ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಅಧಿನಿಯಮದಂತೆ ನೋಂದಣಿ ಆಗಿಲ್ಲ

Update: 2023-10-21 02:34 GMT

Photo: wikipedia.org

ಬೆಂಗಳೂರು, ಅ.20: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಣಿಯೇ ಆಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

ಮಂಜುನಾಥೇಶ್ವರ ದೇವಸ್ಥಾನವು ನೋಂದಣಿಯೇ ಅಗಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ನೋಂದಣಿ ಮಾಡಿರುವ ಪ್ರತಿಯನ್ನು ಕೋರಿ ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದ್ದ ನೈಜ ಹೋರಾಟಗಾರರ ವೇದಿಕೆಯ ಎಚ್.ಎಂ. ವೆಂಕಟೇಶ್ ಅವರಿಗೆ 2023ರ ಅಕ್ಟೋಬರ್ 18ರಂದು ಮಾಹಿತಿ ನೀಡಿದ್ದಾರೆ. ಇದರ ಪ್ರತಿಯು The-file.in ಗೆ ಲಭ್ಯವಾಗಿದೆ.

ಮಾಹಿತಿಯಲ್ಲೇನಿದೆ?: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮ 2002ರ ಸೆಕ್ಷನ್ 53ರಂತೆ ಇದುವರೆಗೂ ನೋಂದಣಿ ಆಗಿರುವುದಿಲ್ಲ ಎಂದು ಧಾರ್ಮಿಕ ದತ್ತಿ ತಹಶೀಲ್ದಾರ್ ಅವರು ಮಾಹಿತಿ ಒದಗಿಸಿದ್ದಾರೆ.

ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ವಿಚಾರದಲ್ಲಿ 2015ರಲ್ಲಿ ಮುಜುರಾಯಿ ಸಚಿವರಾಗಿದ್ದ ಜಯಚಂದ್ರ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಇದನ್ನು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಆಕ್ಷೇಪಿಸಿದೆ. ಅಲ್ಲದೆ ಈ ಬಗ್ಗೆ ಬಹಿರಂಗ ಚರ್ಚೆಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಆಹ್ವಾನಿಸಿತ್ತು.

ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ತರಲು ಮುಜರಾಯಿ ಸಚಿವರ ಟಿಪ್ಪಣಿ ಉಲ್ಲೇಖಿಸಿ, ಕಾಯ್ದೆ ಪ್ರಕಾರ ಪ್ರಸ್ತಾವನೆ ಕಳುಹಿಸುವಂತೆ ಇಲಾಖಾ ಆಯುಕ್ತರು ಡಿಸಿಗೆ ನಿರ್ದೇಶನ ಕಳುಹಿಸಿದ್ದಾರೆ. ಇದರ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.

ಬಹುತೇಕ ಮಂದಿಗೆ ಸುಪ್ರೀಂಕೋರ್ಟ್‌ನ ಆದೇಶದಲ್ಲೇನಿದೆ ಮತ್ತು ಧಾರ್ಮಿಕ ದತ್ತಿ ಕಾಯ್ದೆಯಲ್ಲೇನಿದೆ ಎಂಬ ಮಾಹಿತಿ ಇಲ್ಲ. ಈ ವಿವರಗಳನ್ನು ದಾಖಲೆ ಸಹಿತ ಮುಂದಿಡಲಾಗಿದೆ. ಆದರೂ ವೀರೇಂದ್ರ ಹೆಗ್ಗಡೆಯವರಾಗಲೀ, ಅವರ ಅಧಿಕೃತ ಪ್ರತಿನಿಧಿಯಾಗಲೀ ಪ್ರತಿಕ್ರಿಯಿಸಿಲ್ಲ ಎಂದು ಟ್ರಸ್ಟ್ ಆರೋಪಿಸಿತ್ತು.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡದ ರಾಜ್ಯದ ದೇವಾಲಯಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲು ಹಾಗೂ ದೇವಾಲಯಗಳ ಆಸ್ತಿ, ಚಿನ್ನಾಭರಣ ಸೇರಿದಂತೆ ಒಟ್ಟು ಸಂಪನ್ಮೂಲಗಳನ್ನು ದಾಖಲಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯ ನಿಯೋಗ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ನೀಡಿತ್ತು.

ಹಿಂದಿನ ಸರಕಾರದ ಮುಜರಾಯಿ ಇಲಾಖೆ ಸಚಿವರು ಅಸಾಂವಿಧಾನಿಕ ಟಿಪ್ಪಣಿ ಹೊರಡಿಸಿ ದೇವಾಲಯಗಳ ನೋಂದಣಿಗೆ ತಡೆಯಾಜ್ಞೆ ತಂದು ಕಾನೂನುಗಳನ್ನು ಉಲ್ಲಂಘಿಸಿದ್ದರು. ಇಂತಹ ಟಿಪ್ಪಣಿಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆಯಿಲ್ಲ. ಇದನ್ನು ಈಗಿನ ಸರಕಾರ ಪರಿಗಣಿಸಿ ಇಲಾಖೆಗೆ ದೇವಾಲಯಗಳ ನೋಂದಾವಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

ರಾಜ್ಯದ ಹಲವರು ದೇವಸ್ಥಾನಗಳು ಬಹಳ ದೊಡ್ಡ ಪ್ರಮಾಣದ ಭಕ್ತ ಸಮೂಹವನ್ನು ಹೊಂದಿದ್ದು, ಇಂತಹ ದೇವಸ್ಥಾನಗಳು ಜನರ ಭಕ್ತಿ, ನಂಬಿಕೆ ಹಾಗೂ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಂದ ವಿವಿಧ ಬಗೆಯ ಪೂಜೆಗಳನ್ನು ಮಾಡಿಸಲು ಮತ್ತು ಚಿನ್ನಾಭರಣ, ಜಮೀನು, ಹಣದ ರೂಪದಲ್ಲಿ ಹರಕೆಯ ಕಾಣಿಕೆಗಳನ್ನು ಪಡೆಯುತ್ತಿದ್ದು, ಈ ರೀತಿಯ ವ್ಯಾಪಾರೀಕರಣವನ್ನು ಸರಕಾರ ತಪ್ಪಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿತ್ತು.

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬಂದಿದೆ. ಮುಜರಾಯಿ ಇಲಾಖೆಗೆ ಮೇಜರ್ ಸರ್ಜರಿ ಆಗಬೇಕಾಗಿದೆ. ನೋಂದಣಿ ಮಾಡದೆ, ಆಡಳಿತ ಮಂಡಳಿಯ ಜೊತೆ ಕೈ ಜೋಡಿಸಿರುವ ಇಲಾಖೆಯ ಅಧಿಕಾರಿಗಳು ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಇದು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಂತೆ. ಹಿಂದೂ ಧರ್ಮದಲ್ಲಿ ನಂಬಿಕೆಯುಳ್ಳ ಕೋಟ್ಯಂತರ ಭಕ್ತಾದಿಗಳು ಈ ದೇವಸ್ಥಾನಗಳಿಗೆ ಹೋಗಿ ಹರಕೆ ಕಾಣಿಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಆಡಳಿತ ಮಂಡಳಿ ಅವರ ಧಾರ್ಮಿಕ ಭಾವನೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

-ಎಚ್.ಎಂ. ವೆಂಕಟೇಶ್,

ನೈಜ ಹೋರಾಟಗಾರರ ವೇದಿಕೆಯ ಮುಖಂಡ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News