-ಮಗ ಇಬ್ಬರೂ ಫೆಬ್ರವರಿ 28ರಂದು ವೈಎಸ್ಸಾರ್‌ ಕಾಂಗ್ರೆಸ್‌ನಿಂದ ಟಿಡಿಪಿಗೆ ಪಕ್ಷಾಂತರಗೊಂಡ ನಂತರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಒಂಗೋಲೆ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಶ್ರೀನಿವಾಸುಲು ಅವರಿಗೆ ತಮ್ಮ ಪುತ್ರನಿಗೆ ಟಿಕೆಟ್‌ ಲಭಿಸಬೇಕೆಂಬ ಬಯಕೆಯಿದ್ದರೂ ಅಬಕಾರಿ ನೀತಿ ಹಗರಣದ ಕರಿಛಾಯೆಯಿಂದಾಗಿ ರಾಘವ ರೆಡ್ಡಿಗೆ ಟಿಕೆಟ್‌ ನೀಡಲಾಗಿಲ್ಲ ಎನ್ನಲಾಗಿದೆ.

ಗುರುವಾರ ದಿಲ್ಲಿ ಕೋರ್ಟಿನಲ್ಲಿ ಕೇಜ್ರಿವಾಲ್‌ ನೀಡಿದ ಹೇಳಿಕೆಯಲ್ಲಿ ಅಪ್ಪ-ಮಗನ ಉಲ್ಲೇಖವನ್ನೂ ಮಾಡಿದ್ದಾರೆ. ಪುತ್ರನನ್ನು ಫೆಬ್ರವರಿ 2023ರಲ್ಲಿ ಬಂಧಿಸಿದ ನಂತರ ಶ್ರೀನಿವಾಸುಲು ತಮ್ಮ ವಿರುದ್ಧ ಒತ್ತಡದಿಂದಾಗಿ ಹೇಳಿಕೆ ನೀಡಿದ್ದರು ಎಂದು ಕೇಜ್ರಿವಾಲ್‌ ಆರೋಪಿಸಿದ್ದರು. ರಾಘವ ರೆಡ್ಡಿಗೆ ಅಕ್ಟೋಬರ್‌ 2023ರಂದು ಜಾಮೀನು ನೀಡಲಾಗಿತ್ತು. ನಂತರ ಆತ ಈ ಪ್ರಕರಣದ ಅಪ್ರೂವರ್‌ ಆಗಿದ್ದ.

ಮಗುಂಟ ಕುಟುಂಬವು ಬಾಲಾಜಿ ಡಿಸ್ಟಿಲರೀಸ್‌ ಮತ್ತು ಎರಡು ಇತರ ಕಂಪೆನಿಗಳನ್ನು ಹೊಂದಿದ್ದು ಕಳೆದ ಏಳು ದಶಕಗಳಿಂದ ಮದ್ಯ ಉದ್ಯಮದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News