ಸಾಧನೆಯ ಹಾದಿಯಲ್ಲಿ ‘ಜ್ಯೋತಿ’ಯ ಸ್ಫೂರ್ತಿದಾಯಕ ಬದುಕು

Update: 2023-11-27 05:50 GMT

ಬೆಂಗಳೂರು: ತುಮಕೂರಿನ ಶಿರಾ ಸೀಮೆಯ ಪಕ್ಕಾ ದೇಸಿ ಸೊಗಡಿನ ದ್ವಾರಾಳು ಗ್ರಾಮದಿಂದ ಬೆಂಗಳೂರು ಎಂಬ ಸಿಲಿಕಾನ್ ಸಿಟಿಗೆ ಬಂದು ಅಲ್ಲಿ ನೆಲೆಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನ ಗೌರವ ಪಡೆದ ಗೃಹಿಣಿಯೊಬ್ಬರ ಸಾಧನೆಯ ಕಥೆಯಿದು.

ಸಂಸಾರದ ನೊಗಕ್ಕೆ ಹೆಗಲನ್ನು ಕೊಟ್ಟ ಬಳಿಕ ಹೆಚ್ಚಿನ ಗೃಹಿಣಿಯರು ಗಂಡ-ಮನೆ-ಮಕ್ಕಳ ಜವಾಬ್ದಾರಿ ನಿಭಾಯಿಸುವುದರಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡುಬಿಟ್ಟಿರುತ್ತಾರೆ ಮತ್ತು ತಮ್ಮ ಆಸಕ್ತಿಯ ಕಡೆಗೆ ಗಮನವನ್ನೇ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಅನೇಕ ಗೃಹಿಣಿಯರಿಗೆ ಸ್ಫೂರ್ತಿಯ ಸೆಲೆಯಾಗಬಲ್ಲ ವಿಷಯ ಇದು.

ಗೃಹಿಣಿಯ ಹೆಸರು ಜ್ಯೋತಿ ಶಾಂತರಾಜು, ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈಕೆ, ಹುಟ್ಟೂರಿನಲ್ಲಿ ಪಿಯುಸಿ ಮುಗಿಸಿ, ಬಳಿಕ ಕುಟುಂಬದವರ ಒತ್ತಡಕ್ಕೆ ಮಣಿದು 18 ವರ್ಷದವರಿರುವಾಗಲೇ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ. ಬಳಿಕ 23 ವರ್ಷಕ್ಕೇ ಇವರು ಮೂವರು ಮಕ್ಕಳ ತಾಯಿಯೂ ಆಗುತ್ತಾರೆ. ನೂರಾರು ಕನಸುಗಳನ್ನು ಹೊತ್ತ ಹರೆಯ ಕಳೆದು ಬದುಕಿನ ಅರ್ಥ ತಿಳಿಯುವಷ್ಟರಲ್ಲೇ ಇವರ ಅರ್ಧ ಜೀವನ ಕಳೆದುಹೋಗುತ್ತದೆ. ಈ ಸಂಸಾರದ ಒತ್ತಡದಲ್ಲಿ ಮುಂದಕ್ಕೆ ಓದಬೇಕೆನ್ನುವ ಆಸೆ ಹಾಗೆಯೇ ಉಳಿಯುತ್ತದೆ.

► ವ್ಯಾಸಂಗದ ಹಂಬಲ ಕರಗಲಿಲ್ಲ: ಹೀಗಿದ್ದರೂ ಜ್ಯೋತಿ ಅವರಿಗೆ ಓದಬೇಕೆನ್ನುವ ಹಂಬಲ ಮನದ ಮೂಲೆಯಲ್ಲಿ ಹಾಗೆಯೇ ಕುಳಿತುಬಿಟ್ಟಿತ್ತು. ಹೀಗಿರುತ್ತಾ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದ ಜ್ಯೋತಿ ಅವರು, ಬದುಕು ಎನ್ನುವ ಸಂಸ್ಥೆಯಲ್ಲಿ ಡಿಪ್ಲೊಮಾ ಇನ್ ಜರ್ನಲಿಸಂ ಮುಗಿಸುತ್ತಾರೆ. ಅನಂತರ ತಮ್ಮ ಮಕ್ಕಳೊಂದಿಗೆ ತಾವು ಓದನ್ನು ಮುಂದುವರಿಸಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ.ಪದವಿಯನ್ನು ಪಡೆಯುತ್ತಿದ್ದಾರೆ.

ಪತ್ರಕರ್ತೆ, ಕುಂಭ ಕಲೆ ಕಲಾವಿದೆ, ಹಿನ್ನೆಲೆ ಧ್ವನಿ ಕಲಾವಿದೆ, ಟ್ರಾವೆಲ್ಲರ್, ಫೋಟೊಗ್ರಫಿ.. ಹೀಗೆ ‘ಸಕಲಕಲಾವಲ್ಲಭೆ’ಯಾಗಿರುವ ಜ್ಯೋತಿ ಅವರು, ಮನೆಯ ಜವಾಬ್ದಾರಿಯ ಜತೆ ಜತೆಗೇ ಡಿಪ್ಲೊಮಾ ಇನ್ ಕೌನ್ಸೆಲಿಂಗ್, ನರ್ಸರಿ ಟೀಚರ್ಸ್ ಟ್ರೈನಿಂಗ್, ಲೇಖನ, ಅಂಕಣಗಳ ಬರಹಗಾರ್ತಿಯಾಗಿಯೂ ತೊಡಗಿಸಿಕೊಂಡು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

► ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ: ಆರು ತಿಂಗಳ ಹಿಂದೆ ಬಿಡದಿಯಲ್ಲಿರುವ ಕೆಪಿಜೆ ಆರ್ಟಿಜನ್ ಇನ್ಸ್ಟಿಟ್ಯೂಟ್ನಲ್ಲಿ ಮಣ್ಣಿನಲ್ಲಿ ಗಣಪತಿ ಮಾಡುವ ತರಬೇತಿ ಪಡೆದೆ. ನಂತರ ‘ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ಸ್’ಗೆ ಈ ಕಲೆಯನ್ನು ಪ್ರಸ್ತುತ ಪಡಿಸುವ ಯೋಚನೆ ಬಂತು. ಆದರೆ ನನಗೆ ವಯಸ್ಸಾಗೋಗಿದೆ. ಇಷ್ಟು ವಯಸ್ಸಿನಲ್ಲಿ ಮಾಡಬಹುದಾ ಎಂಬ ಅನುಮಾನದಲ್ಲೇ ಸಂಬಂಧಪಟ್ಟವರನ್ನು ವಿಚಾರಿಸಿದೆ. ಆಗ ನನಗೆ ಕಲಿತ ಕಲೆಯನ್ನು ತೋರುವ ಅವಕಾಶ ಬಂತು. ಕೇವಲ 20 ನಿಮಿಷಗಳಲ್ಲಿ 2.2 ಸೆಂ.ಮೀ. ಎತ್ತರದ ಮಣ್ಣಿನ ಗಣಪತಿಯ ನಿರ್ಮಿಸಿ ‘ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ಸ್’ ಗೌರವಕ್ಕೆ ಪಾತ್ರಳಾದೆ ಎನ್ನುತ್ತಾರೆ ಜ್ಯೋತಿ.

► ಹಾದಿಯೇ ತೋರಿದ ಹಾದಿ: ‘ನಾನು ಬರಹಗಾರ್ತಿ ಆಗುತ್ತೇನೆ ಎಂದು ಎಂದೂ ಕನಸು ಕಂಡಿರಲಿಲ್ಲ. ಮೊದಲಿಗೆ ಚಿಕ್ಕ ಚಿಕ್ಕದಾಗಿ ಬರೆಯಲು ಶುರು ಮಾಡಿ ಈಗ ನೂರಾರು ಲೇಖನ, ಅಂಕಣಗಳನ್ನು ಬರೆದಿರುವುದನ್ನು ಕಂಡರೇ ನನಗೇ ಅಚ್ಚರಿ ಮೂಡುತ್ತದೆ. ಬರೆಯುವುದು ಒಂಥರಾ ನೆಮ್ಮದಿ, ಖುಷಿ ಕೊಡುವ ಸಂಗತಿ. ಹಗಲು ರಾತ್ರಿಯೆನ್ನದೆ, ನಿದ್ದೆ, ಹಸಿವೆಯೆನ್ನದೇ ಒಂಟಿಯಾಗಿ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಕ್ರಮಿಸಿ ಹಳ್ಳಿಗಳಿಗೆ ಭೇಟಿ ಕೊಟ್ಟು ಯಾರೂ ಗುರುತಿಸದ ನೂರಾರು ಜನರ ಬದುಕಿನ ಕಥೆಗಳನ್ನು ‘ಹಾದಿಯೇ ತೋರಿದ ಹಾದಿ’ ಶೀರ್ಷಿಕೆಯ ಅಂಕಣ ಬರಹದಲ್ಲಿ ಬಿತ್ತರಿಸುತ್ತಿದ್ದೇನೆ ಎನ್ನುತ್ತಾರೆ ಜ್ಯೋತಿ.

ಈ ಹಾದಿಯು ನನಗೆ ಅತ್ಯಂತ ನೆಮ್ಮದಿಯ ಬದುಕನ್ನು ಕೊಟ್ಟಿದೆ. ಒಂದೊಂದು ಭಾಗದ ಹೊಸ ಮುಖ, ಸಂಸ್ಕೃತಿ, ಆಚಾರ, ವಿಚಾರ, ಕಷ್ಟ, ಸಂಕಷ್ಟ, ನೋವು, ಬೆರಗು ಇವೆಲ್ಲವೂ ನನ್ನನ್ನು ಮತ್ತಷ್ಟು ತೆರೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಒಂದೆಡೆ ಹೋಗುವಾಗ ಅಪರಿಚಿತಳಾಗಿ ಹೋಗುತ್ತಿದ್ದೆ, ಹಿಂತಿರುಗುವಾಗ ಆ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿ ಆರ್ದ್ರ ಮನಸ್ಸಿನಿಂದ ಮರಳುತ್ತಿದ್ದೆ. ಈ ಅಂಕಣದ ಮೂಲಕ ಮೂಲೆ ಗುಂಪಾಗಿದ್ದ ವ್ಯಕ್ತಿಗಳು, ಸಮುದಾಯಗಳನ್ನು ಗುರುತು ಹಚ್ಚುವ ಅವಕಾಶ ಸಿಕ್ಕಿದೆ ಎನ್ನುತ್ತಾ ಹೆಮ್ಮೆ ಪಡುತ್ತಾರೆ ಜ್ಯೋತಿ. ತನ್ನೆಲ್ಲಾ ಆಸೆ ಆಕಾಂಕ್ಷೆಗಳ ಹಿಂದೆ ಅಪ್ಪ, ಅಮ್ಮ, ತಮ್ಮ, ಕುಟುಂಬದ ಆಧಾರ ಸ್ತಂಭವಾದ ಗಂಡ ಭಾಸ್ಕರ್ ಮತ್ತು ಮಕ್ಕಳ ಪಾತ್ರ ದೊಡ್ಡದು ಎನ್ನುವ ಜ್ಯೋತಿ ಅವರು, ನಿರಂತರ ಪ್ರಯತ್ನ, ಸಾಧಿಸುವ ಹಠ, ಛಲವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎಂಬುದಕ್ಕೆ ತಾಜಾ ಉದಾಹರಣೆಯಾಗಿ, ಸ್ಫೂರ್ತಿಯಾಗಿ ಹೊರಹೊಮ್ಮಿದ್ದಾರೆ. ಹೊಸದನ್ನೇನೋ ಹೆಕ್ಕಿ ಕಲಿಕೆಯಬೇಕೆನ್ನುವ ತುಡಿತವೇ ಇವರನ್ನು ಸಾಧನೆಯ ಶಿಖರವೇರಿಸುತ್ತದೆ ಎನ್ನುವುದರಲ್ಲಿ ಯಾವ ಸಂಶಯಬೇಡ..!

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಮಣ್ಣು ಮತ್ತು ಮಡಿಕೆಗಳನ್ನು ಬಳಸಿ 1 ಗಂಟೆ 43 ನಿಮಿಷಗಳಲ್ಲಿ ತಬಲಾ ಗಣಪತಿ, ಡೋಲು ಗಣಪತಿ, ವೀಣೆ ಗಣಪತಿ, ಓಲಗ ಗಣಪತಿ, ಹಾರ್ಮೋನಿಯಂ ಗಣಪತಿ ಈ ರೀತಿಯಾಗಿ ಸಂಗೀತ ವಾದ್ಯಗಳನ್ನು ನುಡಿಸುವ 5 ಚಿಕ್ಕ ಗಣೇಶನ (ಪ್ರತಿಯೊಂದು 2.8ಸೆಂ.ಮೀ. 2 ಸೆಂ.ಮೀ. ಅಳತೆಯ) ಒಂದು ಸೆಟ್ ಅನ್ನು ತಯಾರಿಸಿದಕ್ಕಾಗಿ 2023ರ ಅಕ್ಟೋಬರ್ನಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವವು ಸಿಕ್ಕಿತು. ಈ ಕಲೆಯನ್ನು ಇಂದಿನ ಮಕ್ಕಳಿಗೆ ತರಬೇತಿ ಕೊಡುವ ಯೋಚನೆಯಿದೆ ಅನ್ನುತ್ತಾರೆ ಜ್ಯೋತಿ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಯೋಗೇಶ್ ಮಲ್ಲೂರು

contributor

Similar News