ಬದುಕು, ಖುಷಿ ನೀಡಿದ ರಂಗಭೂಮಿ

ಶಶಿಧರ ಅಡಪ ಅವರು ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿ, ಹೊಸದಿಲ್ಲಿಯ ಚಮನ್‌ಲಾಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈಗ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪುರಸ್ಕೃತರು. ಈ ಪ್ರಶಸ್ತಿ ಪ್ರದಾನ ನವೆಂಬರ್ ೮ರಂದು ಸಂಜೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯಲಿದೆ.

Update: 2023-10-20 08:25 GMT

‘‘ಪ್ರಶಸ್ತಿಗಳ ಬಗ್ಗೆ ಒಲವಿಲ್ಲ, ಕೊರಗಿಲ್ಲ. ರಂಗಭೂಮಿಯು ಬದುಕು ಕೊಟ್ಟಿದೆ, ಖುಷಿ ಕೊಟ್ಟಿದೆ, ಶ್ರೀಮಂತಿಕೆಯನ್ನೂ ಕೊಟ್ಟಿದೆ. ಆದರೆ ಸಾಣೇಹಳ್ಳಿಯ ಸಂಬಂಧ ಬೇರೆ. ಗುರುಗಳಾದ ಸಿಜಿಕೆ ಹಾಗೂ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅವರೊಂದಿಗೆ ಭಾವನಾತ್ಮಕ ಸಂಬಂಧವಿದೆ’’ ಎಂದು ಮಾತಿಗೆ ಮುಂದಾದರು ಹಿರಿಯ ರಂಗಕರ್ಮಿ ಶಶಿಧರ ಅಡಪ.

ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘವು ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತೀ ವರ್ಷ ನೀಡುವ ಪ್ರತಿಷ್ಠಿತ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ (2023ನೇ ಸಾಲಿನದು) ಭಾಜನರಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.

‘‘ಸಾಣೇಹಳ್ಳಿಯ ನಾಟಕೋತ್ಸವಕ್ಕೆ ಸೆಟ್ ಸಿದ್ಧಪಡಿಸಿರುವೆ. ಅನುಭವ ಮಂಟಪದ ಸ್ತಬ್ಧಚಿತ್ರ ಮಾಡಿದ್ದೆ. ಅದು ಇಡೀ ರಾಜ್ಯದಾದ್ಯಂತ ತಿರುಗಾಡಿದೆ. ಇದನ್ನು ನೋಡಲು ವರ್ಕ್ ಸ್ಟುಡಿಯೋಗೆ ಪಂಡಿತಾರಾಧ್ಯ ಸ್ವಾಮೀಜಿ ಬಂದಿದ್ದರು. ಅವರಿಗೆ ಮಾಡಿಕೊಟ್ಟ ಅನುಭವ ಮಂಟಪ 25 ಅಡಿ ಎತ್ತರದ್ದು. ಇದನ್ನೇ 47 ಅಡಿಗೆ ಹಿಗ್ಗಿಸಿದ ಅನುಭವ ಮಂಟಪವು ದಿಲ್ಲಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪ್ರದರ್ಶನಗೊಂಡಿತು. ಹೀಗೆಯೇ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಸಿ.ಬಸವಲಿಂಗಯ್ಯ ನಿರ್ದೇಶಿಸಿದ ‘ಮಲೆಗಳಲ್ಲಿ ಮದುಮಗಳು’ ನಾಟಕ, ಬಸವಲಿಂಗಯ್ಯ ನಿರ್ದೇಶನದ ‘ಮನುಷ್ಯಜಾತಿ ತಾನೊಂದೇ ವಲಂ’ ನಾಟಕಕ್ಕೆ ಮಾಡಿದ ಸೆಟ್ ಏಳು ಲಾರಿ ಲೋಡ್ ಆಗಿತ್ತು. ಸುಮಾರು 27 ಕೆಲಸಗಾರರ ತಂಡ ನಾಟಕ ಪ್ರದರ್ಶನವಿದ್ದ ಊರಿಗೆ ಹೋಗಿ ಎರಡು ದಿನಗಳವರೆಗೆ ಸೆಟ್ ಹಾಕಬೇಕಾಗಿತ್ತು. ಕನಿಷ್ಠ 60 ಕೆಲಸಗಾರರು ನಮ್ಮ ತಂಡದಲ್ಲಿದ್ದು, ಒಂದೊಂದು ಬಾರಿ ನೂರಕ್ಕೂ ಹೆಚ್ಚು ಜನರು ಬೇಕಾಗುತ್ತಾರೆ. ಶ್ರಮದ ಮೂಲದ ಕೆಲಸಗಳಿವು. ಭಾರ ಹೊರುವವರು, ಲಾರಿಗೆ ಹಾಕುವವರು ಅಗತ್ಯ ಬೇಕು. ಅವರಿಗೆ ಕೆಲಸ ಕೊಟ್ಟು, ಸರಿಯಾದ ಸಂಬಳ ಕೊಟ್ಟು, ಉಳಿಯಲು ಜಾಗ ಕೊಡುವುದು ಮುಖ್ಯ. ಕೇವಲ ಕಲಾವಿದ ಎನ್ನುವುದಷ್ಟೇ ಮುಖ್ಯವಲ್ಲ, ಒಳ್ಳೆಯ ಸಂಘಟಕರೂ ಆಗಿರಬೇಕು’’ ಎನ್ನುವ ಮಾತು ಗಮನಾರ್ಹ.

‘‘ರಂಗಭೂಮಿಯು ಕಾಲಕಾಲಕ್ಕೆ ಹೊಸತನವನ್ನು ಬಯಸುತ್ತದೆ, ಸವಾಲನ್ನೂ ಎದುರಿಸುತ್ತದೆ. ಇದು ರಂಗಸಜ್ಜಿಕೆಗೂ ಸಂಬಂಧಪಡುತ್ತದೆ. ಹೊಸ ತಾಂತ್ರಿಕತೆ ಗಳನ್ನು ರೂಢಿಸಿ ಕೊಳ್ಳದಿದ್ದರೆ, ಸವಾಲುಗಳನ್ನು ಎದುರಿಸದಿದ್ದರೆ ಕಷ್ಟ’’ ಎನ್ನುವ ಸಲಹೆ ಅವರದು.

‘‘ರಂಗ ವಿನ್ಯಾಸಕಾರರು, ನಿರ್ದೇಶಕರ ಬೇಡಿಕೆ ಮೇರೆಗೆ ರಂಗಸಜ್ಜಿಕೆ ವಿನ್ಯಾಸಗೊಳಿಸಬೇಕು. ನಟರ ಚಲನವಲನ, ದೃಶ್ಯದ ರೂಪದಲ್ಲಿ ನಿರ್ದೇಶಕರಿಗೆ ಕಾಣುವುದು. ಹೀಗಾಗಿ ನಿರ್ದೇಶಕರಿಗೆ ಪೂರಕವಾಗಿ ವಿನ್ಯಾಸಕಾರ ಕಾರ್ಯನಿರ್ವಹಿಸಬೇಕು. ಆದರೆ ನಟರ ಓಡಾಟಕ್ಕೆ ಜಾಗ ಮಾಡಿಕೊಡಬೇಕು, ಅದು ಸ್ನೇಹಪರವಾಗಿರಬೇಕು. ಅಂದರೆ ನಮ್ಮ ಸೃಷ್ಟಿಗಳೆಲ್ಲ ನಟರಿಗೆ ಪೂರಕವಾಗಿರಬೇಕು. ಬಿರುದಾವಳಿ, ಕತ್ತಿ, ಗುರಾಣಿ ಮೊದಲಾದವುಗಳನ್ನು ನಾಟಕದ ಹಿಂದಿನ ದಿನ ಕೊಡುವ ಬದಲು ವಾರದ ಮೊದಲೇ ಕೊಡಬೇಕು. ಇದು ತಾಲೀಮಿಗೆ ಅನುಕೂಲವಾಗುವುದು’’ ಎನ್ನುವ ಕಿವಿಮಾತು ಅವರದು.


‘‘ಎಂಭತ್ತರ ದಶಕದವರೆಗೆ ನಾಟಕದ ವಿನ್ಯಾಸವನ್ನು ಸ್ವೀಕರಿಸುವ ಕ್ರಮ ಸರಳವಾಗಿತ್ತು. ತುಂಬಾ ಸಂಕೀರ್ಣವಾಗಿರಲಿಲ್ಲ. 30 ವರ್ಷಗಳ ಹಿಂದೆ ರೀಪರ್, ಗೋಣಿಚೀಲ, ಪ್ಲಾಸ್ಟರ್ ಆಫ್ ಪ್ಯಾರಿಸ್, ಮಣ್ಣಿನ ಬಣ್ಣಗಳು... ಇವಿಷ್ಟೇ ಇದ್ದವು ಜೊತೆಗೆ ಸೊಳ್ಳೆಪರದೆ ಬಳಸುತ್ತಿದ್ದರು. ಆಗೆಲ್ಲ 3-4 ಹುಡುಗರು ಸೇರಿಕೊಂಡು ರಂಗಸಜ್ಜಿಕೆಯನ್ನು ಸಜ್ಜುಗೊಳಿಸುತ್ತಿದ್ದರು. ಅಂದರೆ ಎಲ್ಲರೂ ಕೈಜೋಡಿಸಿ ನಾಟಕಕ್ಕೆ ಬೇಕಾದ ಸೆಟ್ ಸಿದ್ಧಪಡಿಸುತ್ತಿದ್ದರು. ಈಗ ಸೆಟ್ ಮಾಡುವ ವೃತ್ತಿಪರರು ಸಿದ್ಧಪಡಿಸುತ್ತಾರೆ, ತಂಡಗಳು ಕೊಂಡು ಹೋಗುತ್ತವೆ’’ ಎನ್ನುವ ಮೂಲಕ ರಂಗಸಜ್ಜಿಕೆ ವಿನ್ಯಾಸಗೊಳಿಸುವವರ ಬಗೆಯನ್ನು ತೆರೆದಿಟ್ಟರು.

‘ರಂಗಸಜ್ಜಿಕೆ ಮಾಡುವ ಕ್ರಮ’ ಇವತ್ತು ಬಹಳ ಬದಲಾಗಿದೆ. ಮಾಲತೇಶ ಬಡಿಗೇರ, ಪ್ರಮೋದ್ ಶಿಗ್ಗಾಂವ ಅವರು ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ. ಮಾಲತೇಶ ಬಡಿಗೇರ ಅವರು ಸ್ಪಾಂಜ್ ಶೀಟ್ ಬಳಸಿ ಸೆಟ್ ಸೃಷ್ಟಿಸುತ್ತಾರೆ. ಹೀಗೆ ಸೆಟ್ ವಿನ್ಯಾಸದ ಸಾಧ್ಯತೆಗಳು ಬದಲಾದವು. ಇನ್ನೊಂದು ಕಡೆ; ರಂಗಸಜ್ಜಿಕೆ ಸರಳವಾಗಿರಬೇಕು, ಎತ್ತಿಕೊಂಡು ಹೋಗುವ ಹಾಗಿರಬೇಕು ಎಂದು ಹವ್ಯಾಸಿ ತಂಡಗಳು ಬಯಸುತ್ತವೆ. ಇದರ ಉದ್ದೇಶ; ಆರ್ಥಿಕ ಅವಲಂಬನೆ ಹಾಗೂ ಎತ್ತಿಕೊಂಡು ಹೋಗುವ ಸಾಧ್ಯತೆ. ಆದರೆ ಬೆಂಗಳೂರಿನ ರಂಗ ಸಂಪದ ತಂಡಕ್ಕೆ ಬಿ.ಸುರೇಶ್ ಅವರು ನಿರ್ದೇಶಿಸಿದ ‘ಲೋಕದ ಒಳಹೊರಗೆ’ ನಾಟಕದ ರಂಗಸಜ್ಜಿಕೆಯು ಒಂದು ಲಾರಿಯ ಲೋಡ್ ಆಗುತ್ತದೆ. ಈ ಬಗೆಯ ರಂಗಸಜ್ಜಿಕೆಗೆ ಎಲ್ಲ ತಂಡಗಳು ಮುಂದಾಗುವುದಿಲ್ಲ. ಸರಳವಾಗಿರಬೇಕು ಎಂದು ಬಯಸುವುದು ಸಹಜ. ಎನ್. ಮಂಗಳಾ ಅವರು ತಮ್ಮ ಸಂಚಾರಿ ತಂಡಕ್ಕೆ ಜಯಂತ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಹಾಗೂ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಕಥೆಗಳನ್ನು ಆಧರಿಸಿ ‘ಹೀಗೆರಡು ಕಥೆಗಳು’ ನಾಟಕವನ್ನು ನಿರ್ದೇಶಿಸಿದ್ದರು. ಈ ನಾಟಕಕ್ಕೆ ಫ್ಲೆಕ್ಸ್ ಮೂಲಕ ಸೆಟ್ ಸೃಷ್ಟಿಸಿದ್ದೆ. ಹೀಗೆಯೇ ಬಿ.ಜಯಶ್ರೀ ಅವರ ‘ಕೃಷ್ಣ ಪಾರಿಜಾತ’ ನಾಟಕಕ್ಕೆ ತೆಳುವಾದ ಕಾರ್ಪೆಟ್ ಬಟ್ಟೆಯನ್ನು 12 ಅಡಿ ಎತ್ತರದ ಮರವನ್ನಾಗಿ ಮಾಡಿಕೊಟ್ಟಿರುವೆ’’ ಎಂದು ನೆನಪಿಗೆ ಜಾರಿದರು.

ಇಂತಹ ಅಡಪ ಅವರ ಊರು ಮಂಗಳೂರು ಸಮೀಪದ ಮುತ್ತೂರು ಗ್ರಾಮದ ಬಾಳಿಕೆ ಮನೆ (ಜನನ- 1 ಸೆಪ್ಟಂಬರ್ 1955). ಓದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ. ಆಮೇಲೆ ಬೆಂಗಳೂರಲ್ಲಿ ನೆಲೆಯೂರಿ ನಾಟಕಗಳಿಗೆ ರಂಗಸಜ್ಜಿಕೆಗಾಗಿ ದುಡಿದರು. ಅದು ಭರ್ತಿ 40 ವರ್ಷಗಳಿಂದ 125ಕ್ಕೂ ಹೆಚ್ಚು ನಾಟಕಗಳಿಗೆ ರಂಗವಿನ್ಯಾಸಗೊಳಿಸಿದ್ದಾರೆ. ಬಿ.ವಿ.ಕಾರಂತ, ಪ್ರಸನ್ನ, ರಾಬಿನ್ ಹರ್ಫಾರ್ಡ್, ಸಿಜಿಕೆ, ಶಂಕರನಾಗ್, ಆರ್.ನಾಗೇಶ್, ಕಾನ್‌ಸ್ಟಾಂಝಾ ಮಕಾರಸ್, ಸಿ.ಆರ್.ಸಿಂಹ, ಎಂ.ಎಸ್.ಸತ್ಯು, ಬಿ.ಜಯಶ್ರೀ, ಸಿ.ಬಸವಲಿಂಗಯ್ಯ, ವಿ.ರಾಮಮೂರ್ತಿ, ಪ್ರಕಾಶ್ ಬೆಳವಾಡಿ, ಅಜಿತ್ ಸಲ್ಡಾನಾ, ಅರ್ಜುನ್ ಸಜ್ನಾನಿ, ವಿಜಯ್ ನಾಯರ್, ಮಲ್ಲಿಕಾ ಪ್ರಸಾದ್, ಶ್ರೀನಿವಾಸಪ್ರಭು, ಝುಲ್ಫಿಯಾ ಶೇಕ್, ಮಿರಿಯಮ್ ಎಂಡೋರಸ್, ಸಂದೀಪ್ ಪೈ, ಎನ್.ಮಂಗಳಾ, ಕೃಷ್ಣಮೂರ್ತಿ ಕವತ್ತಾರ್ ಮೊದಲಾದವರ ನಾಟಕಗಳಿಗೆ ರಂಗವಿನ್ಯಾಸಗೊಳಿಸಿದ ಅನುಭವ ದೊಡ್ಡದು.

ನಾಟಕಗಳಲ್ಲದೆ ಸಿನೆಮಾ, ಧಾರಾವಾಹಿ, ರಿಯಾಲಿಟಿ ಷೋಗಳಿಗೂ ವಿನ್ಯಾಸಗೊಳಿಸುತ್ತಿದ್ದಾರೆ. 67 ವರ್ಷ ವಯಸ್ಸಿನ ಅಡಪ ಅವರು ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿ, ಹೊಸದಿಲ್ಲಿಯ ಚಮನ್‌ಲಾಲ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಈಗ ‘ಶ್ರೀ ಶಿವಕುಮಾರ ಪ್ರಶಸ್ತಿ’ ಪುರಸ್ಕೃತರು. ಈ ಪ್ರಶಸ್ತಿ ಪ್ರದಾನ ನವೆಂಬರ್ 8ರಂದು ಸಂಜೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯಲಿದೆ. 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಗಣೇಶ ಅಮೀನಗಡ

contributor

Similar News