ಅತ್ಯಾಚಾರ ಯತ್ನ, ಅಪ್ರಾಪ್ತೆಯ ಹತ್ಯೆ; ಆರೋಪಿ ಅರೆಸ್ಟ್

Update: 2023-10-13 03:33 GMT

ಲಕ್ನೋ: ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಎನ್ಕೌಂಟರ್ ನಲ್ಲಿ ಬಂಧಿಸಿದ್ದಾರೆ. ತಿಕುನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿ ಸದ್ದಾಮ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ಟೋಬರ್ 8ರಂದು ಆರೋಪಿ ಸದ್ದಾಂ ದುರುದ್ದೇಶದಿಂದ, ಮದರಸಾದಿಂದ ಬರುತ್ತಿದ್ದ 13 ವರ್ಷದ ಯುವತಿಯನ್ನು ಬಲವಂತವಾಗಿ ಕಬ್ಬಿನ ಗದ್ದೆಗೆ ಕರೆದೊಯ್ದಿದ್ದ. ಯುವತಿ ಸಹಾಯಕ್ಕಾಗಿ ಕೂಗಿಕೊಂಡಾಗ, ಆಕೆಯ ಬಾಯಿಗೆ ಮಣ್ಣು ತುರಕಿ, ಕಬ್ಬಿನ ದಂಟಿನಿಂದ ಆಕೆಯ ಕಣ್ಣುಗಳನ್ನು ಕಿತ್ತಿದ್ದ. ಅತ್ಯಾಚಾರ ಯತ್ನ ವಿಫಲವಾದಾಗ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ ಎಂದು ಹಿರಿಯ ಎಸ್ಪಿ ಗಣೇಶ್ ಪ್ರಸಾದ್ ಸಹಾ ಹೇಳಿದ್ದಾರೆ. ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದ.

ಸಂತ್ರಸ್ತೆ ಯುವತಿ ಸಣ್ಣ ರೈತನ ಮಗಳು. ವೈದ್ಯರ ತಂಡ ಅಟಾಪ್ಸಿ ನಡೆಸಿದ್ದು, ಯುವತಿಯ ಮರ್ಮಾಂಗಕ್ಕೆ ತರುಚಿದ ಗಾಯಗಳು ಆಗಿರುವುದೂ ಸೇರಿದಂತೆ ದೇಹದ ಮೇಲೆ ಹಲವು ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿತ್ತು. ಆರೋಪಿ ವಿರುದ್ಧ ಫೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದೆ. ಪೊಲೀಸರನ್ನು ಕಂಡಾಗ ಪೊಲೀಸ್ ತಂಡದತ್ತ ಆರೋಪಿ ಗುಂಡು ಹಾರಿಸಿದ್ದು, ಈ ಸಂಬಂಧವೂ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News