"ಜಾತಿ ವ್ಯವಸ್ಥೆಯಿಂದಾಗಿಯೇ ಭಾರತೀಯ ಸಮಾಜವು ಒಗ್ಗಟ್ಟಿನಿಂದಿದೆ": ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡ ಆರೆಸ್ಸೆಸ್ ಮುಖವಾಣಿ

Update: 2024-08-11 11:59 GMT

ಹೊಸದಿಲ್ಲಿ: ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಇತ್ತೀಚಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕುರಿತು ಟೀಕಿಸಿ ವಿವಾದವೊಂದನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮುಖವಾಣಿ ‘ಪಾಂಚಜನ್ಯ’ ಸಾಪ್ತಾಹಿಕವು ತನ್ನ ಇತ್ತೀಚಿನ ಸಂಚಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿದೆ ಎಂದು indianexpress.com ವರದಿ ಮಾಡಿದೆ.

ಜಾತಿ ವ್ಯವಸ್ಥೆಯಿಂದಾಗಿಯೇ ಭಾರತೀಯ ಸಮಾಜವು ಒಗ್ಗಟ್ಟಿನಿಂದಿದೆ ಎಂದು ತನ್ನ ಸಂಪಾದಕೀಯ ಲೇಖನದಲ್ಲಿ ಪ್ರತಿಪಾದಿಸಿರುವ ಸಾಪ್ತಾಹಿಕವು, ಮುಘಲರಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ ಮತ್ತು ಬ್ರಿಟಿಷರು ಅದನ್ನು ತಮ್ಮ ಭಾರತವನ್ನು ಆಕ್ರಮಿಸುವ ತಮ್ಮ ಮಾರ್ಗದಲ್ಲಿಯ ತಡೆ ಎಂದು ಪರಿಗಣಿಸಿದ್ದರು ಎಂದು ಹೇಳಿದೆ.

ಜಾತಿ ವ್ಯವಸ್ಥೆಯು ತಮ್ಮ ವೃತ್ತಿ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ವಿಂಗಡಿಸಲ್ಪಟ್ಟಿದ್ದ ಭಾರತದ ವಿವಿಧ ವರ್ಗಗಳನ್ನು ಒಗ್ಗಟ್ಟಿನಿಂದಿರಿಸಿದ್ದ ಸರಪಳಿಯಾಗಿತ್ತು. ಕೈಗಾರಿಕಾ ಕ್ರಾಂತಿಯ ಬಳಿಕ ಬಂಡವಾಳಶಾಹಿಗಳು ಜಾತಿ ವ್ಯವಸ್ಥೆಯನ್ನು ಭಾರತದ ಕಾವಲುಗಾರನ ರೂಪದಲ್ಲಿ ನೋಡಿದ್ದರು ಎಂದು ಪಾಂಚಜನ್ಯ’ದ ಸಂಪಾದಕ ಹಿತೇಶ ಶಂಕರ್ ತನ್ನ ಲೇಖನದಲ್ಲಿ ಹೇಳಿದ್ದಾರೆ.

ಜಾತಿ ವ್ಯವಸ್ಥೆಯು ಯಾವಾಗಲೂ ಆಕ್ರಮಣಕೋರರ ಗುರಿಯಾಗಿತ್ತು ಎಂದು ವಾದಿಸಿರುವ ಶಂಕರ್,‌ ಮುಘಲರು ತಮ್ಮ ಖಡ್ಗದ ಬಲದಿಂದ ಅದನ್ನು ಗುರಿಯಾಗಿಸಿಕೊಂಡಿದ್ದರೆ ಕ್ರೈಸ್ತ ಮಿಶನರಿಗಳು ಸೇವೆ ಮತ್ತು ಸುಧಾರಣೆಯ ಸೋಗಿನಲ್ಲಿ ಹಾಗೆ ಮಾಡಿದ್ದರು. ಜಾತಿಯ ರೂಪದಲ್ಲಿ ಭಾರತೀಯ ಸಮಾಜವು ಒಬ್ಬರ ಜಾತಿಗೆ ದ್ರೋಹವನ್ನು ಬಗೆಯುವುದು ದೇಶಕ್ಕೆ ದ್ರೋಹವಾಗಿದೆ ಎಂಬ ಸರಳವಾದ ವಿಷಯವನ್ನು ಅರ್ಥ ಮಾಡಿಕೊಂಡಿದೆ. ಮಿಶನರಿಗಳು ಭಾರತದ ಈ ಒಗ್ಗಟ್ಟಿನ ಸಮೀಕರಣವನ್ನು ಮುಘಲರಿಗಿಂತ ಚೆನ್ನಾಗಿ ಅರಿತಿದ್ದರು. ಭಾರತ ಮತ್ತು ಅದರ ಸ್ವಾಭಿಮಾನವನ್ನು ಮುರಿಯಬೇಕಿದ್ದರೆ ಮೊದಲು ಜಾತಿ ವ್ಯವಸ್ಥೆಯನ್ನು ಬಂಧನ ಅಥವಾ ಶೃಂಖಲೆ ಎಂದು ಕರೆಯುವ ಮೂಲಕ ಜಾತಿಯ ಏಕೀಕರಣ ಸಮೀಕರಣವನ್ನು ಮುರಿಯಬೇಕು ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಜಾತಿ ವ್ಯವಸ್ಥೆಯ ಕುರಿತು ಮಿಶನರಿಗಳ ಈ ತಿಳುವಳಿಕೆಯನ್ನು ಬ್ರಿಟಿಷರು ತಮ್ಮ ‘ಒಡೆದು ಆಳುವ’ ನೀತಿಗಾಗಿ ಅಳವಡಿಸಿಕೊಂಡಿದ್ದರು ಎಂದು ಸಂಪಾದಕೀಯವು ವಾದಿಸಿದೆ.

‘ಪಾಂಚಜನ್ಯ’ದಿಂದ ಜಾತಿ ವ್ಯವಸ್ಥೆಯ ಈ ಸಮರ್ಥನೆಯು ಮಹತ್ವದ್ದಾಗಿದೆ, ಏಕೆಂದರೆ ವಂಚಿತ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಗೆ ತಾನು ವಿರುದ್ಧವಾಗಿಲ್ಲ ಎಂದು ವಿವರಿಸುವುದು ಆರೆಸ್ಸೆಸ್ ಕಷ್ಟವಾಗಿರುವ ಸಮಯದಲ್ಲಿ ಈ ಸಮರ್ಥನೆ ಬಂದಿದೆ.

ಜಾತಿ ತಾರತಮ್ಯವು ಭಾರತೀಯ ಸಮಾಜಕ್ಕೆ ಶಾಪವಾಗಿದೆ ಮತ್ತು ಅದನ್ನು ತೊಡೆದುಹಾಕಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಪದೇ ಪದೇ ಹೇಳಿದ್ದಾರೆ. ತಮ್ಮ ಸಹೋದ್ಯೋಗಿಗಳ ಜಾತಿ ತಮಗೆ ತಿಳಿದಿಲ್ಲ ಎಂದು ಆರೆಸ್ಸೆಸ್ ಸದಸ್ಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಳೆದ 2,000 ವರ್ಷಗಳಿಂದ ಕೆಳಜಾತಿಗಳು ಅನುಭವಿಸಿರುವ ತಾರತಮ್ಯವನ್ನು ಸರಿದೂಗಿಸಲು ಮೀಸಲಾತಿಯನ್ನು ಇನ್ನೂ 200 ವರ್ಷಗಳ ಕಾಲ ಮುಂದುವರಿಸಿದರೂ ತಾನು ಅದನ್ನು ಬೆಂಬಲಿಸುತ್ತೇನೆ ಎಂದು ಭಾಗವತ್ ಕಳೆದ ವರ್ಷ ಹೇಳಿದ್ದರು.

ಒಂದು ಜಾತಿ ಗುಂಪಿನಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಂಡ ಕೌಶಲ್ಯಗಳಿಂದಾಗಿ ಬಂಗಾಳದ ನೇಕಾರರಂತಹ ಕುಶಲಕರ್ಮಿಗಳು ಎಷ್ಟೊಂದು ನಿಪುಣರಾಗಿದ್ದರೆಂದರೆ ಅವರಂತೆ ಉತ್ಪನ್ನಗಳನ್ನು ಉತ್ಪಾದಿಸಲು ಮ್ಯಾಂಚೆಸ್ಟರ್‌ನ ಜವಳಿ ಗಿರಣಿಗಳಿಗೂ ಸಾಧ್ಯವಾಗಿರಲಿಲ್ಲ ಎಂದು ಪ್ರತಿಪಾದಿಸಿರುವ ಸಂಪಾದಕೀಯವು,ಆಕ್ರಮಣಕೋರರು ಭಾರತದ ಕೈಗಾರಿಕೆಗಳನ್ನು ನಾಶಗೊಳಿಸಿದ್ದು ಮಾತ್ರವಲ್ಲ, ಭಾರತದ ಅನನ್ಯತೆಯನ್ನು ಬದಲಿಸಲು ಮತಾಂತರದ ಮೇಲೂ ಕೇಂದ್ರೀಕರಿಸಿದ್ದರು. ಜಾತಿಗತ ಗುಂಪುಗಳು ಇದಕ್ಕೆ ಮಣಿಯದಿದ್ದಾಗ ಅವರನ್ನು ಅವಮಾನಿಸಲಾಗಿತ್ತು. ಸ್ವಾಭಿಮಾನಿ ಸಮುದಾಯವು ತನ್ನ ತಲೆಯ ಮೇಲೆ ಮಾನವ ಮಲ ಹೊರುವಂತೆ ಬಲವಂತಗೊಳಿಸಿದ್ದವರು ಇದೇ ಜನರಾಗಿದ್ದರು. ಅದಕ್ಕೂ ಮೊದಲು ಭಾರತದಲ್ಲಿ ಇಂತಹ ಸಂಪ್ರದಾಯವಿರಲಿಲ್ಲ ಎಂದು ಹೇಳಿದೆ.

ಭಾರತೀಯ ಪೀಳಿಗೆಗಳ ಪ್ರತಿಭೆಗಳನ್ನು ಕಂಡು ಮತ್ಸರ ಪಡುತ್ತಿದ್ದ ಅವೇ ಕಣ್ಣುಗಳು ಹಿಂದು ಧರ್ಮದ ವೈವಿಧ್ಯತೆ,ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಾಶಗೊಳಿಸುವ ಕನಸು ಕಾಣುತ್ತಿವೆ ಎಂದು ಶಂಕರ್ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧವೂ ದಾಳಿ ನಡೆಸಿರುವ ಸಂಪಾದಕೀಯವು,‌ ಮಿಶನರಿಗಳು ಜಾತಿಯನ್ನು ತಮ್ಮ ಮತಾಂತರ ಕಾರ್ಯಕ್ಕೆ ಅಡ್ಡಿಯೆಂದು ಭಾವಿಸಿದ್ದರೆ, ಕಾಂಗ್ರೆಸ್ ಅದನ್ನು ಹಿಂದು ಏಕತೆಯಲ್ಲಿ ಮುಳ್ಳನ್ನಾಗಿ ನೋಡುತ್ತಿದೆ. ಬ್ರಿಟಿಷರ ನೀತಿಗೆ ಅನುಗುಣವಾಗಿ ಕಾಂಗ್ರೆಸ್ ಜಾತಿಯ ಆಧಾರದಲ್ಲಿ ಲೋಕಸಭಾ ಸ್ಥಾನಗಳ ವಿಭಜನೆಯನ್ನು ಮತ್ತು ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸಲು ಬಯಸುತ್ತಿದೆ. ಇದೇ ಕಾರಣಕ್ಕೆ ಅದು ಜಾತಿ ಗಣತಿಯ ಮಾತುಗಳನ್ನಾಡುತ್ತಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News