IPL 2025: ನಿರ್ಣಾಯಕ ಘಟ್ಟದಲ್ಲೇ ತಿಲಕ್ ವರ್ಮಾ ಮೈದಾನ ತೊರೆದಿದ್ದಕ್ಕೆ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ

ತಿಲಕ್ ವರ್ಮಾ , ಹಾರ್ದಿಕ್ ಪಾಂಡ್ಯ | PC : PTI
ಲಕ್ನೊ: ಶುಕ್ರವಾರ ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡ ನೀಡಿದ್ದ 204 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಹೈದರಾಬಾದ್ ಬ್ಯಾಟರ್ ತಿಲಕ್ ವರ್ಮ ಇನಿಂಗ್ಸ್ ನಡುವೆಯೇ ನಿವೃತ್ತಿಗೊಂಡರು. ಈ ವೇಳೆ ಅವರೊಂದಿಗೆ ನಾಯಕ ಹಾರ್ದಿಕ್ ಪಾಂಡ್ಯರೊಂದಿಗೆ ಕ್ರೀಸಿನಲ್ಲಿದ್ದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 12 ರನ್ ಗಳಿಂದ ಪರಾಭವಗೊಂಡಿತ್ತು.
ಐಪಿಎಲ್ ಇತಿಹಾಸದಲ್ಲಿ ಹೀಗೆ ಪಂದ್ಯದ ನಡುವೆಯೇ ನಿವೃತ್ತರಾದ ನಾಲ್ಕನೆಯ ಬ್ಯಾಟರ್ ತಿಲಕ್ ವರ್ಮಾ ಆಗಿದ್ದಾರೆ.
ಲಕ್ನೊ ಸೂಪರ್ ಜೈಂಟ್ಸ್ ತಂಡ ನೀಡಿದ್ದ 204 ರನ್ ಗಳ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡ, ಒಂದು ಹಂತದಲ್ಲಿ ಕೇವಲ 7 ಬಾಲ್ ಗಳಲ್ಲಿ 24 ರನ್ ಗಳಿಸಬೇಕಾದ ಒತ್ತಡಕ್ಕೆ ಒಳಗಾಗಿತ್ತು. ಆಗ ನಾಯಕ ಹಾರ್ದಿಕ್ ಪಾಂಡ್ಯರೊಂದಿಗೆ 23 ಬಾಲ್ ಗಳಲ್ಲಿ 25 ರನ್ ಮಾತ್ರ ಗಳಿಸಿದ್ದ ತಿಲಕ್ ವರ್ಮಾ ಕ್ರೀಸಿನಲ್ಲಿದ್ದರು. ಈ ವೇಳೆ ಚುರುಕಾಗಿ ರನ್ ಗಳಿಸಲು ಪರದಾಡುತ್ತಿದ್ದ ತಿಲಕ್ ವರ್ಮಾ, ಆಟದ ನಡುವೆಯೇ ನಿವೃತ್ತರಾಗಿ ಪೆವಿಲಿಯನ್ ಗೆ ಮರಳಿದ್ದರು. ಕೊನೆಗೆ, 5 ವಿಕೆಟ್ ನಷ್ಟಕ್ಕೆ 191 ರನ್ ಗಳನ್ನು ಗಳಿಸಲಷ್ಟೆ ಶಕ್ತವಾದ ಮುಂಬೈ ಇಂಡಿಯನ್ಸ್ ತಂಡ, ಲಕ್ನೊ ಸೂಪರ್ ಜೈಂಟ್ಸ್ ತಂಡದ ಎದುರು 12 ರನ್ ಗಳ ಅಂತರದಲ್ಲಿ ಪರಾಭವಗೊಂಡಿತ್ತು.
ಈ ಕುರಿತು ಪಂದ್ಯದ ನಂತರ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, “ತಿಲಕ್ ವರ್ಮಾ ನಿವೃತ್ತರಾಗುವುದು ಸ್ಪಷ್ಟವಾಗಿತ್ತು. ನಮಗೆ ಯಾರಾದರೂ ರನ್ ಗಳನ್ನು ಹೊಡೆಯುವವರು ಬೇಕಿತ್ತು. ಕ್ರಿಕೆಟ್ ನಲ್ಲಿ ನೀವು ಎಷ್ಟೇ ಪ್ರಯತ್ನ ಪಟ್ಟರೂ, ರನ್ ಗಳಿಸಲು ಸಾಧ್ಯವಾಗದ ಕೆಲ ದಿನಗಳೂ ಬರುತ್ತವೆ” ಎಂದು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವು ತಾನಾಡಿರುವ ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರನೆ ಸೋಲು ಅನುಭವಿಸಲು ಪ್ರಮುಖ ಕಾರಣ ಲಕ್ನೊ ಸೂಪರ್ ಜೈಂಟ್ಸ್ ತಂಡದ ಲೆಗ್ ಸ್ಪಿನ್ನರ್ ದಿಗ್ವೇಶ್ ರಾಠಿಯವರ ನಿಯಂತ್ರಿತ ಬೌಲಿಂಗ್ ದಾಳಿ. ಅವರು ತಮ್ಮ ನಿಗದಿತ ನಾಲ್ಕು ಓವರ್ ಗಳಲ್ಲಿ ಕೇವಲ 21 ರನ್ ನೀಡಿ, ಕ್ರೀಸಿಗೆ ಕಚ್ಚಿಕೊಂಡಿದ್ದ ಬ್ಯಾಟರ್ ನಮನ್ ಧೀರ್ (46 ರನ್) ವಿಕೆಟ್ ಅನ್ನೂ ಕಬಳಿಸಿದ್ದರು.