ಕಲಬುರಗಿ ವಿಭಾಗದ 306 ಪ್ರೌಢ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕೋರ್ಸ್ ಪ್ರಾರಂಭ: ಅಪರ ಆಯುಕ್ತ ಡಾ.ಆಕಾಶ ಎಸ್.

Update: 2025-03-20 19:30 IST
ಕಲಬುರಗಿ ವಿಭಾಗದ 306 ಪ್ರೌಢ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಕೋರ್ಸ್ ಪ್ರಾರಂಭ: ಅಪರ ಆಯುಕ್ತ ಡಾ.ಆಕಾಶ ಎಸ್.
  • whatsapp icon

ರಾಯಚೂರು : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ “ಅಕ್ಷರ ಆವಿಷ್ಕಾರ” ಯೋಜನೆಯಡಿ 2024-25ನೇ ಸಾಲಿನಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ ವಿಭಾಗದ 306 ಪ್ರೌಢ ಶಾಲೆಗಳಲ್ಲಿ ಹೊಸದಾಗಿ ಮಾಹಿತಿ ತಂತ್ರಜ್ಞಾನ ಕೋರ್ಸ್ ನ್ನು ಪ್ರಾರಂಭಿಸಲಾಗಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ.ಆಕಾಶ್ ಎಸ್. ಅವರು ತಿಳಿಸಿದ್ದಾರೆ.

ನ್ಯಾಷನಲ್ ಸ್ಕೀಲ್ ಕ್ವಾಲಿಫಿಕೇಶನ್ ಫ್ರೇಮ್ ವರ್ಕ್ (National Skill Qualification Frame Work (NSQF) ಕಾರ್ಯಮದಡಿ ಸ್ಕೀಲ್ ಎಟ್ ಸ್ಕೂಲ್ (Skill at School) ಮಾದರಿಯಲ್ಲಿ ವಿದ್ಯಾರ್ಥಿಗಳ ಆಸಕ್ತಿ ಅನುಸಾರ ಹಾಗೂ ಪ್ರಚಲಿತವಾಗಿ ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ (Information Technology) ವಿಷಯವನ್ನು ಪ್ರೌಢಶಾಲಾ ಹಂತದಲ್ಲಿ ಪ್ರಾರಂಭಿಸಲು ಸರ್ಕಾರವು ಆದೇಶಿಸಿದೆ.

ಕರ್ನಾಟಕದಲ್ಲಿ ಕಲಬುರಗಿ ವಿಭಾಗವು ಇತರೆ ವಿಭಾಗಗಳಿಗಿಂತ ಕಂಪ್ಯೂಟರ್ ವಿಜ್ಞಾನ ವಿಷಯದ ವಿದ್ಯಾರ್ಥಿಗಳ ನೋಂದಣಿಯಲ್ಲಿ ಹಿಂದೆ ಉಳಿದಿದೆ. ಈ ಅಂತರವನ್ನು ಸರಿದೂಗಿಸಲು ಒಂದು ಕ್ರಾಂತಿಕಾರಿ ಹೆಜ್ಜೆ ಇಡಲಾಗಿದೆ. ಅದಕ್ಕಾಗಿ 2024-25ನೇ ಶೈಕ್ಷಣಿಕ ವರ್ಷದಲ್ಲಿ, ಎನ್.ಎಸ್.ಕ್ಯೂ.ಎಫ್.-ಐ.ಟಿ. (NSQF-IT) ಅನ್ನು ಕಲಬುರಗಿ ವಿಭಾಗದ 306 ಹೈಸ್ಕೂಲ್‍ಗಳಲ್ಲಿ ಹೊಸದಾಗಿ ಪ್ರಾರಂಭಿಸಲಾಗುತ್ತಿದೆ. ಈ ಅತ್ಯಂತ ಮಹತ್ವದ ಕಾರ್ಯಕ್ರಮವು ಕೆ.ಕೆ.ಆರ್.ಡಿ.ಬಿ.ಯ “ಅಕ್ಷರ ಆವಿಷ್ಕಾರ ”ಯೋಜನೆಯಿಂದ ಮುನ್ನಡೆಸಲ್ಪಟ್ಟಿದ್ದು, ವರ್ಷಕ್ಕೆ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವನ್ನು ಪಡೆಯಲಿದ್ದು, ಇದು ಈ ಪ್ರದೇಶದಲ್ಲಿ ಐಟಿ ಶಿಕ್ಷಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದ (UDISE: 2021-22)-ಅಂಕಿ-ಅಂಶಗಳನ್ನು ವಿಶ್ಲೇಷಿಸಿದಾಗ ಎನ್.ಎಸ್.ಕ್ಯೂ.ಎಫ್. (NSQF) ಶಿಕ್ಷಣ ಲಭ್ಯವಿರುವ ಶಾಲೆಗಳ ಸಂಖ್ಯೆಯ ಅನ್ವಯ, ದೇಶದಲ್ಲಿ ಕರ್ನಾಟಕವು 22ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ 2024-25ನೇ ಸಾಲಿಗೆ ಎನ್.ಎಸ್.ಕ್ಯೂ.ಎಫ್. (ಓSಕಿಈ) ವಿಷಯವನ್ನು ನೀಡುವ ಶಾಲೆಗಳ ಸಂಖ್ಯೆಯನ್ನು 575ಕ್ಕೆ ಹೆಚ್ಚಿಸಿದ್ದೇವೆ. ಈ ಶಾಲೆಗಳಲ್ಲಿ ಕಳೆದ ಶೈಕ್ಷಣಿಕ ವರ್ಷದವರೆಗೆ ಎಲ್ಲಾ ರಾಜ್ಯದಲ್ಲಿ ಒಟ್ಟು 32,567 ಎನ್.ಎಸ್.ಕ್ಯೂ.ಎಫ್ (NSQF) ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿದೆ ಎಂದರು.

ಇಂದು ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನದ ಪ್ರಪಂಚದಲ್ಲಿ ಕಂಪ್ಯೂಟರ್ ವಿಜ್ಞಾನ ವಿಷಯಗಳು ಇನ್ನೂ ಆಯ್ಕೆಯ ವಿಷಯಗಳಾಗಿ ಉಳಿದಿಲ್ಲ. ಅವು ಪ್ರತಿ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅತ್ಯವಶ್ಯಕ ಕೌಶಲ್ಯಗಳಾಗಿವೆ. ಉದ್ಯಮಗಳು ಆಟೋಮೇಶನ್, ಕೃತಕ ಜ್ಞಾನ (AI) ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ವೇಗವಾಗಿ ಅಳವಡಿಸಿಕೊಳ್ಳುವ ಮೂಲಕ, ತಂತ್ರಜ್ಞಾನವು ಮುಖ್ಯ ಅವಶ್ಯಕತೆಯಾಗಿ ಪರಿಗಣನೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಇದರ ಕೊರತೆ ಸಾಕಷ್ಟು ಇರುವುದರಿಂದ ಉದ್ಯಮಗಳ ಬೇಡಿಕೆ ಸರಿದೂಗಿಸಲು ಸಾಧ್ಯವಾಗದೆ ನಿರುದ್ಯೋಗಿಗಳಾಗುತ್ತಿದಾರೆ. ಈ ಹಿನ್ನಲೆಯಲ್ಲಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿನ ವೃತ್ತಿಗಳಿಗೆ ತಯಾರಿಸಲು ಐಟಿ ಶಿಕ್ಷಣವನ್ನು ಆರಂಭಿಕ ಹಂತದಿಂದ ಅಧ್ಯಯನದಲ್ಲಿ ತೊಡಗಿಸುವ ಅಗತ್ಯವಿದೆ ಎಂದರು.

ಈ ಅಗತ್ಯತೆಯನ್ನು ಪೂರೈಸಲು, ರಾಷ್ಟ್ರೀಯ ಕೌಶಲ್ಯ ಅರ್ಹತೆ ಚೌಕಟ್ಟಿನ (NSQF) ಅಡಿಯಲ್ಲಿ ವಿದ್ಯಾರ್ಥಿಗಳು ಕಲಿಕೆ ಪಡೆಯುವುದು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ, ಹೈಸ್ಕೂಲ್ ಹಂತದಲ್ಲಿ ಪರಿಚಯಿಸಲಾದ NSQF-IT ಶಿಕ್ಷಣ ಮೂಲಕ ಪ್ರಾರಂಭಿಕ ಹಂತದಲ್ಲಿಯೇ ತಂತ್ರಜ್ಞಾನದ ಅರಿವು ಮೂಡಿಸಿದಂತಾಗುತ್ತದೆ. ಇದು ಇಂದಿನ ಉದ್ಯಮ ಮಾರುಕಟ್ಟೆಗೆ ಸರಿಹೊಂದುವ ಕೋರ್ಸ್ ಅಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಕೌಶಲ್ಯ ಹೊಂದಿ, ಉದ್ಯೋಗ ಪಡೆಯುವಲ್ಲಿ ಸಮರ್ಥರಾಗುವರು. ಈ ಮೂಲಕ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಉತ್ತಮ ಸಾಧ್ಯತೆಗಳನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮವು ತಂತ್ರಜ್ಞಾನ-ಆಧಾರಿತ ಶಿಕ್ಷಣಕ್ಕೆ ಸಮಾನವಾದ ಪ್ರವೇಶವನ್ನು ಪಡೆದುಕೊಳ್ಳುವಲ್ಲಿ, ಭವಿಷ್ಯದಲ್ಲಿ ರಾಷ್ಟ್ರದಾದ್ಯಂತ ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುವಲ್ಲಿಯೂ ಮಹತ್ವದ ಹೆಜ್ಜೆಯಾಗಿದೆ. ಡಿಜಿಟಲ್ ಶಿಕ್ಷಣ ಬಲಗೊಳ್ಳುವ ಮೂಲಕ ನಾವು ಮುಂದೆ ಸಾಗುವ ಸಾಧ್ಯತೆ ಹೆಚ್ಚಾಗಲಿದೆ. ಇಂತಹ ಪ್ರಯತ್ನಗಳು ಶೈಕ್ಷಣಿಕ ದೃಷ್ಠಿಕೋನವನ್ನು ಬದಲಾಯಿಸಬಹುದು ಮತ್ತು ಯುವ ಮನಸ್ಸುಗಳಿಗೆ ಅನೇಕ ಅವಕಾಶಗಳನ್ನು ಒದಗಿಸಬಹುದು ಎಂದು ಹೇಳಿದರು.

ಈ ಕಾರ್ಯಕ್ರಮದ ಮೂಲಕ, ನಾವು ಐಟಿ ಶಿಕ್ಷಣದ ಮಹತ್ವ, ನಿರ್ದಿಷ್ಟ ಕೌಶಲ್ಯದ ಕಲಿಕೆಗೆ ಸಹಕಾರಿಯಾಗಲಿದೆ. ಇದರ ಪರಿಣಾಮವಾಗಿ NSQF-IT ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯತ್ತಿನ ಪೀಳಿಗೆಯೊಂದಿಗೆ ಸರಿಸಮಾನ ಸಾಧನೆಯ ದೃಷ್ಟಿಕೋನ ನೀಡಬಹುದಾಗಿದೆ. ನಾವು ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಗಣಕ ವಿಜ್ಞಾನ/ಮಾಹಿತಿ ತಂತ್ರಜ್ಞಾನವನ್ನು ಶಾಲಾ ಮಟ್ಟದಲ್ಲಿ ಒಂದು ವಿಷಯವನ್ನಾಗಿ ಆಯ್ಕೆ ಮಾಡಲು ಆಹ್ವಾನಿಸುತ್ತೇವೆ. ಪೋಷಕರು ಮತ್ತು ಸಮುದಾಯದಿಂದ ಉತ್ತಮ ಬೆಂಬಲ ದೊರೆಯುವ ವಿಶ್ವಾಸ ನಮಗಿದೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News