ಸ್ವಾತಂತ್ರ್ಯ ಮತ್ತು ಸಂವಿಧಾನ ಉಳಿಸಿಕೊಳ್ಳುವ ಸವಾಲು

Update: 2023-08-15 05:41 GMT

First Independence day of India August 15, 1947

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇಂದು ಎಪ್ಪತ್ತೇಳನೇ ಸ್ವಾತಂತ್ರ್ಯ ದಿನ. ಲಕ್ಷಾಂತರ ಜನರ ತ್ಯಾಗ, ಬಲಿದಾನದ ಜೊತೆ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳವಳಿಯ ಪರಿಣಾಮವಾಗಿ ಭಾರತ ಬ್ರಿಟಿಷ್ ದಾಸ್ಯದಿಂದ ಮುಕ್ತಿ ಪಡೆಯಿತು. ಆದರೆ ರಾಜಕೀಯ ಅಧಿಕಾರ ಹಸ್ತಾಂತರವಾದಾಗ ಇದು ಜನಸಾಮಾನ್ಯರಿಗೆ ದೊರೆತ ನೈಜ ಸ್ವಾತಂತ್ರ್ಯವಲ್ಲ ಎಂದು ಅನೇಕರು ವ್ಯಾಖ್ಯಾನಿಸಿದರು. ಕವಿ ಸಿದ್ದಲಿಂಗಯ್ಯನವರು ‘‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ, ಟಾಟಾ, ಬಿರ್ಲಾ ಜೇಬಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’’ ಎಂದು ಪದ್ಯ ಬರೆದರು. ಅದು ಮುಂದೆ ಜನ ಚಳವಳಿಗಳ ಹಾಡಾಯಿತು. ಈಗ ಎಪ್ಪತ್ತಾರು ವರ್ಷಗಳ ನಂತರ ಈ ಸ್ವಾತಂತ್ರ್ಯಕ್ಕೂ ಗಂಡಾಂತರ ಎದುರಾಗಿದೆ. ಬೇಲಿ ಹೊಲವನ್ನು ಮೇಯ್ದಂತೆ ಸ್ವಾತಂತ್ರ್ಯ ಮತ್ತು ಸಂವಿಧಾನವನ್ನು ಕಾಪಾಡುವ ಸಾಂವಿಧಾನಿಕ ಹೊಣೆ ಹೊತ್ತವರಿಂದಲೇ ಸ್ವಾತಂತ್ರ್ಯ ಮತ್ತು ಸಂವಿಧಾನದ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ ಎಂಬ ಆತಂಕ ಉಂಟು ಮಾಡುವಂತಹ ಬೆಳವಣಿಗೆಗಳು ನಡೆದಿವೆ.

ಎಪ್ಪತ್ತಾರು ವರ್ಷಗಳ ಹಿಂದೆ ಭಾರತ ಸ್ವತಂತ್ರಗೊಂಡಾಗ ನಿಜವಾದ ಅರ್ಥದಲ್ಲಿ ಇದೊಂದು ದೇಶವಾಗಿರಲಿಲ್ಲ. ಇಲ್ಲಿ ಐದು ನೂರಕ್ಕೂ ಹೆಚ್ಚು ಅರಸೊತ್ತಿಗೆಗಳು ಇದ್ದವು. ಯಾವುದೇ ಆಡಳಿತಕ್ಕೊಳಪಡದ ಬುಡಕಟ್ಟು ಸಮುದಾಯಗಳಿದ್ದವು. ಇದು ಯುರೋಪಿಯನ್ ದೇಶಗಳಂತೆ ಯಾವುದೇ ಒಂದು ಧರ್ಮದ, ಸಮುದಾಯದ, ಜನಾಂಗದ, ಭಾಷೆಯ, ಸಂಸ್ಕೃತಿಯನ್ನು ಹೊಂದಿದ ದೇಶವಾಗಿರಲಿಲ್ಲ. ಹಲವಾರು ಧರ್ಮಗಳು, ಸಂಸ್ಕೃತಿಗಳು, ಭಾಷೆಗಳು, ಜನಾಂಗಗಳು ಮತ್ತು ರಾಷ್ಟ್ರೀಯತೆಗಳನ್ನು ಹೊಂದಿದ ವಿಭಿನ್ನ ಭೂ ಪ್ರದೇಶವಾಗಿತ್ತು. ಇದರ ಸಂಪೂರ್ಣ ಅರಿವಿದ್ದ ನಮ್ಮ ಸ್ವಾತಂತ್ರ್ಯ ಚಳವಳಿಯ ನೇತಾರರು ಮುಖ್ಯವಾಗಿ ಮಹಾತ್ಮಾ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಪಂಡಿತ ಜವಾಹರಲಾಲ್ ನೆಹರೂ, ಶಹೀದ್ ಭಗತ್ ಸಿಂಗ್, ಪಟೇಲ್, ವೌಲಾನಾ ಅಬುಲ್ ಕಲಾಂ ಆಝಾದ್ ಮೊದಲಾದವರು ಎಲ್ಲ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸ್ವಾತಂತ್ರ್ಯ ಚಳವಳಿಯನ್ನು ರೂಪಿಸಿದರು. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಎಲ್ಲ ಸಮುದಾಯಗಳನ್ನು ಬೆಸೆದು ಒಂದು ಮಾಡುವ ಆದರೆ ಅವುಗಳ ವೈವಿಧ್ಯತೆಯನ್ನು ಗೌರವಿಸುವ ಸಂವಿಧಾನವನ್ನು ರೂಪಿಸಿದರು.ಇದರಿಂದಾಗಿ ಸ್ವತಂತ್ರ ಭಾರತವನ್ನು ಮನುವಾದಿ ಹಿಂದೂರಾಷ್ಟ್ರವನ್ನಾಗಿ ಮಾಡುವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರ ಹುನ್ನಾರ ವಿಫಲಗೊಂಡಿತು. ಭಾರತ ಜಾತ್ಯತೀತ ಒಕ್ಕೂಟ ರಾಷ್ಟ್ರವಾಗಿ ಹೊರಹೊಮ್ಮಿತು. ಒಕ್ಕೂಟ ಎನ್ನುವ ಪದದಲ್ಲೇ ಎಲ್ಲ ವಿಭಿನ್ನ ಜನ ಸಾಮುದಾಯಗಳನ್ನು ಗೌರವಿಸುವ ಭಾವನೆ ಅಡಕವಾಗಿದೆ. ಇದು ಕೆಲವರಿಗೆ ಇಷ್ಟವಾಗಲಿಲ್ಲ.

ಭಾರತದ ಮೊದಲ ಪ್ರಧಾನಿ ನೆಹರೂ ನಾಯಕತ್ವದಲ್ಲಿ ಭಾರತ ಆರಂಭದ ಎರಡೇ ದಶಕದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿ ಜಗತ್ತಿನ ಪ್ರಭಾವಿ ದೇಶವಾಗಿ ಹೊರಹೊಮ್ಮಿತು.

ಇಂತಹ ಬಹುತ್ವ ಭಾರತ ಈಗ ಅಂದರೆ ಕಳೆದ ಮೂರು ದಶಕಗಳಿಂದ ಅನೈಕ್ಯತೆಯ ಅಪಾಯವನ್ನು ಎದುರಿಸುತ್ತಿದೆ. ನಿರ್ದಿಷ್ಟವಾಗಿ 2014ರ ನಂತರ ಒಕ್ಕೂಟ ಸರಕಾರದ ಸೂತ್ರ ಹಿಡಿದವರು ಸ್ವತಂತ್ರ ಭಾರತದ ಬಹುತ್ವದ ಸ್ವರೂಪವನ್ನು ಬದಲಿಸಿ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆ, ಏಕ ಜನಾಂಗೀಯ ದೇಶವನ್ನಾಗಿ ಮಾಡಲು ಮಸಲತ್ತು ನಡೆಸಿದ್ದಾರೆ. ಇದರ ಪರಿಣಾಮವಾಗಿ ಮಣಿಪುರ ಸೇರಿದಂತೆ ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಕಿಡಿ ಹಚ್ಚಿ ದಳ್ಳುರಿ ಏಳುವಂತೆ ಮಾಡಿ ಯಾರು ಚಳಿ ಕಾಯಿಸಿಕೊಳ್ಳುತ್ತಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಮಣಿಪುರಕ್ಕೆ ಹೋಗಿ ಸಮಾಧಾನ ಮಾಡಿ ಬೆಂಕಿಯನ್ನು ನಂದಿಸಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿ ಅಲ್ಲಿಗೆ ಹೋಗಲಿಲ್ಲ. ಸಂಸತ್ತಿಗೆ ಬರಲೂ ತಪ್ಪಿಸಿಕೊಂಡು ಓಡಾಡುತ್ತಿರುವಾಗ ಪ್ರತಿಪಕ್ಷಗಳು ಸಂಸತ್ತಿಗೆ ಕರೆಸಿಕೊಳ್ಳಲು ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಬೇಕಾಯಿತು. ಆಗ ಅನಿವಾರ್ಯವಾಗಿ ಸದನಕ್ಕೆ ಬಂದ ವ್ಯಕ್ತಿ ಎರಡೂವರೆ ತಾಸುಗಳ ಕಾಲ ತೌಡು ಕುಟ್ಟಿದ್ದನ್ನು ಬಿಟ್ಟರೆ ಮಣಿಪುರದ ಬಗ್ಗೆ ಯಾವುದೇ ನಿರ್ದಿಷ್ಟ ಉತ್ತರವನ್ನು ನೀಡಲಿಲ್ಲ.

ಈಗ ಅಧಿಕಾರದಲ್ಲಿ ಇರುವವರು ಯಾವುದೇ ಚರ್ಚೆ, ಸಂವಾದ, ಪರಾಮರ್ಶೆಗಳಿಲ್ಲದೆ ಕಾನೂನುಗಳಿಗೆ ತರುತ್ತಿರುವ ತಿದ್ದುಪಡಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ನಡೆಸಿರುವ ಹುನ್ನಾರಗಳು, ಪತ್ರಿಕಾ ಸ್ವಾತಂತ್ರ್ಯವನ್ನು ಸಮಾಧಿ ಮಾಡಲು ನಡೆಸಿರುವ ಕುತಂತ್ರಗಳು ಇವುಗಳನ್ನು ಗಮನಿಸಿದಾಗ ಭಾರತದ ಸ್ವಾತಂತ್ರ್ಯ ಮತ್ತು ಸಂವಿಧಾನಗಳಿಗೆ ಬಹುದೊಡ್ಡ ಅಪಾಯ ಎದುರಾಗಿರುವುದು ಸ್ಪಷ್ಟವಾಗುತ್ತದೆ.

2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಭಾರತದಲ್ಲಿ ಕೋಮು ಧ್ರುವೀಕರಣ ಮಾಡುವ ಜೊತೆಗೆ ಸಮುದಾಯಗಳ ನಡುವೆ ಕಲಹದ ಕಿಡಿ ಹೊತ್ತಿಸುವ ವಿಭಜನಕಾರಿ ಚಟುವಟಿಕೆಗಳನ್ನು ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲಾ ಆರೋಗ್ಯಕರ ಮನಸ್ಸುಗಳಿಗೆ ಗೊತ್ತಿದೆ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿರಿಸಿಕೊಂಡು ನಡೆಯುತ್ತಿರುವ ದಾಳಿಗಳು, ವ್ಯವಸ್ಥಿತವಾಗಿ ಹರಡಲಾಗುತ್ತಿರುವ ಸುಳ್ಳು ಸುದ್ದಿಗಳು, ಹರ್ಯಾಣದ ಇತ್ತೀಚಿನ ವಿದ್ಯಮಾನಗಳು ಆತಂಕಕಾರಿಯಾಗಿವೆ. ಇಂತಹ ಗಂಭೀರ ಸನ್ನಿವೇಶದಲ್ಲೂ ಕಿಂಚಿತ್ ವಿಷಾದವಿಲ್ಲದೆ ವಿರೋಧ ಪಕ್ಷಗಳನ್ನು ಶತ್ರುಗಳಂತೆ ಕಾಣುವ, ಭಿನ್ನಾಭಿಪ್ರಾಯವನ್ನು ಲೇವಡಿ ಮಾಡುವ ಪ್ರಧಾನಿಗಳ ವರ್ತನೆ ಸದಭಿರುಚಿಯಿಂದ ಕೂಡಿಲ್ಲ.

ಏಕ ಪಕ್ಷದ, ಏಕ ಪರಿವಾರದ, ಏಕ ವ್ಯಕ್ತಿಯ ಸರ್ವಾಧಿಕಾರಕ್ಕೆ ಯಾವುದೇ ಅಡ್ಡಿಯಾಗಬಾರದೆಂದು ಸುಪ್ರೀಂ ಕೋರ್ಟನ್ನು ಮತ್ತು ಅದರ ತೀರ್ಪುಗಳನ್ನು ನಿಷ್ಕ್ರಿಯಗೊಳಿಸುವ ಸಲುವಾಗಿ ಆಡಳಿತ ಪಕ್ಷ ಸಂಸತ್ತಿನಲ್ಲಿರುವ ಬಹುಮತವನ್ನು ಬಳಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ರಾಜ್ಯಗಳ ಸ್ವಾಯತ್ತತೆಯನ್ನು ನಾಶ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಂತಹಂತವಾಗಿ ನಿರ್ನಾಮ ಮಾಡುವುದು ಭಾರತಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡಲಿದೆ. ಈ ಅಪಾಯದಿಂದ ಬಹುತ್ವ ಭಾರತವನ್ನು ಕಾಪಾಡುವುದು ಎಲ್ಲಾ ಪ್ರಜ್ಞಾವಂತ ಜನಸಾಮಾನ್ಯರ ಆದ್ಯ ಕರ್ತವ್ಯವಾಗಿದೆ.

ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕೂಡ ಜನಾಂಗೀಯ ಆಧಾರದಲ್ಲಿ ವಿಭಜನೆಗೊಂಡಿವೆ. ಅಲ್ಲಿ ತುರ್ತಾಗಿ ಶಾಂತಿಯನ್ನು ಮರು ಸ್ಥಾಪಿಸಬೇಕಾಗಿದೆ. ಅದಕ್ಕಾಗಿ ತಮ್ಮ ಸರಕಾರ ಏನು ಮಾಡಲಿದೆ ಎಂಬುದನ್ನು ಸಂಸತ್ತಿಗೆ ವಿವರಿಸಬೇಕಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದನ್ನು ಬಿಟ್ಟು ಮುಂಬರುವ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯವನ್ನು ಸಂಸತ್ತಿನಿಂದಲೇ ಆರಂಭಿಸಿದರೇನೋ ಎಂಬಂತೆ ಪ್ರತಿಪಕ್ಷಗಳ ಬಗ್ಗೆ ಲೇವಡಿ ಮಾತುಗಳನ್ನು ಆಡಿದರು .

ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಭಾರತದ ಸ್ವಾತಂತ್ರ್ಯ ಮತ್ತು ಸಂವಿಧಾನಗಳು ಅಪಾಯದಲ್ಲಿ ಇರುವುದು ಸ್ಪಷ್ಟವಾಗುತ್ತದೆ. ಪ್ರಭುತ್ವದ ಸೂತ್ರ ಯಾರ ಕೈಗೆ ಹೋಗಬಾರದಿತ್ತೋ ಅವರ ಕೈಗೆ ಹೋಗಿದೆ. ಇಂಥ ಸನ್ನಿವೇಶದಲ್ಲಿ ಗಾಂಧೀಜಿ, ಬಾಬಾಸಾಹೇಬರು, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ವೌಲಾನಾ ಆಝಾದ್‌ರ ಪರಿಕಲ್ಪನೆಯ ಸ್ವತಂತ್ರ, ಜಾತ್ಯತೀತ ಭಾರತವನ್ನು ಕಾಪಾಡಿಕೊಳ್ಳಲು ಎಲ್ಲಾ ಭಾರತೀಯರು ಪಣ ತೊಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News