2024 ರ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಮೋದಿ ದೇಶದಲ್ಲಿ ಯಾವುದೇ ಅನಾಹುತ ಮಾಡಿಸಬಹುದು: ಸತ್ಯಪಾಲ್ ಮಲಿಕ್

Update: 2023-07-30 18:03 GMT

ಸತ್ಯಪಾಲ್ ಮಲಿಕ್ (PTI)

ಹೊಸದಿಲ್ಲಿ: 2024 ರ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಮೋದಿ ದೇಶದಲ್ಲಿ ಯಾವುದೇ ರೀತಿಯ ಅನಾಹುತ ಮಾಡಿಸಬಹುದು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಅವರು www.newsclick.in ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಚುನಾವಣೆ ಗೆಲ್ಲಲು ರಾಮಮಂದಿರ ಸ್ಫೊಟ ಅಥವಾ ಪ್ರಭಾವಿ ಬಿಜೆಪಿ ನಾಯಕ ಹತ್ಯೆ ಮಾಡಿಸಬಹುದು. ಈ ತರಹದ ಕೆಲಸ ಬಿಜೆಪಿ ಮಾಡಬಹುದು.ಪುಲ್ವಾಮ ದಾಳಿ ಮಾಡಿಸಿದವರು ಏನನ್ನು ಕೂಡಾ ಮಾಡಲು ಶಕ್ತರು ಎಂದು ಮಲಿಕ್ ಹೇಳಿದ್ದಾರೆ.

ನ್ಯೂಸ್ ಕ್ಲಿಕ್ ಗೆ ಕೊಟ್ಟ ಸಂದರ್ಶನದ ತುಣುಕನ್ನು ಅವರೇ ಟ್ವೀಟ್ ಮಾಡಿದ್ದಾರೆ.

ಪುಲ್ವಾಮ ದಾಳಿ ಸಂದರ್ಭ ಮಲಿಕ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿದ್ದರು.

ರಾಜ್ಯಪಾಲರಾಗಿದ್ದಾಗಲೇ ಸರಕಾರದ ವಿರುದ್ಧ ಹಲವು ಗಂಬೀರ ಆರೋಪಗಳನ್ನು ಅವರು ಮಾಡಿದ್ದರು. ರಾಜಿನಾಮೆ ನಂತರವೂ ಸರಕಾರದ ವಿರುದ್ಧ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚೆಗೆ 'The Wire' ಸುದ್ದಿ ಸಂಸ್ಥೆಯ ಕರಣ್ ಥಾಪರ್ ಅವರಿಗೆ ಸಂದರ್ಶನ ನೀಡಿದ್ದ ಸತ್ಯಪಾಲ್ ಮಲಿಕ್, ಪುಲ್ವಾಮಾ ದಾಳಿ ಸಂದರ್ಭದಲ್ಲಿನ ಲೋಪಗಳ ಕುರಿತು ಹಲವಾರು ವಿಷಯಗಳನ್ನು ಬಹಿರಂಗಗೊಳಿಸಿದ್ದರು. ಇದರ ಬೆನ್ನಿಗೇ NDTVಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ ರವೀಶ್ ಕುಮಾರ್ ಅವರಿಗೆ ಸಂದರ್ಶನ ನೀಡಿದ್ದ ಅವರು, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದರು. "ನಾನು ಈ ಲೋಪಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತಂದರೂ, ಅವರು ನನಗೆ ಮೌನವಾಗಿರುವಂತೆ ಸೂಚಿಸಿದ್ದರು" ಎಂಬ ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

“ಪುಲ್ವಾಮಾ ದಾಳಿಗೂ ಮೊದಲು ಸಿಆರ್‌ಪಿಎಫ್ ಯೋಧರ ಸಾಗಣೆಗೆ ಐದು ವಿಮಾನಗಳಿಗೆ ಬೇಡಿಕೆ ಇಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಅವನ್ನು ಒದಗಿಸಲಿಲ್ಲ. ಅಲ್ಲದೆ ಅಲ್ಲಿ ಇನ್ನೂ ಹಲವು ಲೋಪಗಳಾಗಿದ್ದು, ರಸ್ತೆ ಮಾರ್ಗವಾಗಿ ತೆರಳುವ ವಾಹನಗಳನ್ನು ತಪಾಸಣೆ ಮಾಡಲು ಯಾವುದೇ ಗಸ್ತು ವಾಹನಗಳಾಗಲಿ, ತಪಾಸಣಾ ಠಾಣೆಗಳಾಗಲಿ ಇರಲಿಲ್ಲ” ಎಂದು ಸತ್ಯಪಾಲ್ ಮಲಿಕ್ ಗಂಭೀರ ಆರೋಪ ಮಾಡಿದ್ದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕರೆ ಮಾಡಿ, ಸರ್ಕಾರದ ಲೋಪಗಳ ಕುರಿತು ಏನೂ ಮಾತಾಡಬಾರದೆಂದು ಸೂಚಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಕರೆ ಮಾಡಿ ಮೌನವಾಗಿರುವಂತೆ ಸೂಚಿಸಿದರು ಎಂದೂ ಮಲಿಕ್ ಅವರು ಆರೋಪಿಸಿದ್ದರು.

ಅಲ್ಲದೇ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕೇಂದ್ರ ಸರಕಾರವನ್ನು ತರಾಟೆಗೆ ತಗೆದುಕೊಂಡಿದ್ದರು. “ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ಮೋದಿ ಅವರಿಗೆ ಸಲಹೆ ನೀಡಿದಾಗ, ಅವರು ನನಗಾಗಿ ಸತ್ತರೇ? ನಾನ್ಯಾಕೆ ಶ್ರದ್ಧಾಂಜಲಿ ಸಲ್ಲಿಸಲಿ ಎಂದು ಮೋದಿ ಹೇಳಿದ್ದರು” ಎಂದು ಮಲಿಕ್ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

ಮಣಿಪುರ ಹಿಂಚಾರದ ಬಗ್ಗೆಯೂ ಸತ್ಯಪಾಲ್ ಮಲಿಕ್ ಧ್ವನಿಯೆತ್ತಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News