ಗಾಂಧೀಜಿಯನ್ನು ಮರೆತ ಭಾರತ

ಮಹಾತ್ಮಾ ಗಾಂಧಿಯಲ್ಲಿ ಬದಲಾವಣೆಗೆ ಸ್ಪಂದಿಸುವ ಅಪರೂಪದ ಗುಣವಿತ್ತು. ಮೊದಲು ಅಂತರ್‌ಜಾತಿ, ಅಂತರ್‌ಧರ್ಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧಿ ಕ್ರಮೇಣ ಬದಲಾಗಿ ತಮ್ಮ ಕೊನೆಯ ದಿನಗಳಲ್ಲಿ ಜಾತಿರಹಿತ ಮದುವೆಗಳನ್ನು ಬೆಂಬಲಿಸಿದರು. ಬರೀ ಬೆಂಬಲಿಸಲಿಲ್ಲ, ಸ್ವಜಾತಿಯ ವಿವಾಹಗಳನ್ನು ಬಹಿಷ್ಕರಿಸಿದರು. ನಾಸ್ತಿಕ ಗೋಪರಾಜು ರಾಮಚಂದ್ರರಾವ್ (ಗೋರಾ) ಆಶ್ರಮಕ್ಕೆ ಬಂದಾಗ, ಮೊದಲು ನಾಸ್ತಿಕರೊಂದಿಗೆ ಏನು ಮಾತು ಎಂದು ಮಾತಾಡಲು ನಿರಾಕರಿಸಿದ ಬಾಪೂಜಿ ಕ್ರಮೇಣ ಅವರೊಂದಿಗೆ ನಿರೀಶ್ವರವಾದದ ಬಗ್ಗೆ ಚರ್ಚಿಸತೊಡಗಿದರು.

Update: 2024-09-30 04:21 GMT

ಮತ್ತೆ ಗಾಂಧಿ ಜಯಂತಿ ಬಂದಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ಪರ್ಶ ನೀಡುವುದರ ಜೊತೆಗೆ ಎಲ್ಲ ಜನಸಮುದಾಯಗಳನ್ನು ಒಳಗೊಂಡ ನವ ಭಾರತ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗಾಂಧಿಯವರ ಹೆಸರು ಕ್ರಮೇಣ ಮಾಯವಾಗುತ್ತಿದೆ. ಮುಂಚೆ ಅಂದರೆ ಭಾರತ ವಸಾಹತುಶಾಹಿಯ ಆಡಳಿತದಿಂದ ಮುಕ್ತವಾದ ಭಾರತದಲ್ಲಿ ಸುಮಾರು ಎಪ್ಪತ್ತರ ದಶಕದವರೆಗೆ ಶಾಲಾ ಮಕ್ಕಳು ಸೇರಿ ಭಾರತದ ಬಹುತೇಕ ಜನರಿಗೆ ಗಾಂಧೀಜಿ ಬಗ್ಗೆ ಗೊತ್ತಿರುತ್ತಿತ್ತು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಲಾ ಮಕ್ಕಳು ಸೇರಿ ಅನೇಕ ಜನರಿಗೆ ಗಾಂಧಿ ಹೆಸರು ಗೊತ್ತಿಲ್ಲ ಎಂಬುದರ ಜೊತೆಗೆ ಗೋಡ್ಸೆಯನ್ನು ನಾಯಕನನ್ನಾಗಿ, ಗಾಂಧಿಯನ್ನು ಖಳನಾಯಕನನ್ನಾಗಿ ಬಿಂಬಿಸುವ ಮಸಲತ್ತು ಅವ್ಯಾಹತ ನಡೆದಿದೆ. ಯಾವುದೇ ಶಾಲಾ ಮಕ್ಕಳನ್ನು ಕೇಳಿದರೆ, ಗಾಂಧಿಯವರ ಬಗ್ಗೆ ತಿರಸ್ಕಾರದ ಮಾತು ಹೊರಬೀಳುತ್ತವೆ. ಭಾರತದ ವಿಭಜನೆಗೆ ಗಾಂಧಿ ಕಾರಣ ಎಂದು ಮಕ್ಕಳ ತಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ಈ ಕುಚೇಷ್ಟೆ ಈಗಿನ ಶಾಲಾ ಶಿಕ್ಷಕರಿಂದಲೇ ನಡೆದಿದೆ.

ಭಾರತದಲ್ಲಿ ಗಾಂಧೀಜಿಯ ತೇಜೋವಧೆ ನಡೆದಿದ್ದರೆ, ವಿದೇಶದಲ್ಲಿ ಗಾಂಧಿ ಬಗ್ಗೆ ತಿಳಿದುಕೊಳ್ಳುವ ಕುತೂಹಲ, ಅವರ ಬಗ್ಗೆ ಗೌರವ, ಅಭಿಮಾನ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಸೇರಿ ವಿದೇಶಕ್ಕೆ ಹೋದಾಗಲೆಲ್ಲ ಅಲ್ಲಿನ ಸರಕಾರದ ಪ್ರತಿನಿಧಿಗಳು ಮಾತ್ರವಲ್ಲ ಅಲ್ಲಿನ ಜನರು ಕೂಡ, ‘ಗಾಂಧಿ, ನೆಹರೂ ನಾಡಿನಿಂದ ಬಂದಿದ್ದೀರಿ. ನಿಮಗೆ ಸ್ವಾಗತ’ ಎನ್ನುತ್ತಾರೆ. ಮೋದಿಯವರು ಕೂಡ ತಾನು ಸಾವರ್ಕರ್, ಗೋಳ್ವಲ್ಕರ್ ನಾಡಿನಿಂದ ಬಂದಿದ್ದೇನೆ ಎಂದು ಹೇಳುವುದಿಲ್ಲ. ಬುದ್ಧ ಮತ್ತು ಗಾಂಧೀಜಿ ನಾಡಿನಿಂದ ಬಂದಿದ್ದೇನೆ ಎನ್ನುತ್ತಾರೆ.

ರಾಜ್ಯ ಸರಕಾರ ಪ್ರತೀ ವರ್ಷ ಗಾಂಧಿ ಜಯಂತಿಯ ಅಂಗವಾಗಿ ವಿಶೇಷ ಪ್ರಶಸ್ತಿ ಮತ್ತು ಐದು ಲಕ್ಷ ರೂಪಾಯಿ ನೀಡುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕು ಎಂಬ ಪ್ರಶ್ನೆ ಬಂದಾಗ, ಗಾಂಧಿ ಆದರ್ಶಗಳನ್ನು ಪಾಲಿಸುವ ವ್ಯಕ್ತಿಗಾಗಿ ಪ್ರಯಾಸ ಪಟ್ಟು ಹುಡುಕಬೇಕಾದ ಪರಿಸ್ಥಿತಿ ಬಂದಿದೆ. ಕ್ರಮೇಣ ಗಾಂಧಿ ಹೆಸರು ಮಾಯವಾಗುತ್ತಿದೆ. ಅವರನ್ನು ನಕಾರಾತ್ಮಕವಾಗಿ ಬಿಂಬಿಸುವ ಕುತಂತ್ರ ಯೋಜನಾಬದ್ಧವಾಗಿ ನಡೆದಿದೆ. ಇತ್ತೀಚಿನ ಹೊಸ ಪೀಳಿಗೆಯ ಬಹುತೇಕ ಜನರಿಗೆ ಗಾಂಧಿ ಹೆಸರೇ ಗೊತ್ತಿಲ್ಲ. ಮುಂದಿನ ಕೆಲ ವರ್ಷಗಳಲ್ಲಿ ಗಾಂಧಿ ಪ್ರಶಸ್ತಿಯನ್ನು ಯಾರಿಗೆ ಕೊಡಬೇಕೆಂದು ಹುಡುಕಾಡಿದರೂ ಯಾರೂ ಸಿಗುವುದಿಲ್ಲ.

ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿಕೊಂಡು ಸ್ವಾತಂತ್ರ್ಯ ಹೋರಾಟದ ಸಾರಥ್ಯ ವಹಿಸಿದ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಗೊತ್ತಿಲ್ಲದ, ಗೊತ್ತಿದ್ದರೂ ನಕಾರಾತ್ಮಕವಾಗಿ ಬಿಂಬಿಸಲ್ಪಟ್ಟಿರುವುದು ದೇಶದ ದುರಂತ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದಿದ್ದವರು, ‘ಗಾಂಧೀಜಿ ದೇಶ ವಿಭಜಕರು. ಗೋಡ್ಸೆ ನಿಜವಾದ ದೇಶಭಕ್ತ’ ಎಂದು ಯುವಕರ, ಶಾಲಾ ಮಕ್ಕಳ ಮೆದುಳಿನಲ್ಲಿ ವಿಷಲೇಪನ ಮಾಡಿದ್ದಾರೆ.

ಭಾರತ ಭಾಗ್ಯವಿಧಾತ. ಬಾಬಾಸಾಹೇಬ ಅಂಬೇಡ್ಕರ್ ಅವರಿಂದ ‘ಮಿಸ್ಟರ್ ಎಂ.ಕೆ.ಗಾಂಧಿ’ ಎಂದು ಕರೆಯಲ್ಪಡುತ್ತಿದ್ದ ಗಾಂಧೀಜಿಯನ್ನು ದ್ವೇಷಿಸುವವರು ಆಗಲೂ ಇದ್ದರು. ಈಗಲೂ ಇದ್ದಾರೆ. ಗಾಂದೀಜಿಯ ವಿರೋಧಿಗಳು ಒಂದೇ ವಿಚಾರಧಾರೆಗೆ ಸೇರಿದವರಲ್ಲ. ವಿಭಿನ್ನ ಧಾರೆಗಳ ಜನ ತಮ್ಮದೇ ಕಾರಣಗಳಿಗೆ ಬಾಪೂಜಿಯನ್ನು ವಿರೋಧಿಸುತ್ತಾರೆ.

ಬಾಬಾಸಾಹೇಬ ಅಂಬೇಡ್ಕರ್, ಗಾಂಧಿ ಅವರನ್ನು ಸಕಾರಣವಾಗಿ ಟೀಕಿಸುತ್ತಿದ್ದರು. ಭಗತ್ ಸಿಂಗ್ ಬೆಂಬಲಿಗರಾದ ಎಡಪಂಥೀಯರು ತಮ್ಮದೇ ಕಾರಣಗಳಿಗಾಗಿ ಗಾಂಧೀಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಇನ್ನು ಸಾವರ್ಕರ್ ಮತ್ತು ಗೋಳ್ವಲ್ಕರ್‌ರವಾದಿಗಳು ಕೂಡ ಗಾಂಧೀಜಿಯನ್ನು ದ್ವೇಷಿಸುತ್ತಾರೆ. ಆದರೆ, ಅಂಬೇಡ್ಕರ್ ಮತ್ತು ಎಡಪಂಥೀಯರ ಗಾಂಧಿ ವಿರೋಧ ಎಂದೂ ದ್ವೇಷವಾಗಿ ರೂಪಾಂತರಗೊಳ್ಳಲಿಲ್ಲ. ಆದರೆ, ಹಿಂದೂರಾಷ್ಟ್ರ ಕಟ್ಟಲು ಹೊರಟ ಕೋಮುವಾದಿಗಳ ಗಾಂಧಿ ವಿರೋಧ ದ್ವೇಷದ ರೂಪ ತಾಳಿ ಬಾಪೂಜಿ ಗೋಡ್ಸೆ ಗುಂಡಿಗೆ ಬಲಿಯಾಗಬೇಕಾಯಿತು.

ಸ್ವಾತಂತ್ರ್ಯ ಹೋರಾಟದ ಕಾಲ ಘಟ್ಟದಲ್ಲಿ, ಗಾಂಧೀಜಿಗೆ ಭಾರತದಿಂದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ತೊಲಗಿಸುವುದು ಮೊದಲ ಆದ್ಯತೆಯಾಗಿತ್ತು. ಆನಂತರ ನಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂಬುದು ಅವರ ನಿಲುವಾಗಿತ್ತು. ಆದರೆ, ಅಂಬೇಡ್ಕರ್ ಇದನ್ನು ಒಪ್ಪಲಿಲ್ಲ. ‘ದೇಶಕ್ಕೆ ಬರೀ ಸ್ವಾತಂತ್ರ್ಯ ಬಂದರೆ ಸಾಲದು. ಶತಮಾನಗಳಿಂದ ನಾಯಿ, ಬೆಕ್ಕುಗಳಿಗಿಂಥ ಕೀಳಾಗಿ ನರಳುತ್ತಿರುವ ನನ್ನ ಜನರಿಗೆ ಸ್ವಾತಂತ್ರ್ಯ ಮಾತ್ರವಲ್ಲದೇ ಸ್ವಾಭಿಮಾನದ ಬದುಕೂ ಬೇಕು. ಗಾಂಧೀಜಿ ಪಡೆಯುವ ಸ್ವಾತಂತ್ರ್ಯ ಮೇಲ್ಜಾತಿಯ ಮೇಲ್ವರ್ಗದ ಜನರಿಗೆ ಮಾತ್ರ ದಕ್ಕುತ್ತದೆ. ದಲಿತರ ಬದುಕಿಗೆ ಅದು ಬೆಳಕನ್ನು ನೀಡುವುದಿಲ್ಲ’ ಎಂಬುದು ಬಾಬಾಸಾಹೇಬರ ನಿಲುವಾಗಿತ್ತು.

ವಾಸ್ತವವಾಗಿ ಮಹಾತ್ಮಾ ಗಾಂಧೀಜಿ ಜೊತೆಗೆ ಸುಭಾಷ್ ಚಂದ್ರ ಬೋಸ್ ಮತ್ತು ಭಗತ್‌ಸಿಂಗರಿಗೂ ಭಿನ್ನಾಭಿಪ್ರಾಯವಿತ್ತು. ಎಡಪಂಥೀಯರೂ ಗಾಂಧಿ ಅವರನ್ನು ಒಪ್ಪುತ್ತಿರಲಿಲ್ಲ . ದೇಶ ಸ್ವಾತಂತ್ರ್ಯ ಪಡೆಯುವ ಜೊತೆಗೆ ಸಮಾನತೆಯ ಸಮಾಜವೂ ನಿರ್ಮಾಣವಾಗಬೇಕು ಎಂಬುದು ಅವರ ನಿಲುವಾಗಿತ್ತು. ಆದರೆ ಈ ಭಿನ್ನಾಭಿಪ್ರಾಯಗಳು ಎಂದೂ ವೈಯಕ್ತಿಕ ದ್ವೇಷದ ರೂಪ ತಾಳಲಿಲ್ಲ. ಇವರೆಲ್ಲರಿಗೂ ಗಾಂಧೀಜಿ ಬಗ್ಗೆ ಭಿನ್ನಾಭಿಪ್ರಾಯಗಳ ನಡುವೆಯೂ ಗೌರವವಿತ್ತು.

ಆದರೆ, ಹಿಂದೂ ಮಹಾಸಭಾ ಹಾಗೂ ಆರೆಸ್ಸೆಸ್‌ಗಳ ಗಾಂಧಿ ದ್ವೇಷ ಭಿನ್ನವಾಗಿತ್ತು. ಬ್ರಿಟಿಷರು ಭಾರತದಿಂದ ತೊಲಗಿದ ನಂತರ ಈ ಭಾರತ ಹಿಂದಿನಂತೆ ಶ್ರೇಣೀಕೃತ ಜಾತಿ ಪದ್ಧತಿಯನ್ನು ಆಧರಿಸಿದ ಹಿಂದೂರಾಷ್ಟ್ರ ಆಗಬೇಕೆಂಬುದು ಹಿಂದೂ ರಾಷ್ಟ್ರ ಪ್ರತಿಪಾದಕರ ನಿಲುವಾಗಿತ್ತು. ಅದಕ್ಕೆ ಅವರು ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸಿದರು. ಆದರೆ ರಾಮಭಕ್ತರಾಗಿದ್ದ ಗಾಂಧೀಜಿ ಇದನ್ನು ಒಪ್ಪಲಿಲ್ಲ. ಈ ದೇಶ ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿ ಎಲ್ಲರಿಗೂ ಸೇರಿದ್ದು ಎಂಬುದು ಬಾಪೂ ನಿಲುವಾಗಿತ್ತು.

ಅದಕ್ಕೆ ಸ್ವಾತಂತ್ರ್ಯಾ ನಂತರ ಅಂಬೇಡ್ಕರ್ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡು ಜಾತ್ಯತೀತ ಜನತಾಂತ್ರಿಕ ರಾಷ್ಟ್ರವಾಗಿ ಹೊರ ಹೊಮ್ಮಿತು. ಗಾಂಧೀಜಿ ಅವರಿಗೆ ಸ್ವಾತಂತ್ರ್ಯವೇ ಮುಖ್ಯ ಗುರಿಯಾಗಿತ್ತು. ಅದಕ್ಕಾಗಿ ಅವರು ಹಿಂದೂ ಮುಸ್ಲಿಮ್ ಎನ್ನದೇ ಎಲ್ಲರನ್ನೂ ಕೂಡಿಸಿಕೊಂಡು ವಿಮೋಚನಾ ಹೋರಾಟ ರೂಪಿಸಿದರು. ಗಾಂಧೀಜಿಯವರನ್ನು ಒಪ್ಪಿಕೊಂಡಂತೆ, ಈ ದೇಶ ಉಳಿದವರನ್ನು ಒಪ್ಪಿಕೊಳ್ಳಲಿಲ್ಲ.

ಗಾಂಧೀಜಿ ಎಂದೂ ಯಾರನ್ನೂ ದ್ವೇಷಿಸಲಿಲ್ಲ. ತಮ್ಮನ್ನು ವಿರೋಧಿಸುವವರನ್ನು ಹಾಗೂ ತನ್ನೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯ ಹೊಂದಿದವರಲ್ಲಿ ಗಾಂಧೀಜಿ ಎಂದೂ ವೈರ ಭಾವನೆಯನ್ನು ಹೊಂದಿರಲಿಲ್ಲ. ತಮ್ಮನ್ನು ತಾತ್ವಿಕ ಕಾರಣಕ್ಕಾಗಿ ವಿರೋಧಿಸಿದ ಅಂಬೇಡ್ಕರ್ ಮತ್ತು ಎಡಪಂಥೀಯರನ್ನು ಗಾಂಧಿ ಎಂದೂ ದ್ವೇಷಿಸಲಿಲ್ಲ. ಅಂಬೇಡ್ಕರ್ ಮತ್ತು ಎಡಪಂಥೀಯರೂ ಗಾಂಧಿ ಬಗ್ಗೆ ದ್ವೇಷ ಹೊಂದಿರಲಿಲ್ಲ. ಗಾಂಧಿ ಎಂಥ ಮನುಷ್ಯ ಅಂದರೆ ತಾನು ಕಟ್ಟಾ ದೈವಭಕ್ತರಾಗಿದ್ದರೂ ತಮ್ಮ ಆಶ್ರಮದಲ್ಲಿ ಗೋರಾ (ಗೋ.ರಾಮಚಂದ್ರರಾವ್) ಅವರಂಥ ನಾಸ್ತಿಕರಿಗೂ ಆಶ್ರಯ ನೀಡಿದ್ದರು.

ಗಾಂಧಿ ಆಶ್ರಮದಲ್ಲಿದ್ದರೂ ಗೋರಾ ಬೆಳಗಿನ ಮತ್ತು ಸಂಜೆಯ ಪ್ರಾರ್ಥನಾ ಸಭೆಗಳಿಗೆ ಹೋಗುತ್ತಿರಲಿಲ್ಲ. ಪ್ರಾರ್ಥನೆಗೆ ಬರಬೇಕೆಂದು ಗಾಂಧೀಜಿಯೂ ಒತ್ತಾಯಿಸಲಿಲ್ಲ. ಆಸ್ತಿಕತೆ ಮತ್ತು ನಾಸ್ತಿಕತೆ ಬಗ್ಗೆ ಗುರು ಶಿಷ್ಯರಿಬ್ಬರೂ ದಿನವಿಡೀ ವಾದ, ಚರ್ಚೆ ಮಾಡುತ್ತಿದ್ದರು. ವರ್ಷಾನುಗಟ್ಟಲೇ ಗೋರಾ ಗಾಂಧಿ ಆಶ್ರಮದಲ್ಲಿ ಇದ್ದರೂ ನಾಸ್ತಿಕರಾಗಿಯೇ ಉಳಿದರು. ಇದು ವ್ಯಕ್ತಿಯೊಬ್ಬನ ವಿಚಾರಗಳಿಗೆ ಗಾಂಧಿ ಕೊಡುತ್ತಿದ್ದ ಗೌರವಕ್ಕೆ ಉದಾಹರಣೆ.

ಕಮ್ಯುನಿಸ್ಟರ ಜೊತೆಗೂ ಗಾಂಧೀಜಿಗೆ ಭಿನ್ನಾಭಿಪ್ರಾಯಗಳಿದ್ದವು. ಹಿಂಸೆಯನ್ನು ಅವರು ಒಪ್ಪುತ್ತಿರಲಿಲ್ಲ. ಆದರೆ ಕಮ್ಯುನಿಸ್ಟರ ಬದ್ಧ್ದತೆ ಬಗ್ಗೆ ಅವರಿಗೆ ಗೌರವವಿತ್ತು. ಮೀರತ್ ಪಿತೂರಿ ಖಟ್ಲೆಯಲ್ಲಿ ಕಮ್ಯುನಿಸ್ಟರು ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದಾಗ ಗಾಂಧಿ ಕಮ್ಯುನಿಸ್ಟ್ ನಾಯಕರನ್ನು ಭೇಟಿಯಾಗಲು ಹೋಗಿದ್ದರು. 40ರ ದಶಕದ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ಜೋಶಿ ಮತ್ತು ಗಾಂಧೀಜಿ ನಡುವೆ ಉತ್ತಮ ಸ್ನೇಹವಿತ್ತು. ಅವರ ನಡುವಿನ ಪತ್ರ ವ್ಯವಹಾರ ಇದಕ್ಕೊಂದು ಉದಾಹರಣೆ.

ಮಹಾತ್ಮಾ ಗಾಂಧಿಯಲ್ಲಿ ಬದಲಾವಣೆಗೆ ಸ್ಪಂದಿಸುವ ಅಪರೂಪದ ಗುಣವಿತ್ತು. ಮೊದಲು ಅಂತರ್‌ಜಾತಿ, ಅಂತರ್‌ಧರ್ಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧಿ ಕ್ರಮೇಣ ಬದಲಾಗಿ ತಮ್ಮ ಕೊನೆಯ ದಿನಗಳಲ್ಲಿ ಜಾತಿರಹಿತ ಮದುವೆಗಳನ್ನು ಬೆಂಬಲಿಸಿದರು. ಬರೀ ಬೆಂಬಲಿಸಲಿಲ್ಲ, ಸ್ವಜಾತಿಯ ವಿವಾಹಗಳನ್ನು ಬಹಿಷ್ಕರಿಸಿದರು. ನಾಸ್ತಿಕ ಗೋಪರಾಜು ರಾಮಚಂದ್ರರಾವ್ (ಗೋರಾ) ಆಶ್ರಮಕ್ಕೆ ಬಂದಾಗ, ಮೊದಲು ನಾಸ್ತಿಕರೊಂದಿಗೆ ಏನು ಮಾತು ಎಂದು ಮಾತಾಡಲು ನಿರಾಕರಿಸಿದ ಬಾಪೂಜಿ ಕ್ರಮೇಣ ಅವರೊಂದಿಗೆ ನಿರೀಶ್ವರವಾದದ ಬಗ್ಗೆ ಚರ್ಚಿಸತೊಡಗಿದರು.

ಕೊನೆಯ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳುವಾಗಲೇ ಗೋಡ್ಸೆ ಗುಂಡಿಗೆ ಬಲಿಯಾದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ನಂತರ, ಖಾನ್ ಅಬ್ದುಲ್ ಗಪ್ಫಾರ್ ಖಾನ್ ಗಾಂಧೀಜಿಗೆ ಅತ್ಯಂತ ಆಪ್ತರಾಗಿದ್ದರು. ಅವರನ್ನು ಗಡಿನಾಡ ಗಾಂಧಿ ಎಂದು ಜನ ಕರೆಯುತ್ತಿದ್ದರು. ಅವರನ್ನು ಬಿಟ್ಟರೆ ಮೌಲಾನಾ ಅಬುಲ್ ಕಲಾಂ ಆಝಾದ ಬಾಪೂಜಿಯ ಕಟ್ಟಾ ಅನುಯಾಯಿಯಾಗಿದ್ದರು.

ಬ್ಯಾರಿಸ್ಟರ್ ಜಿನ್ನಾ ದೇಶ ವಿಭಜಿಸಿ ಪಾಕಿಸ್ತಾನ ಮಾಡಲು ಹೊರಟಾಗ ಇವರಿಬ್ಬರು ಅದನ್ನು ವಿರೋಧಿಸಿದ್ದರು. ಮಹಾತ್ಮಾ ಗಾಂಧಿ ವೈಯಕ್ತಿಕವಾಗಿ ಧರ್ಮನಿಷ್ಠರಾಗಿದ್ದರು ಎಂಬುದು ನಿಜ. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಧರ್ಮ ಮತ್ತು ದೇವರನ್ನು ಎಂದೂ ಬಳಸಿಕೊಳ್ಳಲಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಚರಕ ಬಾಪೂಜಿಯ ಸಂಕೇತವಾಗಿತ್ತು . ರಾಮನನ್ನು ಅವರು ಅದಕ್ಕಾಗಿ ಬಳಸಿಕೊಳ್ಳಲಿಲ್ಲ. ಗಾಂಧಿ ,ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಎಲ್ಲರ ಹೋರಾಟ, ತ್ಯಾಗ ಬಲಿದಾನದಿಂದ ಈ ದೇಶ ಸ್ವತಂತ್ರವಾಯಿತು.

ಆದರೆ, ಈ ದೇಶ ಎಲ್ಲಿಗೆ ಬಂದು ತಲುಪಿದೆ ಆಂದರೆ ರಾಜಧಾನಿ ದಿಲ್ಲಿಯ ಜಂತರ್ ಮಂತರ್ ಬಳಿ ಫ್ಯಾಶಿಸ್ಟರ ಗುಂಪು ಸಂವಿಧಾನದ ಪ್ರತಿಯನ್ನು ಬೆಂಕಿ ಹಾಕಿ ಸುಟ್ಟು ಅಂಬೇಡ್ಕರರಿಗೆ ಧಿಕ್ಕಾರ ಕೂಗಿತು. 2019ರ ಜನವರಿ 30ರಂದು ಇನ್ನೊಂದು ಘಟನೆ ನಡೆಯಿತು. ಅಂದು ಗಾಂಧಿ ಹುತಾತ್ಮರಾದ ದಿನ. ಆ ದಿನ ಸಾಧ್ವಿಯೊಬ್ಬಳ ನೇತೃತ್ವದ ಮತಾಂಧರ ಗುಂಪು ಗಾಂಧೀಜಿ ಭಾವಚಿತ್ರಕ್ಕೆ ಗುಂಡು ಹಾರಿಸಿ ಗೋಡ್ಸೆಗೆ ಜಯವಾಗಲಿ ಎಂದು ಕೂಗಿ ಸಂಭ್ರಮಿಸಿತು. ಗಾಂಧಿ, ಅಂಬೇಡ್ಕರ್, ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್, ನೆಹರೂ, ಲೋಹಿಯಾ, ವಿವೇಕಾನಂದ ಇವರೆಲ್ಲ, ‘ಭಾರತ ಯಾವುದೇ ಧರ್ಮಕ್ಕೆ, ಜನಾಂಗಕ್ಕೆ ಸೇರಿದ ದೇಶವಲ್ಲ. ಇದು ಎಲ್ಲರಿಗೂ ಸೇರಿದ ರಾಷ್ಟ್ರ’ ಎಂದು ಪ್ರತಿಪಾದಿಸಿದರು.

ಗಾಂಧೀಜಿ ಇದಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟರು. ಈ ಮಹಾಪುರುಷರು ಬಯಸಿದ, ಕುವೆಂಪು ಆಶಿಸಿದ ಸರ್ವಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳಲು ಸಂಕಲ್ಪ ಮಾಡಬೇಕಿದೆ. ಈಗ ಹೊರಟ ದಾರಿಯಲ್ಲೇ ಸಾಗಿದರೆ ಮುಂದೊಂದು ದಿನ ಈ ದೇಶ ನಾಶವಾಗಿ ಹೋಗುತ್ತದೆ. ಒಂದೇ ರಾಷ್ಟ್ರ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ಪಕ್ಷ, ಒಬ್ಬನೇ ನಾಯಕ ಇವೆಲ್ಲ ಈ ನೆಲದ ಮಣ್ಣಿನ ಮಾತುಗಳಲ್ಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಬಸವಣ್ಣನವರ ನಾಡಿದು. ಗಾಂಧಿ ಎಂಬ ಮಹಾ ಚೇತನ ನೀಡಿದ ಬೆಳಕು ಆರದಿರಲಿ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ಸನತ್‌ ಕುಮಾರ ಬೆಳಗಲಿ

contributor

Similar News