ಹಿಂದಿ ದಬ್ಬಾಳಿಕೆಯ ಮೂಲ ಭಾರತದ ಸಂವಿಧಾನದಲ್ಲೇ ಇದೆಯೇ?

Update: 2024-09-12 04:39 GMT
Editor : Thouheed | Byline : ಶಿವಸುಂದರ್

ಭಾಗ- 2

ಭಾರತ ಸಂವಿಧಾನ ಸಭೆಯ ದ್ವಂದ್ವ ದುರಂತಗಳು

ಭಾರತವು ಸ್ವತಂತ್ರಗೊಂಡು ತನ್ನದೇ ಆದ ಸಂವಿಧಾನವನ್ನು ರಚಿಸಿಕೊಳ್ಳಲು ಸಭೆ ಸೇರುವ ಹೊತ್ತಿನಲ್ಲಿ ಭಾರತದ ಮುಂದೆ ಹಿಂದೆ ಹೇಳಿದ ಹಲವು ಉದಾಹರಣೆಗಳಿದ್ದವು.

ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಭಾರತವನ್ನು ಒಂದು ನೈಜವಾದ ಫೆಡರಲ್ ರಿಪಬ್ಲಿಕ್ (ಒಕ್ಕೂಟ ಗಣರಾಜ್ಯ)ಆಗಿ ರೂಪಿಸಲಾಗುವುದೆಂಬ ಭರವಸೆಯನ್ನೇ ಜನತೆಗೆ ನೀಡಲಾಗಿತ್ತು. ಆದರೆ ಭಾರತದ ಸಂವಿಧಾನ ಸಭೆಯು ಕರಡು ಸಂವಿಧಾನದ ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ಭಾರತದ ವಿಭಜನೆಯಾಗಿತ್ತು. ಹೀಗಾಗಿ ಒಂದು ಬಲವಾದ ಕೇಂದ್ರ ಸರಕಾರವಿರಬೇಕೆಂಬ ಧೋರಣೆಯೂ ಬಲಪಡೆದುಕೊಂಡಿತ್ತು.

ಭಾರತದ ಸಂವಿಧಾನ ಸಭೆಯಲ್ಲಿ 1948ರ ನವೆಂಬರ್ 15-18ರ ವರೆಗೆ ಆರ್ಟಿಕಲ್ 1ರ ಬಗ್ಗೆ ಚರ್ಚೆ ನಡೆಯಿತು. ಅದಕ್ಕೂ ಪೂರ್ವಭಾವಿಯಾಗಿ ಕರಡು ರಚನೆಗೆ ಮುನ್ನ ನಡೆದ ಸಭೆಯಲ್ಲಿ ಭಾರತವನ್ನು ಒಂದು ಫೆಡರಲ್ ರಿಪಬ್ಲಿಕ್ ಆಗಿ ರೂಪಿಸಬೇಕೆಂಬ ಪ್ರಸ್ತಾವವನ್ನೇ ಮಾಡಲಾಗಿತ್ತು. ಆದರೆ ಕರಡಿನಲ್ಲಿ ಅದು ‘ರಾಜ್ಯಗಳ ಯೂನಿಯನ್’ ಎಂದು ಬದಲಾಗಿತ್ತು.

ಕರಡು ರಚನಾ ಸಭೆಯಲ್ಲಿ ಇದಕ್ಕೆ ಹಲವಾರು ತಿದ್ದುಪಡಿಗಳೂ ಪ್ರಸ್ತಾವವಾಗಿದ್ದವು.

-ಅದರಲ್ಲಿ ಮುಖ್ಯವಾಗಿ ಬಲಪಂಥೀಯ ಧೋರಣೆಯ ಎಚ್.ವಿ. ಕಾಮತ್ ಅವರು ರಾಜ್ಯಗಳನ್ನು ರಾಜ್ಯಗಳೆಂದು ಕರೆಯದೇ ‘ಪ್ರದೇಶ’ ಎಂದು ಕರೆಯಬೇಕೆಂದು ಪ್ರಸ್ತಾಪಿಸಿದ್ದರು.

-ಇದರ ಜೊತೆಗೆ ರಾಜ್ಯ ಅಥವಾ ಪ್ರದೇಶ ಎಂಬ ಘಟಕಗಳನ್ನೂ ಪ್ರಸ್ತಾಪಿಸದೆ ಕೇವಲ ಭಾರತ ಗಣರಾಜ್ಯ ಎಂದು ಹೆಸರಿಸಬೇಕೆಂಬ ತಿದ್ದುಪಡಿಗಳನ್ನೂ ಮಂಡಿಸಲಾಯಿತು.

-ಕೆ.ಟಿ.ಶಾ ಅವರು ಭಾರತವನ್ನು Secular, Federal, Socialistic Union Of States (ರಾಜ್ಯಗಳ ಸೆಕ್ಯುಲರ್, ಫೆಡರಲ್ ಮತ್ತು ಸಮಾಜವಾದಿ ಯೂನಿಯನ್) ಎಂದು ಕರೆಯಬೇಕೆಂದು ಪ್ರತಿಪಾದಿಸಿದ್ದರು.

-ಮೌಲಾನಾ ಹಝರತ್ ಮೊಹಾನಿ ಎಂಬ ಸಂವಿಧಾನ ರಚನಾ ಸಭೆಯ ಧರ್ಮಭೀರು ಕಮ್ಯುನಿಸ್ಟ್ ಸದಸ್ಯರು ಭಾರತವನ್ನು ಸೋವಿಯತ್ ಗಣರಾಜ್ಯದ ರೀತಿಯಲ್ಲಿ ‘Union Of Indian Socilaistic Republics’(ಸಮಾಜವಾದಿ ಗಣರಾಜ್ಯಗಳ ಭಾರತೀಯ ಯೂನಿಯನ್) ಆಗಬೇಕೆಂದು ಪ್ರತಿಪಾದಿಸಿದ್ದರು. ಅಂದರೆ ಭಾರತ ಯೂನಿಯನ್‌ನೊಳಗಿನ ಪ್ರತಿಯೊಂದು ರಾಜ್ಯವೂ ಸ್ವಾಯತ್ತ ಸಮಾಜವಾದಿ ಗಣರಾಜ್ಯಗಳಾಗಿದ್ದು ಒಕ್ಕೂಟದೊಳಗಿನ ಸಮಭಾಗಿ ಘಟಕಗಳಾಗಿರಬೇಕು ಎಂಬುದು ಅವರ ಒತ್ತಾಸೆಯಾಗಿತ್ತು.

ಭಾರತದ ಸಂವಿಧಾನ ರಚನೆಯನ್ನು ಮಾಡುವಾಗ ಅಮೆರಿಕ, ಆಸ್ಟ್ರೇಲಿಯ, ಕೆನಡಾ, ಐರ್‌ಲ್ಯಾಂಡ್ ಸಂವಿಧಾನಗಳನ್ನು ಪರಿಶೀಲಿಸಿದಷ್ಟು ಸೋವಿಯತ್ ಒಕ್ಕೂಟದ ಸಂವಿಧಾನವನ್ನು ಪರಿಶೀಲಿಸಲಾಗಿಲ್ಲ ವೆಂಬುದು ಅವರ ಬಲವಾದ ಆಕ್ಷೇಪವೂ ಆಗಿತ್ತು.

ಇಷ್ಟೆಲ್ಲಾ ಪ್ರತಿಪಾದನೆಗಳ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆ ನಡೆದು ಪ್ರಜ್ಞಾಪೂರ್ವಕವಾಗಿ ಅಂದಿನ ಸಂವಿಧಾನ ಸಭೆ:

ಭಾರತವನ್ನು ಒಂದು ಫೆಡರಲ್ ಒಕ್ಕೂಟವೆಂದು ಕರೆಯದೇ ಯೂನಿಯನ್ ಎಂದು ಕರೆಯಲು ತೀರ್ಮಾನಿಸಿತು.

ಹಾಗೂ ಆ ತೀರ್ಮಾನಕ್ಕೆ ಬರಲು ಕಾರಣವೇನೆಂದು ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ಸುದೀರ್ಘ ವಿವರಣೆಯನ್ನೂ ನೀಡಿದ್ದಾರೆ.

ಭಾರತವೆಂಬ ಹಿಡಿದಿಟ್ಟ ಸಂಸ್ಥಾನಗಳ ಕೂಟ

ಸಂವಿಧಾನ ರಚನಾ ಸಭೆಯ ಪ್ರಕಾರ ಭಾರತವನ್ನು ಉದ್ದೇಶಪೂರ್ವಕವಾಗಿಯೇ ಫೆಡರಲ್ ಎಂದು ಕರೆಯದೆ ಯೂನಿಯನ್ ಎಂದು ಕರೆಯಲಾಗಿದೆ. ಏಕೆಂದರೆ:

- ಭಾರತ ಒಕ್ಕೂಟವು ಅಮೆರಿಕದಂತೆ ಅದರ ಭಿನ್ನ ಘಟಕಗಳೊಡನೆ ಆದ ಪೂರ್ವ ಒಪ್ಪಂದದಂತೆ ಅಸ್ತಿತ್ವಕ್ಕೆ ಬಂದ ಗಣರಾಜ್ಯವಲ್ಲ.

- ಭಾರತ ಗಣರಾಜ್ಯಗಳೊಳಗಿನ ರಾಜ್ಯ ಘಟಕಗಳಿಗೆ ಭಾರತದಿಂದ ಬೇರ್ಪಡುವ ಸ್ವಾತಂತ್ರ್ಯವಿಲ್ಲ.

-ಸಂವಿಧಾನದಲ್ಲಿ ಅಳಿದುಳಿದ (ರೆಸಿಡ್ಯುಅಲ್) ಅಧಿಕಾರವು ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯ ಸರಕಾರಗಳಿಗಲ್ಲ ಮತ್ತು

- ರಾಜ್ಯಗಳ ಗಡಿಯನ್ನು ಬದಲಿಸುವ ಸಾರ್ವಭೌಮಿ ಅಧಿಕಾರ ಯೂನಿಯನ್ ಸರಕಾರಕ್ಕಿರುತ್ತದೆಯೇ ವಿನಾ ರಾಜ್ಯಗಳಿಗಲ್ಲ. ಅರ್ಥಾತ್

ಭಾರತವು ಬದಲಿಸಲಾಗದ ರಾಜ್ಯಗಳ ಬದಲಿಸಲಾಗದ ಯೂನಿಯನ್ ಅಲ್ಲ.

ಬದಲಿಗೆ ಬದಲಿಸಬಹುದಾದ ರಾಜ್ಯಗಳ ಆದರೆ ಬದಲಿಸಲಾಗದ ಯೂನಿಯನ್ ಆಗಿರುತ್ತದೆ.

ಇದರ ಜೊತೆಗೆ ಸ್ವತಂತ್ರವಾಗಿ ತೆರಿಗೆ ವಿಧಿಸುವ ಹಾಗೂ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ನೇರ ಸಾರ್ವಭೌಮಿ ಅಧಿಕಾರ ಪಡೆದುಕೊಂಡಿರುವ ಘಟಕಗಳನ್ನುಳ್ಳ ಅರೆ ಫೆಡರಲ್ ಸ್ವರೂಪವನ್ನೂ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು.

ಅದರ ಭಾಗವಾಗಿಯೇ ಏಳನೇ ಶೆಡ್ಯೂಲಿನಲ್ಲಿ ಯೂನಿಯನ್ ಸರಕಾರಕ್ಕಿರುವ ಅಧಿಕಾರ, ರಾಜ್ಯಗಳಿಗಿ ರುವ ಅಧಿಕಾರವನ್ನು ಸ್ಪಷ್ಟಪಡಿಸುವ ಬಾಬತ್ತುಗಳನ್ನು ಸಂವಿಧಾನದಲ್ಲೇ ಸೇರಿಸಲಾಯಿತು.

ಆದರೆ ಅದರ ಜೊತೆಗೆ ಯೂನಿಯನ್‌ನ ಮಧ್ಯಪ್ರವೇಶವನ್ನು ಹಿಂಬಾಗಿಲಿಂದ ಹೆಚ್ಚಿಸುವ ಸಮವರ್ತಿ ಪಟ್ಟಿಯನ್ನು ಸೇರಿಸಲಾಯಿತು!

ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದರೆ:

‘‘ಸಂವಿಧಾನದಲ್ಲಿ ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಸಾಂವಿಧಾನಿಕ ಅಧಿಕಾರಗಳನ್ನು ಪಡೆದಿರುವ ಯೂನಿಯನ್ ಸರಕಾರವು ಕೇಂದ್ರದಲ್ಲಿಯೂ ಹಾಗೂ ರಾಜ್ಯ ಸರಕಾರಗಳನ್ನೂ ಅಂಚಿನಲ್ಲಿಯೂ ಹೊಂದಿರುವ ಒಕ್ಕೂಟ ಸ್ವರೂಪವನ್ನು ಭಾರತದ ಯೂನಿಯನ್ ಹೊಂದಿದೆ.’’

ಹೀಗಾಗಿ ದಿಲ್ಲಿ ದರ್ಬಾರನ್ನು ಕೇಂದ್ರ ಸರಕಾರ ಎಂದರೂ ಅಥವಾ ಯೂನಿಯನ್ ಸರಕಾರ ಎಂದರೂ ಸಾಂವಿಧಾನಿಕವಾಗಿ ತಪ್ಪೇನಿಲ್ಲ. ಯೂನಿಯನ್ ಎಂದು ಕರೆದ ಮಾತ್ರಕ್ಕೆ ಅದರ ಏಕಾಧಿಪತ್ಯ ಸ್ವರೂಪ ಬದಲಾಗುವುದಿಲ್ಲ.

ಈಗಾಗಲೇ ಚರ್ಚಿಸಿದಂತೆ ಸಂವಿಧಾನ ಸಭೆಯು ಕರಡು ಚರ್ಚೆಯನ್ನು ಕೈಗೆತ್ತಿಕೊಳ್ಳುವ ವೇಳೆಗೆ ದೇಶವಿಭಜನೆಯ ಕರಾಳ ನೆರಳು ಸದಸ್ಯರ ಮನಸ್ಸನ್ನು ಆವರಿಸಿತ್ತು. ಹೀಗಾಗಿ ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಭಾರತವು ಬಲವಾದ ಕೇಂದ್ರ ಸರಕಾರವಿಲ್ಲದೆ ಉಳಿಯುವುದು ಅಸಾಧ್ಯ ಎಂಬ ಗ್ರಹಿಕೆ ವ್ಯಾಪಕವಾಗಿತ್ತು. ಅದು ಇಡೀ ಭಾರತವನ್ನು ಇಡಿಯಾದ ಮಾರುಕಟ್ಟೆಯಾಗಿ ಪಡೆಯಬಯಸಿದ ಭಾರತದ ಬಂಡವಾಳಶಾಹಿಗಳನ್ನೂ ಒಳಗೊಂಡಂತೆ ಆಳುವವರ್ಗಗಳ ಹಿತಾಸಕ್ತಿಯೂ ಆಗಿತ್ತು. ಹೀಗಾಗಿ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತೆಯನ್ನು ಕೇಳುವವರೂ ಹಾಗೂ ಮೈನಾರಿಟಿಗಳಿಗೆ ಹೆಚ್ಚಿನ ಹಕ್ಕುಗಳನ್ನು ಕೇಳುವವರ ಧ್ವನಿ ಅಮಾನ್ಯಗೊಂಡಿತ್ತು.

ಸಂವಿಧಾನ ಸಭೆಯ ಸಂದರ್ಭ ಹಾಗೂ ಮೇಲೆ ಚರ್ಚಿಸಲಾದ ಪ್ರಧಾನ ಧೋರಣೆಗಳ ಪರಿಣಾಮವಾಗಿ ಭಾರತವನ್ನು ಫೆಡರಲ್ ಎಂದು ಕರೆಯಲಿಲ್ಲ. ಬದಲಿಗೆ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಸಾಂವಿಧಾನಿಕ ಅಧಿಕಾರವಿರುವ ಯೂನಿಯನ್ ಆಗಿ ರಚಿಸಲಾಯಿತು.

ಬಲಿಷ್ಠ ಕೇಂದ್ರವಾಯಿತು

ಬಲಿಷ್ಠ ಭಾರತವಾಯಿತೇ?

ಆದ್ದರಿಂದಲೇ:

-ಯೂನಿಯನ್‌ನ (ಕೇಂದ್ರ) ಪಟ್ಟಿಯಲ್ಲಿ ರಾಜ್ಯಕ್ಕಿಂತ ಹೆಚ್ಚಿನ ಬಾಬತ್ತುಗಳನ್ನು ಒದಗಿಸಲಾಗಿದೆ.

-ಯೂನಿಯನ್‌ನ ಸಂಸತ್ತಿಗೆ ರಾಜ್ಯದ ಗಡಿಗಳನ್ನು ಬದಲಿಸುವ ಪರಮಾಧಿಕಾರವನ್ನು ನೀಡಲಾಗಿದೆ.

-ಸಮವರ್ತಿ ಪಟ್ಟಿಯಲ್ಲಿರುವ ಯಾವುದೇ ವಿಷಯಗಳ ಬಗ್ಗೆ ಯೂನಿಯನ್ ಮತ್ತು ರಾಜ್ಯಗಳ ನಡುವೆ ತಕರಾರು ಉಂಟಾದರೆ ಅಂತಿಮವಾಗಿ ಯೂನಿಯನ್‌ನ ಶಾಸನವೇ ಚಾಲ್ತಿಯಾಗುತ್ತದೆ.

-ವಿಶೇಷ ಸಂದರ್ಭದಲ್ಲಿ ರಾಜ್ಯಗಳ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆಯೂ ಕೇಂದ್ರವೇ ಶಾಸನ ರಚಿಸಬಹುದಾಗಿದೆ.

-ಕೇಂದ್ರ ಸರಕಾರಕ್ಕೆ ರಾಜ್ಯಗಳಿಗಿಂತ ಅಪರಿಮಿತ ಆರ್ಥಿಕ ಸಂಪನ್ಮೂಲ ಶಕ್ತಿ ಮತ್ತು ಅಧಿಕಾರಗಳಿರುವುದು ಮಾತ್ರವಲ್ಲದೆ ಅದನ್ನು ರಾಜ್ಯಗಳಿಗೆ ಹಂಚುವ ವಿಷಯದಲ್ಲೂ ಅಪರಿಮಿತ ಅಧಿಕಾರವಿದೆ.

-ರಾಜ್ಯ ಸರಕಾರಗಳನ್ನು ಬೇಕೆಂದಾಗ ಕಿತ್ತುಹಾಕಿ ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರವು ಯೂನಿಯನ್ ಸರಕಾರಕ್ಕೆ ಸಾಂವಿಧಾನಿಕವಾಗಿಯೇ ಕೊಡಮಾಡಲ್ಪಟ್ಟಿದೆ.

- ಇದಲ್ಲದೆ ದೇಶವ್ಯಾಪಿ ಏಕರೂಪಿ ಚುನಾವಣೆ, ನಾಗರಿಕತ್ವ, ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಯ ಕೀಲಿಕೈ ಕೂಡ ಯೂನಿಯನ್ ಬಳಿಯೇ ಇರುತ್ತದೆ.

ಭಾರತವು ಫೆಡರಲ್ ಆಗದೆ ಹಿಂದಿ ಹೇರಿಕೆ ತಪ್ಪದು

ಈ ಎಲ್ಲಾ ಕಾರಣದಿಂದಾಗಿಯೇ ಆಸ್ಟ್ರೇಲಿಯದ ಸಂವಿಧಾನ ತಜ್ಞ ಕೆ.ಸಿ. ವೀಯರ್ ಅವರು ಭಾರತದ ಸಂವಿಧಾನವನ್ನು ‘‘ಕಾಲುಭಾಗ ಫೆಡರಲ್- ಮುಕ್ಕಾಲು ಭಾಗ ಏಕಸ್ವರೂಪಿ’’ ಎಂದು ಬಣ್ಣಿಸುತ್ತಾರೆ.

ಅಷ್ಟು ಮಾತ್ರವಲ್ಲ ‘‘ಭಾರತ ಯೂನಿಯನ್ ಪ್ರಧಾನವಾಗಿ ಏಕರೂಪಿ ಪ್ರಭುತ್ವವಾಗಿದ್ದು ಅದರಲ್ಲಿ ಕಾಣಿಸಿಕೊಳ್ಳುವ ಅಲ್ಪಸ್ವಲ್ಪ ಫೆಡರಲ್ ಲಕ್ಷಣಗಳು ಅದಕ್ಕೆ ಅಧೀನವಾಗಿವೆ’’ ಎನ್ನುತ್ತಾರೆ.

ಇದರ ನಡುವೆಯೂ ಭಾರತದ ಭಿನ್ನ ಭಿನ್ನ ರಾಷ್ಟ್ರೀಯತೆಗಳ, ಜನಸಮುದಾಯಗಳ, ರಾಜ್ಯಗಳ ನಿರಂತರ ಹೋರಾಟದಿಂದಾಗಿ ಕಳೆದ 75 ವರ್ಷಗಳಲ್ಲಿ ಪ್ರಧಾನವಾಗಿ ಕೇಂದ್ರೀಯ ಸ್ವರೂಪದಲ್ಲಿರುವ ಭಾರತ ಸಂವಿಧಾನದಲ್ಲಿ ಅಳಿದುಳಿದಿರುವ ಫೆಡರಲ್ ಲಕ್ಷಣಗಳು ಜೀವ ಪಡೆದಿವೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಭಾರತದ ಸಂವಿಧಾನದೊಳಗಿರುವ ಅಂತರ್ಗತ ಕೇಂದ್ರೀಕರಣವಾದಿ ಅವಕಾಶಗಳಿಗೆ ಸೈದ್ಧಾಂತಿಕ ಹಾಗೂ ರಾಜಕೀಯ ಶಕ್ತಿ ಒದಗಿ ಬಂದಿದೆ.

ಅದರ ಭಾಗವಾಗಿಯೇ ಹಿಂದಿ ಹೇರಿಕೆ ಅಬಾಧಿತವಾಗಿ ಶಾಸನ ಬಲದೊಂದಿಗೆ ಮುಂದುವರಿದಿದೆ.

ಹೀಗಾಗಿ ಭಾರತ ಸರಕಾರವನ್ನು ಕೇಂದ್ರ ಸರಕಾರ ಎಂದು ಕರೆಯದೆ ಯೂನಿಯನ್ ಸರಕಾರ ಎಂದೋ, ಒಕ್ಕೂಟ ಸರಕಾರ ಎಂದೋ ಕರೆದ ಮಾತ್ರಕ್ಕೆ ಬದಲಾಗುವ ಸಮಸ್ಯೆಯಲ್ಲ ಇದು. ಏಕೆಂದರೆ ಸಾಂವಿಧಾನಿಕವಾಗಿಯೇ ಭಾರತವು ಒಂದು ಒಕ್ಕೂಟವಲ್ಲ. ಅದು ನಿಜವಾಗಿ ಒಂದು ಪ್ರಜಾತಾಂತ್ರಿಕ ಒಕ್ಕೂಟವಾಗಲು ಈಗಿರುವ ನಮ್ಮ ಸಂವಿಧಾನದಲ್ಲೆ ಅವಕಾಶವಿಲ್ಲ.

ಹೀಗಾಗಿ ನಮ್ಮೆದುರಿರುವ ಅಸಲಿ ಸಮಸ್ಯೆ ಏನೆಂದರೆ:

ಭಾರತ ಸಂವಿಧಾನವನ್ನು ನೈಜ ಪ್ರಜಾತಾಂತ್ರಿಕ, ನೈಜ ಫೆಡರಲ್, ನೈಜ ಗಣರಾಜ್ಯವನ್ನಾಗಿ ಮಾಡುವುದು ಹೇಗೆ?

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News