ಭಾರತಕ್ಕೆ ಕಳಂಕ ತರುತ್ತಿರುವ ಅತ್ಯಾಚಾರ ಪ್ರಕರಣಗಳು

Update: 2023-10-02 05:07 GMT

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಬರ್ಬರ ಅತ್ಯಾಚಾರ ಘಟನೆಯೊಂದು ದೇಶವನ್ನೇ ತಲ್ಲಣಿಸುವಂತೆ ಮಾಡಿದೆ. ಅತ್ಯಾಚಾರಕ್ಕೊಳಗಾದ ೧೨ ವರ್ಷದ ಬಾಲಕಿಯೊಬ್ಬಳು ಹರಿದ ರಕ್ತ ಸಿಕ್ತ ಬಟ್ಟೆಯೊಂದಿಗೆ ನಡು ರಸ್ತೆಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಆನಂತರ ನಡೆದ ಬೆಳವಣಿಗೆಗಳು ಮನುಷ್ಯ ಘನತೆಗೆ ಬಹುದೊಡ್ಡ ಕಳಂಕವಾಗಿದೆ. ಅತ್ಯಾಚಾರಕ್ಕೊಳಗಾಗಿ ರಕ್ತ ಸಿಕ್ತ ಬಟ್ಟೆಯೊಂದಿಗೆ ಸಂತ್ರಸ್ತ ಬಾಲಕಿ ಸಹಾಯಕ್ಕಾಗಿ ಹಲವು ಮನೆಗಳ ಬಾಗಿಲು ತಟ್ಟಿದ್ದಾಳೆ. ಆದರೆ ಯಾರೂ ಆಕೆಯ ಸಹಾಯಕ್ಕೆ ಬಂದಿಲ್ಲ. ಬದಲಿಗೆ ಆಕೆಯನ್ನು ಮನೆಯೊಳಗೆ ಬರದಂತೆ ಚಪ್ಪಲಿ ಎಸೆದು ಓಡಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯೊಂದಿಗೆ ನಾಗರಿಕರೆಂದು ಕರೆಸಿಕೊಂಡ ಜನರು ವರ್ತಿಸಿದ ವರ್ತನೆಯೂ ಅತ್ಯಾಚಾರಿಗಳ ಕ್ರೌರ್ಯಕ್ಕೆ ಸರಿಗಟ್ಟುವಂತಿದೆ. ಬಳಿಕ ಬಾಲಕಿಯನ್ನು ಸ್ಥಳೀಯ ಆಶ್ರಮವೊಂದರ ಮುಖ್ಯಸ್ಥರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿ ಹಸಿವು ಮತ್ತು ಭಯದಿಂದ ತತ್ತರಿಸಿ ಹೋಗಿದ್ದಳು. ಈ ಘಟನೆ ನಿರ್ಭಯಾ ಪ್ರಕರಣದ ಇನ್ನೊಂದು ಮುಖದಂತಿದೆ. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಯ ದೇಹ ರಸ್ತೆ ಬದಿಯಲ್ಲಿ ಬಿದ್ದಿತ್ತು. ಸಹಪಾಠಿ ಸಹಾಯಕ್ಕಾಗಿ ಹಲವರ ಮೊರೆ ಹೊಕ್ಕಿದ್ದ. ಆದರೆ ಯಾರೂ ನೆರವಿಗೆ ಮುಂದಾಗಿರಲಿಲ್ಲ. ಅತ್ಯಾಚಾರ ಮಾಡುವವರು ಒಬ್ಬನಾದರೆ, ಸಂತ್ರಸ್ತಳ ರಕ್ಷಣೆಗೆ ಬರದೇ ಪರೋಕ್ಷವಾಗಿ ಅತ್ಯಾಚಾರಿಗಳ ಜೊತೆಗೆ ಕೈ ಜೋಡಿಸುವವರು ನೂರಾರು. ದಿಲ್ಲಿಯ ನಿರ್ಭಯಾ ಪ್ರಕರಣದಲ್ಲಿ ಸಾರ್ವಜನಿಕರು ತಕ್ಷಣ ಸಂತ್ರಸ್ತೆಯನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರೆ ಆಕೆಯ ಪ್ರಾಣ ಉಳಿಯಬಹುದಿತ್ತೋ ಏನೋ. ಉಜ್ಜಯಿನಿಯಲ್ಲಿ ಆಶ್ರಮದ ಮುಖ್ಯಸ್ಥರ ಕೈಗೆ ಬಾಲಕಿ ಸಿಗದೇ ಇದ್ದಿದ್ದರೆ ಇವಳ ಸ್ಥಿತಿಯೂ ಚಿಂತಾಜನಕವಾಗಿ ಬಿಡುತ್ತಿತ್ತು.

ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಒಬ್ಬ ಆಟೋಚಾಲಕ. ಆತನಿಗೆ ಯಾವುದೇ ಜಾತಿ ಅಥವಾ ರಾಜಕೀಯದ ಹಿನ್ನೆಲೆ ಇಲ್ಲದೇ ಇರುವುದರಿಂದ ಬಂಧನ ಯಾವುದೇ ಸಮಸ್ಯೆಯನ್ನು ಸೃಷ್ಟಿಸಿಲ್ಲ. ಸಾಧಾರಣವಾಗಿ ಈ ದೇಶದಲ್ಲಿ ಅತ್ಯಾಚಾರ ಪ್ರಕರಣ ಮಹತ್ವವನ್ನು ಪಡೆಯಬೇಕಾದರೆ ಒಂದೋ ಸಂತ್ರಸ್ತೆ ಮೇಲ್‌ಜಾತಿ ಅಥವಾ ಮೇಲ್ ವರ್ಗಕ್ಕೆ ಸೇರಿರಬೇಕಾಗುತ್ತದೆ. ಆರೋಪಿಯ ತಕ್ಷಣ ಬಂಧನವಾಗಬೇಕಾದರೆ ಆರೋಪಿಗೆ ಯಾವುದೇ ರಾಜಕೀಯ ಅಥವಾ ಜಾತಿಯ ಹಿನ್ನೆಲೆ ಇಲ್ಲದೇ ಇರಬೇಕಾಗುತ್ತದೆ. ಒಂದನ್ನು ಗಮನಿಸಬೇಕು, ಆರೋಪಿಯನ್ನು ಬಂಧಿಸಿದ ಬೆನ್ನಿಗೇ ಆರೋಪಿಯ ತಂದೆ ‘‘ನನ್ನ ಪುತ್ರನನ್ನು ಗಲ್ಲಿಗೇರಿಸಿ’’ ಎಂದು ಸ್ವತಃ ಆಗ್ರಹಿಸಿದ್ದಾರೆ. ‘‘ಇದು ಅವಮಾನಕಾರಿ ಕೃತ್ಯ. ನಾನು ಆತನನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿಲ್ಲ. ಅವನಿಗಾಗಿ ನ್ಯಾಯಾಲಯಕ್ಕಾಗಲಿ, ಪೊಲೀಸ್ ಠಾಣೆಗಾಗಲಿ ಹೋಗುವುದಿಲ್ಲ. ನನ್ನ ಪುತ್ರ ಅಪರಾಧ ಎಸಗಿದ್ದಾನೆ. ಆದುದರಿಂದ ಆತನನ್ನು ಗಲ್ಲಿಗೇರಿಸಬೇಕು’’ ಎಂದು ಆರೋಪಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಹಿಂದೆ ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣದಲ್ಲೂ ಅತ್ಯಾಚಾರ ಆರೋಪಿಗಳ ಕುಟುಂಬ ಆರೋಪಿಗಳ ಜೊತೆಗೆ ನಿಂತಿರಲಿಲ್ಲ. ‘‘ನಮ್ಮ ಕುಟುಂಬದ ಸದಸ್ಯರಾರೂ ಆರೋಪಿಗಳನ್ನು ಭೇಟಿಯಾಗುವುದಿಲ್ಲ’’ ಎಂದು ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದರು. ಇವರು ಕೆಳಜಾತಿಗೆ, ಕೆಳವರ್ಗಕ್ಕೆ ಸೇರಿದ ಜನರು. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ವಿದ್ಯಾವಂತೆ ಮತ್ತು ಮೇಲ್ವರ್ಗಕ್ಕೆ ಸೇರಿದವಳು. ಉಜ್ಜಯಿನಿ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿರುವ ಬಾಲಕಿಯೂ ಬಡ ಕುಟುಂಬಕ್ಕೆ ಸೇರಿದವಳು. ತನ್ನ ಕುಟುಂಬಕ್ಕೆ ಸೇರಿದವನಾದರೂ ಆರೋಪಿಯನ್ನು ಸಮರ್ಥಿಸಿ ಮಾತನಾಡದೇ, ಅವರು ಆತ್ಮ ಸಾಕ್ಷಿಯನ್ನು ಪ್ರದರ್ಶಿಸಿದರು.

ಹಾಥರಸ್ ಅತ್ಯಾಚಾರ ಕೊಲೆ ಪ್ರಕರಣವನ್ನು ತೆಗೆದುಕೊಳ್ಳೋಣ. ಇಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಮಾತನಾಡುವವರೆಲ್ಲ ಅಪರಾಧಿಗಳಾಗಿ ಬಿಟ್ಟರು. ಈ ಘಟನೆಯನ್ನು ವರದಿ ಮಾಡಲು ಹೋದ ಪತ್ರಕರ್ತರೇ ಎರಡು ವರ್ಷ ಜೈಲಲ್ಲಿ ಕೊಳೆಯುವಂತಹ ಸ್ಥಿತಿ ನಿರ್ಮಾಣವಾಯಿತು. ಯಾಕೆಂದರೆ ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ಮಹಿಳೆ ದಲಿತ ಸಮುದಾಯಕ್ಕೆ ಸೇರಿದ್ದರೆ, ಕೃತ್ಯವನ್ನು ಎಸಗಿದ್ದ ಆರೋಪಿಗಳು ಮೇಲ್‌ಜಾತಿಗೆ ಸೇರಿದ್ದರು. ಈ ಆರೋಪಿಗಳಿಂದ ಆ ಸಮಾಜ ಮತ್ತು ರಾಜಕೀಯ ನಾಯಕರು ಅಂತರವನ್ನು ಕಾಯ್ದುಕೊಂಡು ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಆದರೆ ಅಂತಹದು ಯಾವುದೂ ನಡೆಯಲಿಲ್ಲ. ಬದಲಿಗೆ ಆರೋಪಿಗಳನ್ನು ಬಹಿರಂಗವಾಗಿ ಸಮರ್ಥಿಸಿದರು ಮಾತ್ರವಲ್ಲ, ಅವರ ಬೆಂಬಲಕ್ಕೆ ನಿಂತರು. ಸಂತ್ರಸ್ತೆಯ ಕುಟುಂಬಕ್ಕೇ ಜಿಲ್ಲಾಡಳಿತದ ಮೂಲಕ ಬೆದರಿಕೆಯನ್ನು ಹಾಕಿದರು. ಆ ಮೂಲಕ ಅತ್ಯಾಚಾರದ ಕಳಂಕವನ್ನು ಸಮುದಾಯದ ಹಣೆಗೆ ಅಂಟಿಸಿ ಬಿಟ್ಟರು. ಈ ಹಿಂದೆ ಜಮ್ಮುವಿನಲ್ಲಿ ಎಳೆ ಮಗುವೊಂದರ ಬರ್ಬರ ಅತ್ಯಾಚಾರ ನಡೆಯಿತು. ದೇವಸ್ಥಾನದ ಅವರಣದಲ್ಲಿ ಈ ಮಗುವನ್ನು ಒಂದು ಗುಂಪು ಬರ್ಬರವಾಗಿ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ್ದಷ್ಟೇ ಅಲ್ಲ, ಬಳಿಕ ಕೊಂದು ಹಾಕಿತು. ಈ ಅತ್ಯಾಚಾರ ಪ್ರಕರಣ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಭಾರತದ ವರ್ಚಸ್ಸಿಗೆ ಭಾರೀ ಕುಂದು ತಂದಿತು. ಅತ್ಯಾಚಾರಕ್ಕೊಳಗಾಗಿದ್ದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಅಲೆಮಾರಿ ಬುಡಕಟ್ಟು ಸಮುದಾಯದ ಬಡ ಕುಟುಂಬದ ಮಗು. ಅತ್ಯಾಚಾರ ಎಸಗಿದವರಲ್ಲಿ ನಾಗರಿಕರು, ವಿದ್ಯಾವಂತರು ಅನ್ನಿಸಿಕೊಂಡವರಿದ್ದರು. ಹಿರಿಯರೂ ಸೇರಿಕೊಂಡಿದ್ದರು. ಈ ಭೀಕರ ಕೃತ್ಯವನ್ನು ಖಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸುವುದು ಮನುಷ್ಯರೆಂದು ಕರೆದುಕೊಳ್ಳುವ ಎಲ್ಲರ ಕರ್ತವ್ಯವಾಗಿತ್ತು. ಆದರೆ ಆರೋಪಿಗಳ ಪರವಾಗಿ ಸ್ಥಳೀಯ ಬಿಜೆಪಿ ಮುಖಂಡರು ನಿಂತರು. ಆರೋಪಿಗಳು ಬಿಡುಗಡೆಯಾದಾಗ ಅವರ ಪರವಾಗಿ ಮೆರವಣಿಗೆಯನ್ನು ನಡೆಸಿದರು.

ಅಷ್ಟೇ ಏಕೆ, ಗುಜರಾತ್ ಗಲಭೆಯ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗವಹಿಸಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದ ೧೧ ಜನರನ್ನು ಸ್ವತಃ ಸರಕಾರವೇ ಮುಂದೆ ನಿಂತು ಬಿಡುಗಡೆ ಮಾಡಿತು. ಬಿಜೆಪಿಯ ನಾಯಕನೊಬ್ಬ ‘‘ಆರೋಪಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರು ಅತ್ಯಾಚಾರ ಮಾಡುವುದು ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಮಾಧ್ಯಮಗಳಲ್ಲಿ ಹಂಚಿಕೊಂಡರು. ಅಷ್ಟೇ ಅಲ್ಲ , ಈ ಅಪರಾಧಿಗಳು ಜೈಲಿನಿಂದ ಬಿಡುಗಡೆಯಾದಾಗ, ಅವರನ್ನು ಕೆಲವು ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು. ಮಹಿಳೆಯರ ಮೇಲೆ ಅತ್ಯಾಚಾರಗಳು ಸಂಭವಿಸಿದಾಗ ಕೆಳಜಾತಿಯ, ಕೆಳವರ್ಗದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುತ್ತದೆ. ಆದರೆ ಯಾವತ್ತೂ ಅವರ ಕುಟುಂಬ ಆ ಆರೋಪಿಗಳ ಜೊತೆಗೆ ನಿಂತ ಉದಾಹರಣೆಯಿಲ್ಲ. ಆದರೆ ಈ ದೇಶದಲ್ಲಿ ಮೇಲ್‌ಜಾತಿಯ ಜನರು ದುರ್ಬಲ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದಾಗ ಆರೋಪಿಗಳಿಗೆ ಶಿಕ್ಷೆಯಾಗುವುದಿಲ್ಲ ಮಾತ್ರವಲ್ಲ ಆ ಸಮುದಾಯ, ರಾಜಕೀಯ ಪಕ್ಷಗಳು ಕೂಡ ಆರೋಪಿಗಳ ಬೆನ್ನಿಗೆ ನಿಲ್ಲುತ್ತವೆ. ಅವರನ್ನು ಸಮರ್ಥಿಸಿಕೊಳ್ಳುತ್ತವೆ. ಮಹಿಳೆಯರ ಮೇಲೆ ನಡೆಸುವ ಅತ್ಯಾಚಾರಗಳು ಬಡ ಮತ್ತು ಕೆಳಜಾತಿಯ ಸಮುದಾಯ ತಮ್ಮ ಪಾಲಿನ ಅವಮಾನವಾಗಿ ಪರಿಗಣಿಸಿದ್ದರೆ ಮೇಲ್‌ಜಾತಿ ಮತ್ತು ಮೇಲ್‌ವರ್ಗ ಅದನ್ನು ತಮ್ಮ ಹಕ್ಕಾಗಿ ಪರಿಗಣಿಸಿದಂತಿದೆ. ಈ ದೇಶದಲ್ಲಿ ಪ್ರತೀ ವರ್ಷ ೩೦,೦೦೦ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತವೆ. ಪ್ರತೀ ದಿನ ೮೭ ಅತ್ಯಾಚಾರ ಕೃತ್ಯಗಳು ಸಂಭವಿಸುತ್ತವೆ ಎಂದು ಅಂಕಿಅಂಶ ಹೇಳುತ್ತದೆ. ಆದರೆ ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ‘ಅತ್ಯಾಚಾರ’ ಎಂದು ಗುರುತಿಸಬೇಕಾದರೆ ಸಂತ್ರಸ್ತೆ ಯಾವ ಜಾತಿ, ವರ್ಗಕ್ಕೆ ಸೇರಿದವಳು ಮತ್ತು ಆರೋಪಿ ಯಾವ ಜಾತಿ, ವರ್ಗಕ್ಕೆ ಸೇರಿದವನು ಎನ್ನುವುದು ಅತ್ಯಗತ್ಯವಾಗಿರುತ್ತದೆ. ಈ ಕಾರಣಕ್ಕಾಗಿಯೇ ಭಾರತವನ್ನು ಮಹಿಳೆಯರ ಪಾಲಿಗೆ ವಿಶ್ವದಲ್ಲೇ ಅಪಾಯಕಾರಿ ದೇಶವಾಗಿ ಗುರುತಿಸಲಾಗುತ್ತಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರವನ್ನು ಎಲ್ಲಿಯವರೆಗೆ ಭಾರತ ಕಳಂಕವಾಗಿ ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಮಹಿಳಾ ಸಬಲೀಕರಣವೆನ್ನುವ ಪದ ಸೋಗಲಾಡಿತನದ ಪದವಾಗಿಯಷ್ಟೇ ಉಳಿದು ಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News