ರಾಜ್ಯದ ಹಗರಣಗಳ ಬಗ್ಗೆ ಸಮಗ್ರ ತನಿಖೆಯಾಗಲಿ

Update: 2023-08-01 05:11 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ತಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಾಂತರಗಳು, ಹಗರಣಗಳು, ಎಲ್ಲಕ್ಕಿಂತ ಮುಖ್ಯವಾಗಿ ಶೇ. 40 ಕಮಿಶನ್ ಹಗರಣದ ಕುರಿತು ತನಿಖೆ ನಡೆಸುವುದಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಸೇರಿದಂತೆ ಕಾಂಗ್ರೆಸ್ ನಾಯಕರು ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಜನತೆಗೆ ಮಾತು ಕೊಟ್ಟಿದ್ದರು. ಆ ಮಾತನ್ನು ಉಳಿಸಿಕೊಳ್ಳಲು ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಶೇ. 40 ಕಮಿಶನ್ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದ ಕರ್ನಾಟಕ ಗುತ್ತಿಗೆದಾರರ ಸಂಘ ಈಗಲೂ ಸಮಗ್ರ ತನಿಖೆಗೆ ಒತ್ತಾಯಿಸುತ್ತಲೇ ಇದೆ.

ಶೇ.40 ಹಗರಣದ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲು ಸರಕಾರ ಉದ್ದೇಶಿಸಿದೆ ಎಂದು ತಿಳಿದು ಬಂದಿದೆ. ಅದೇ ರೀತಿ ಬಿಟ್‌ಕಾಯಿನ್, ಪಿಎಸ್‌ಐ ನೇಮಕ ಹಗರಣ ಇವುಗಳ ಬಗೆಗೂ ತನಿಖೆ ನಡೆದು ಸತ್ಯ ಸಂಗತಿ ಬಯಲಿಗೆ ಬರುವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾಗಿದೆ. ಬಿಟ್ ಕಾಯಿನ್ ಸಂಬಂಧದ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ. ಪಿಎಸ್‌ಐ ನೇಮಕ ಹಗರಣದ ತನಿಖೆಗೆ ನ್ಯಾಯಮೂರ್ತಿ ವೀರಪ್ಪಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ.

ಹಗರಣಗಳನ್ನು ಬಿಟ್ಟು ಬೇರೇನನ್ನೂ ಮಾಡದ ಹಿಂದಿನ ಬಿಜೆಪಿ ಸರಕಾರದ ಕೋವಿಡ್ ಹಗರಣ ಇನ್ನೂ ಭಯಾನಕವಾಗಿದೆ. ಇದು ಯಾರೋ ಆಗದವರು ಮಾಡಿದ ಆರೋಪವಲ್ಲ. ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಈ ದೋಷಾರೋಪ ಮಾಡಿದೆ. ಸಾವುಗಳ ಸಂಖ್ಯೆಯಲ್ಲಿ ಗೋಲ್‌ಮಾಲ್ ಮಾಡಿ ಕಡಿಮೆ ಲೆಕ್ಕವನ್ನು ತೋರಿಸಲಾಗಿದೆ. ಬಿ.ಎಸ್.ಯಡಿಯೂರಪ್ಪಮುಖ್ಯ ಮಂತ್ರಿಯಾಗಿದ್ದ ಹಾಗೂ ಕೆ.ಸುಧಾಕರ್ ಆರೋಗ್ಯ ಮಂತ್ರಿಯಾಗಿದ್ದ ಕಾಲಾವಧಿಯಲ್ಲಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಭಾರೀ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಈ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಜನಸಾಮಾನ್ಯರು ಕೋವಿಡ್ ಪಿಡುಗಿನಿಂದ ಸಾಯುತ್ತಿರುವಾಗ ಈ ಲಂಚಬಾಕ ದಗಾಕೋರರು ಔಷಧಿಗಳು ಮತ್ತು ಯಂತ್ರೋಪಕರಣಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಈ ವರದಿ ನೇರವಾಗಿ ಹೇಳಿದೆ. ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆ ನೆಪದಲ್ಲಿ ಭಾರೀ ಭ್ರಷ್ಟಾಚಾರಗಳು ನಡೆದಿವೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ 2020 ಮತ್ತು 2021ರ ಕಾಲಾವಧಿಯಲ್ಲಿ ಸಮಗ್ರ ವಿಚಾರಣೆ ನಡೆಸಿತು. ಈ ಸಮಿತಿಗೆ ಅಗತ್ಯದ ದಾಖಲೆಗಳನ್ನು ನೀಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಸಾಕಷ್ಟು ಸತಾಯಿಸಿದರು. ವಿಶೇಷ ಲೆಕ್ಕ ಪರಿಶೋಧನೆ ನಡೆಸಬೇಕೆಂಬ ಸಮಿತಿಯ ಮನವಿಯನ್ನು ತಿರಸ್ಕರಿಸಲಾಯಿತು. ಇಷ್ಟೆಲ್ಲ ಅಡ್ಡಿ ಆತಂಕಗಳ ನಡುವೆಯೂ ಲಭ್ಯವಿದ್ದ ಮಾಹಿತಿಯನ್ನು ಸಂಗ್ರಹಿಸಿ ಅದರ ಆಧಾರದಲ್ಲಿ ವರದಿಯನ್ನು ಸಿದ್ಧಪಡಿಸಿ ವಿಧಾನ ಮಂಡಲಕ್ಕೆ ಸಲ್ಲಿಸಿತ್ತು.

ಕೋವಿಡ್ ಸಾಂಕ್ರಾಮಿಕವು ರಾಜ್ಯವನ್ನು ತೀವ್ರವಾಗಿ ಕಾಡುತ್ತಿದ್ದಾಗ ಅಂದರೆ 2020 ಹಾಗೂ 2021ರ ಕಾಲಾವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ಸಾವುಗಳ ಸಂಖ್ಯೆಯ ಬಗ್ಗೆ ಭಾರೀ ವ್ಯತ್ಯಾಸ ಕಂಡು ಬಂದಿರುವುದನ್ನು ಸದರಿ ಸಮಿತಿ ಗುರುತಿಸಿದೆ. 2021ರ ಜನವರಿಯಿಂದ ಜುಲೈವರೆಗಿನ ಕಾಲಾವಧಿಯಲ್ಲಿ ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಂಖ್ಯಿಕ ನಿರ್ದೇಶನಾಲಯವು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ 4,26,943 ಸಾವುಗಳು ದಾಖಲಾಗಿವೆ. 2020ರ ಇದೇ ಕಾಲಾವಧಿಯಲ್ಲಿ 2,69,069 ಸಾವುಗಳು ಮಾತ್ರ ದಾಖಲಾಗಿವೆ. 2021ರ ಆಗಸ್ಟ್ 25ರವರೆಗೆ 37,206 ಮಂದಿ ಮಾತ್ರ ಸಾವಿಗೀಡಾಗಿರುವುದು ಮರಣ ದಾಖಲೆಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ. ಇದರಿಂದ ಒಂದು ಅಂಶ ಖಚಿತವಾಗುತ್ತದೆ. ಆರೋಗ್ಯ ಇಲಾಖೆ ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಂಕಿ ಅಂಶಗಳ ನಡುವೆ ಸಾಕಷ್ಟು ವ್ಯತ್ಯಾಸ ಇರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗುರುತಿಸಿದೆ. 1.20 ಲಕ್ಷದಷ್ಟು ಸಾವುಗಳ ಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ಆರೋಗ್ಯ ಇಲಾಖೆ ಘನ ಘೋರ ಅಪರಾಧ ಎಸಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.

ಕೋವಿಡ್ ನಿವಾರಣೆಗೆ ಬಳಸಿದ ಮಾತ್ರೆಗಳ ಖರೀದಿ ಹಗರಣದಲ್ಲೂ ಕೋಟ್ಯಂತರ ರೂ. ಲೂಟಿ ಹೊಡೆಯಲಾಗಿದೆ. ಸರಕಾರ ಬಳಸಿದ ಮಾತ್ರೆಗಳಿಂದ ಕೋವಿಡ್ ಸಾಂಕ್ರಾಮಿಕ ನಿವಾರಣೆಯಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ ಬಳಿಕವೂ 1.10 ಕೋಟಿಯಷ್ಟು ಇದೇ ಮಾತ್ರೆಗಳನ್ನು ಖರೀದಿಸುವ ಮೂಲಕ ರಾಜ್ಯದ ಆರೋಗ್ಯ ಇಲಾಖೆ ಭಾರೀ ಲೋಪ ಎಸಗಿದೆ. ಅಷ್ಟೇ ಅಲ್ಲದೆ ಎಷ್ಟು ಜನರಿಗೆ ಮಾತ್ರೆ ವಿತರಿಸಲಾಯಿತು, ಎಷ್ಟು ಮಾತ್ರೆಗಳು ಬಾಕಿ ಉಳಿದವು ಎಂಬ ಬಗ್ಗೆ ಆರೋಗ್ಯ ಇಲಾಖೆಯಲ್ಲಿ ಸರಿಯಾದ ಮಾಹಿತಿ ಲಭ್ಯವಿಲ್ಲ ಎಂದು ವಿಧಾನ ಮಂಡಲ ಲೆಕ್ಕಪತ್ರ ಸಮಿತಿ ವರದಿಯಲ್ಲಿ ತಿಳಿಸಿದೆ. ದುಬಾರಿ ಲಸಿಕೆಗಳ ಖರೀದಿಗೆ ಐದು ಕೋಟಿ ರೂ. ಹೆಚ್ಚುವರಿ ಖರ್ಚು ಮಾಡಿದ್ದು, ಆರೋಗ್ಯ ಇಲಾಖೆಯ ಸಹಾಯವಾಣಿ ಇದ್ದಾಗಲೂ ದುಬಾರಿ ಬೆಲೆ ತೆತ್ತು ಖಾಸಗಿ ಸಹಾಯವಾಣಿ ಸೇವೆಯನ್ನು ಪಡೆದುಕೊಂಡಿರುವುದು, ವೈದ್ಯಕೀಯ ಯಂತ್ರೋಪಕರಣಗಳ ಖರೀದಿಯಲ್ಲಿ ಮಾರುಕಟ್ಟೆ ದರದ ಹತ್ತು ಪಟ್ಟು ಹೆಚ್ಚು ಪಾವತಿ ಮಾಡಿರುವುದು ಹೀಗೆ ನಾನಾ ಹಗರಣಗಳ ಮೇಲೆ ಸಮಿತಿ ಬೆಳಕು ಚೆಲ್ಲಿದೆ.

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಸಾಕಷ್ಟಿತ್ತು. ಈ ಕೊರತೆಯಿಂದ ಚಾಮರಾಜನಗರ ಸರಕಾರಿ ಆಸ್ಪತ್ರೆಯಲ್ಲಿ ಅನೇಕ ಸಾವುಗಳು ಸಂಭವಿಸಿದವು. ಆದರೂ ಪಿ.ಎಂ.ಕೇರ್ಸ್ ನಿಧಿಯಿಂದ ಬಂದ 165 ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಿದ ಆರೋಗ್ಯ ಇಲಾಖೆಯ ಕ್ರಮ ಜನದ್ರೋಹದ ಪರಮಾವಧಿ ಎಂದು ಸದರಿ ಸಮಿತಿ ದೋಷಾರೋಪಣೆ ಮಾಡಿದೆ.

ಕೋವಿಡ್ ಕಾಲಾವಧಿಯಲ್ಲಿ ಜನರು ಸಾಯುತ್ತಿರುವಾಗ ವೆಂಟಿಲೇಟರ್ ಗಳು, ವೈದ್ಯಕೀಯ ಉಪಕರಣಗಳು ಮತ್ತು ಆಮ್ಲಜನಕ ಹಾಗೂ ಔಷಧಿಗಳ ಕೊರತೆಯಾಗಲು ಆರೋಗ್ಯ ಇಲಾಖೆಯ ಅಧಿಕಾರಿಗಳೇ ಕಾರಣ.

ಆದ್ದರಿಂದ ಈ ಕುಖ್ಯಾತ ಹಗರಣದ ಬಗ್ಗೆ ಸ್ವಾಯತ್ತ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸುವಂತೆ ವಿಧಾನಮಂಡಲ ಲೆಕ್ಕಪತ್ರ ಸಮಿತಿ ಶಿಫಾರಸು ಮಾಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಬರೀ ಅಧಿಕಾರಿಗಳನ್ನು ದೂರಿದರೆ ಪ್ರಯೋಜನವಿಲ್ಲ. ಈ ಹಗರಣಕ್ಕೆ ನಿಜವಾದ ಕಾರಣರಾದ ಅಂದಿನ ಆಡಳಿತ ಪಕ್ಷದ ರಾಜಕೀಯ ನಾಯಕರ ಮೇಲೂ ಕಠಿಣ ಕ್ರಮಕೈಗೊಳ್ಳಲು ಸರಕಾರ ಹಿಂದೆ ಮುಂದೆ ನೋಡಬಾರದು.

ಕೋವಿಡ್ ಸಾಂಕ್ರಾಮಿಕ ಕಾಲದ ಹಗರಣಗಳ ಬಗ್ಗೆ ಮಾತ್ರವಲ್ಲ ಹಿಂದಿನ ಬಿಜೆಪಿ ಸರಕಾರದ ಕಾಲಾವಧಿಯ ಎಲ್ಲ ಹಗರಣಗಳ ಬಗ್ಗೆ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಯಾವುದೂ ಮುಚ್ಚಿ ಹೋಗಲು ಬಿಡಬಾರದು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಿದಂತೆ ಎಲ್ಲ ಹಗರಣಗಳನ್ನು ಬಯಲಿಗೆಳೆದು ತನಿಖೆ ನಡೆಸಿ ಲೋಪ ಎಸಗಿದವರನ್ನು ದಂಡಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News