ಶಾಕಿಬ್‌ರನ್ನು ಕ್ರಿಕೆಟ್‌ನಿಂದ ವಜಾಗೊಳಿಸಲು ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ವಕೀಲರ ಮನವಿ

Update: 2024-08-25 17:51 GMT

ಢಾಕಾ : ಶಾಕಿಬ್ ಅಲ್ ಹಸನ್‌ರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ತಕ್ಷಣ ವಜಾಗೊಳಿಸುವಂತೆ ಕೋರಿ ಇತ್ತೀಚಿನ ಗಲಭೆಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ತಂದೆಯ ವಕೀಲರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಗೆ ಪತ್ರವೊಂದನ್ನು ಬರೆದಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಕ್ ಹಸೀನಾ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಆಗಸ್ಟ್ 5ರಂದು ಢಾಕಾದ ಅಡಬೊರ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಬಟ್ಟೆ ಕಾರ್ಖಾನೆ ನೌಕರ ರೂಬೆಲ್ ಎಂಬವರು ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದ ಎಫ್‌ಐಆರ್ ನಲ್ಲಿ ಹೆಸರಿಸಲಾಗಿರುವ 147 ಆರೋಪಿಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಕಿಬ್ ಅಲ್ ಹಸನ್ ಕೂಡ ಒಬ್ಬರಾಗಿದ್ದಾರೆ. ಅವರು ಶೇಕ್ ಹಸೀನಾರ ಅವಾಮಿ ಲೀಗ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಹಾಗಾಗಿ, ಶಾಕಿಬ್ ಅಲ್ ಹಸನ್‌ರನ್ನು ಕ್ರಿಕೆಟ್‌ನಿಂದ ವಜಾಗೊಳಿಸುವಂತೆ ಒತ್ತಾಯಿಸಿ ಮೃತ ರೂಬೆಲ್‌ರ ತಂದೆ ರಫೀಕುಲ್ ಇಸ್ಲಾಮ್‌ರ ವಕೀಲರು ಬಿಸಿಬಿಗೆ ಮನವಿ ಮಾಡಿದ್ದಾರೆ.

ಶಾಕಿಬ್ ಈಗ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ರವಿವಾರ ಮುಕ್ತಾಯಗೊಂಡಿದ್ದು, ಇನ್ನು ಅವರ ಹಣೆಬರಹ ನಿರ್ಧಾರವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News