ರಣಜಿ ಟ್ರೋಪಿ | ದಿಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ನಿರಾಕರಿಸಿದ ವಿರಾಟ್ ಕೊಹ್ಲಿ

Photo credit: ANI
ಹೊಸ ದಿಲ್ಲಿ: ಮುಂಬರುವ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ದಿಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರು ನಾಯಕತ್ವವನ್ನು ತಿರಸ್ಕರಿಸಿದ್ದರೂ, ಯುವ ಆಯುಷ್ ಬದೋನಿ ನಾಯಕತ್ವದಲ್ಲಿ ಮುಂದುವರಿಯಲು ಬೆಂಬಲ ಸೂಚಿಸಿದ್ದಾರೆ ಎಂದು ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಒಕ್ಕೂಟದ ಮೂಲಗಳು ಹೇಳಿವೆ.
“ನಾವು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದಿಲ್ಲಿ ತಂಡದ ನಾಯಕತ್ವ ವಹಿಸಿಕೊಳ್ಳಲು ನಿಮಗೆ ಮನಸ್ಸಿದೆಯೆ ಎಂದು ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದೆವು. ಆದರೆ, ನಮ್ಮ ಕೋರಿಕೆಯನ್ನು ತಿರಸ್ಕರಿಸಿದ ಅವರು, “ಆಯುಷ್ ಬದೋನಿಯೇ ಮುಂದುವರಿಯಲಿ. ನನಗೆ ನಾಯಕತ್ವ ಬೇಡ” ಎಂದು ಹೇಳಿದ್ದಾರೆ” ಎಂದು ಡಿಡಿಸಿಎ ಮೂಲಗಳು ತಿಳಿಸಿವೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುರುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರೈಲ್ವೇಸ್ ತಂಡದ ವಿರುದ್ಧ ನಡೆಯಲಿರುವ ಎಲೈಟ್ ಗ್ರೂಪ್ ಡಿ ರಣಜಿ ಟ್ರೋಫಿ ಪಂದ್ಯಕ್ಕೂ ಮುನ್ನ, ಮಂಗಳವಾರ ವಿರಾಟ್ ಕೊಹ್ಲಿ ದಿಲ್ಲಿ ತಂಡದ ಅಭ್ಯಾಸದ ಅವಧಿಗೆ ಸೇರ್ಪಡೆಯಾದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗಮನಾರ್ಹ ಹಿನ್ನಡೆ ಅನುಭವಿಸಿದ ನಂತರ, ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ತೀವ್ರ ಅಭ್ಯಾಸದಲ್ಲಿ ತೊಡಗಿರುವುದು ಕಂಡು ಬಂದಿತು.