ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನಿರ್ವಹಣಾ ವೆಚ್ಚ ಪರಿಷ್ಕರಣೆಗೆ ಕ್ರಮ: ಸಚಿವ ಮಹದೇವಪ್ಪ

Update: 2023-12-13 13:59 GMT

ಬೆಳಗಾವಿ: ‘ಸಮಾಜ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಹಾಸ್ಟೇಲ್‍ಗಳಲ್ಲಿನ ಮಕ್ಕಳಿಗೆ ಪೌಷ್ಠಿಕ ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ಅನುಗುಣವಾಗಿ ನಿರ್ವಹಣಾ ವೆಚ್ಚವನ್ನು ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳುವುದು’ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಯಾಣ ಇಲಾಖೆಗೆ 3,400ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಉಳಿದಂತೆ 35 ಇಲಾಖೆಗಳಿಗೆ ಹಣ ಹಂಚಿಕೆಯಾಗಿದೆ. ಹಾಸ್ಟೇಲ್‍ಗಳ ವ್ಯವಸ್ಥೆ ಸುಧಾರಣೆಗೆ ಖುದ್ದು ಮುಖ್ಯಮಂತ್ರಿಯವರೇ ಸಭೆ ಮಾಡಿದ್ದಾರೆ. ರೇಪೊ ದರ ಆಧರಿಸಿ ನಿರ್ವಹಣಾ ವೆಚ್ಚವನ್ನು ಹೆಚ್ಚಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

‘ಪೌಷ್ಠಿಕ ಆಹಾರ ನೀಡುವ ಬಗ್ಗೆ ಕೇಂದ್ರ ಆಹಾರ ಗುಣಮಟ್ಟ ನಿಯಂತ್ರಣ ಸಂಸ್ಥೆಯೊಂದಿಗೆ ಚರ್ಚೆ ನಡೆಸಲಾಗಿದೆ. 2014-15ರಲ್ಲಿ ನಿಗದಿಯಾದ ದರವೇ ಈವರೆಗೂ ಮುಂದುವರೆದಿದೆ. ಇದನ್ನು ಮರುಪರಿಶೀಲಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿರುವಂತೆ ಸಮಾಜ ಕಲ್ಯಾಣ ಇಲಾಖೆಯಲ್ಲೂ ‘ವಿದ್ಯಾಸಿರಿ ಯೋಜನೆ’ ಜಾರಿ ಸಂಬಂಧ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News