ಅ.29: ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ

Update: 2024-10-25 14:55 GMT

ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಅ.29ರಂದು ಬೆಳಗ್ಗೆ 10ಗಂಟೆಗೆ ಇಂದ್ರಾಳಿ ಸೇತುವೆ ಬಳಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿವೆ ಎಂದು ಸಮಿತಿ ಪ್ರಮುಖ ಅಮೃತ್ ಶೆಣೈ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಕಾಮಗಾರಿಯನ್ನು ಬಹುತೇಕ ಸ್ಥಗಿತ ಗೊಂಡು ಹಲವು ವರ್ಷಗಳು ಸಂದಿವೆ. ಇದರಿಂದ ಇಲ್ಲಿ ಅಪಘಾತಗಳಾಗಿ ಅಪಾರ ಸಾವು ನೋವು ಸಂಭವಿಸುತ್ತಿದೆ. ಅಲ್ಲದೆ ದಿನಗಟ್ಟಲೆ ಟ್ರಾಫಿಕ್ ಜಾಮ್‌ಗೂ ಕಾರಣವಾಗುತ್ತಿದೆ. ಇಲ್ಲಿರುವ ಶಾಲಾ ಕಾಲೇಜು, ವಿದ್ಯಾರ್ಥಿಗಳ ಜೀವಕ್ಕೂ ಅಪಾಯಕರ ಪರಿಸ್ಥಿತಿ ಉಂಟಾಗಿದೆ. ಪಾದಾಚಾರಿಗಳಿಗೂ ಮತ್ತು ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತಾದಿಗಳಿಗೂ, ಬೇರೆ ಬೇರೆ ಜಿಲ್ಲೆ ಗಳಿಂದ ಮಣಿಪಾಲ ಆಸ್ಪತ್ರೆಗೆ ಬರುವ ರೋಗಿಗಳಿಗೂ ಬಹಳ ತೊಂದರೆ ಆಗುತ್ತಿದೆ. ಒಟ್ಟಾರೆ ಈ ಕಾಮಗಾರಿ ವಿಳಂಬ ದಿಂದ ಉಡುಪಿಯ ಆರ್ಥಿಕತೆಗೆ ಪರೋಕ್ಷವಾಗಿ ಹೊಡೆತವಾಗಿದೆ ಎಂದು ಆರೋಪಿಸಿದರು.

ಈ ಪ್ರತಿಭಟನೆಯ ಮೂಲಕ ಜನಜಾಗೃತಿ ಮೂಡಿಸುವುದಲ್ಲದೆ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗು ವುದು. ಮುಂದಿನ ಮೂರು ತಿಂಗಳಲ್ಲಿ ಅಂದರೆ ಜ.29ರೊಳಗೆ ಈ ಕಾಮಗಾರಿಯನ್ನು ಮುಗಿಸಿ ಚತುಷ್ಪಥ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಬೇಕು. ಇಲ್ಲದಿದ್ದರೆ ಜ.30ರಂದು ಉಗ್ರ ಹೋರಾಟ ನಡೆಸಲಾಗುವುದು. ಈ ಕುರಿತ ಮನವಿ ಯನ್ನು ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಅಬ್ದುಲ್ ಅಝೀಝ್ ಉದ್ಯಾವರ, ಬಿ.ಕುಶಲ ಶೆಟ್ಟಿ, ಅನ್ಸಾರ್ ಅಹ್ಮದ್, ಲತಾ ಆನಂದ ಶೇರಿಗಾರ್, ರಮೇಶ್ ಕಾಂಚನ್, ಚಂದ್ರ ಮೋಹನ್, ಸುರೇಶ್ ಶೆಟ್ಟಿ ಬನ್ನಂಜೆ, ಜಾನಕಿ ಕೃಷ್ಣ ನಾಯ್ಕ, ರಮೇಶ್ ತಿಂಗಳಾಯ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ಬಿ.ಶ್ರೀಧರ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಪೀರು ಮುಹಮ್ಮದ್, ಜಯನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News