ಟೊಮೆಟೊಗಿರೋ ಬೆಲೆ ಶಾಸಕರಿಗೂ ಇಲ್ಲ, ರೂಪಾಯಿಗೂ ಇಲ್ಲ !

Update: 2023-07-07 17:19 GMT
Editor : Safwan | Byline : ಆರ್. ಜೀವಿ

ಬೆಂಗಳೂರಲ್ಲಿ ಟೊಮೆಟೊ ಕೇಜಿಗೆ 100 ರಿಂದ 120 ರೂಪಾಯಿ. ಮಂಗಳೂರಲ್ಲಿ ಕೇಜಿಗೆ 84 ರಿಂದ 120 ರೂಪಾಯಿ. ದಿಲ್ಲಿಯಲ್ಲಿ 120 ರಿಂದ 160 ರೂಪಾಯಿ. ಬೆಂಗಳೂರಲ್ಲಿ ಶುಂಠಿಯ ಬೆಲೆ ಕೇಜಿಗೆ 140 ರಿಂದ 280 ರೂಪಾಯಿ. ಒಣ ಮೆಣಸಿನಕಾಯಿ ಕೇಜಿಗೆ 300 ರಿಂದ 420 ರೂಪಾಯಿ. ಹಸಿ ಮೆಣಸಿಗೆ ಕೇಜಿಗೆ 80 ರಿಂದ 100 ರೂಪಾಯಿ. ಆದ್ರೆ, ನೀವು ಇಷ್ಟೆಲ್ಲಾ ರೇಟು ಜಾಸ್ತಿ ಆದ್ರೆ ಹೇಗೆ ಬದುಕೋದು ಅಂತ ದೂರೋ ಹಾಗಿಲ್ಲ. ಇದಕ್ಕೆ ಎರಡು ಕಾರಣಗಳಿವೆ.

ಒಂದು - ಕೇಂದ್ರದಲ್ಲಿ ಅಧಿಕಾರದಲ್ಲಿರೋದು ಮೋದೀಜಿ. ಅವರು ಏನೇ ಮಾಡಿದ್ರೂ ಬಹಳ ದೂರಾಲೋಚನೆ ಇಟ್ಟುಕೊಂಡೇ ಮಾಡಿರ್ತಾರೆ. ಹಾಗಾಗಿ ನೋಟು ಬ್ಯಾನು, ಲಾಕ್ ಡೌನ್ ಗಳ ಹಾಗೇ ಈ ಬೆಲೆ ಏರಿಕೆ ಕೂಡ ತಾತ್ಕಾಲಿಕವಾಗಿ ಕಠಿಣ ಅನ್ನಿಸಿದ್ರೂ ಮುಂದೆ ಭಾರತವನ್ನು ವಿಶ್ವಗುರು ಮಾಡೋ ಹೆಜ್ಜೆ ಆಗಿರಬಹುದು. ಬಹಳ ಜನ ಈ ಹಿಂದೇನೆ ಪೆಟ್ರೋಲ್ ಗೆ ನೂರು ರೂಪಾಯಿಯಾದಾಗ ಮೋದೀಜಿಗಾಗಿ ಮುನ್ನೂರು ರೂಪಾಯಿಯಾದರೂ ಕೊಡಲು ನಾವು ಸಿದ್ಧ ಅಂತ ಹೇಳಿದ್ರು. ಹಾಗಾಗಿ ಈಗ ಟೊಮೆಟೊ, ಶುಂಠಿ, ಮೆಣಸಿನ ಬೆಲೆ ಏರಿಕೆ ಆಗಿದೆ ಎಂದು ದೂರೋದು ಅಸಾಧ್ಯ.

ಇನ್ನೊಂದು ಕಾರಣವೂ ಇದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದು ಹೇಳಿಕೆ ಕೊಟ್ಟಿದ್ದಾರೆ. ಪಿಯೂಷ್ ಗೋಯಲ್ ಗೊತ್ತಲ್ವಾ.. ನಿಮಗೆ. ಮೊನ್ನೆ ನಮ್ಮ ರಾಜ್ಯದ ಆಹಾರ ಸಚಿವ ಮುನಿಯಪ್ಪ ಅವರನ್ನು ದಿಲ್ಲಿಯಲ್ಲಿ ಮೂರು ದಿನ ಕಾಯಿಸಿ, ಆಮೇಲೆ ಭೇಟಿಯಾಗಿ ಅಕ್ಕಿ ಮಾರಲು ಬಿಡೋದಿಲ್ಲ ಅಂತ ಹೇಳಿದ್ರಲ್ವಾ ಅದೇ ಪಿಯೂಷ್ ಗೋಯಲ್. ಅವರ ಪ್ರಕಾರ " ಕಳೆದ ವರ್ಷಕ್ಕೆ ಹೋಲಿಸಿದ್ರೆ ಟೊಮೆಟೊದ ರಾಷ್ಟ್ರೀಯ ಸರಾಸರಿ ಬೆಲೆ ಅಷ್ಟೇ ಇದೆ. ತೀರಾ ಜಾಸ್ತಿಯೇನೂ ಆಗಿಲ್ಲ."

ಹಾಗಾಗಿ ನೀವು ಬೆಂಗ್ಳೂರಲ್ಲಿ, ಹುಬ್ಬಳ್ಳಿಯಲ್ಲಿ, ಮಂಗ್ಳೂರಲ್ಲಿ 100 ರೂಪಾಯಿಗಿಂತ ಜಾಸ್ತಿ ದುಡ್ಡು ಕೊಟ್ಟು ಒಂದು ಕೇಜಿ ಟೊಮೆಟೊ ಖರೀದಿಸುವಾಗ ಪಿಯೂಷ್ ಗೋಯಲ್ ಅವರ ಈ ಹೇಳಿಕೆಯನ್ನು ನೆನಪು ಮಾಡಿಕೊಂಡ್ರೆ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ನೀವು ನೂರು, ನೂರಿಪತ್ತು ಕೊಟ್ಟು ಖರೀದಿಸಿದ್ರೂ ರಾಷ್ಟ್ರೀಯ ಸರಾಸರಿ ಕಡಿಮೆ ಇದೆ ಅಂತ ನಿಮಗೆ ಗೊತ್ತಿದ್ರೆ ಸಾಕು.

ಆದರೆ ನೀವು ಕೊಡ್ತಾ ಇರೋ ಬೆಲೆಗೂ , ರಾಷ್ಟ್ರೀಯ ಸರಾಸರಿ ಬೆಲೆಗೂ ಇರೋ ವ್ಯತ್ಯಾಸದ ದುಡ್ಡು ನಿಮಗೆ ಪಿಯೂಷ್ ಗೋಯಲ್ ಬಂದು ಕೊಡ್ತಾರಾ ಅಂತ ನೀವು ಕೇಳಿದ್ರೆ ತಕ್ಷಣ ನೀವು ದೇಶದ್ರೋಹಿ, ಅರ್ಬನ್ ನಕ್ಸಲ್ ಆಗಿ ಬಿಡ್ತೀರಿ. ಹಾಗಾಗಿ ಹಾಗೆಲ್ಲ ಕೇಳೋ ತಂಟೆಗೆ ಹೋಗ್ಬೇಡಿ.

ಯಾಕಂದ್ರೆ ಈಗ ಸರಕಾರ ನಡೆಸುವವರು ನೀವು ಟೊಮೆಟೊ, ಹಸಿಮೆಣಸು, ಶುಂಠಿ ಖರೀದಿಸುವಾಗ ಆಗೋ ಸಮಸ್ಯೆ ಬಗ್ಗೆ ತಲೆಬಿಸಿ ಮಾಡ್ಕೋಳೋ ಪರಿಸ್ಥಿತೀಲಿ ಇಲ್ಲ. ಯಾಕಂದ್ರೆ ಮೊದಲೆಲ್ಲ ಶಾಸಕರನ್ನು ಖರೀದಿಸುವ ಬಗ್ಗೆ ಮಾತ್ರ ಅವರಿಗೆ ತಲೆಬಿಸಿ ಇತ್ತು. ಈಗ ಇಡೀ ಪಕ್ಷವನ್ನೇ ಖರೀದಿಸೋ ತಲೆ ಬಿಸಿ ಇದೆ.

ಶಾಸಕರು ಈಗ ಬಹಳ ಅಗ್ಗವಾಗಿದ್ದಾರೆ. ಅವರು ಟೊಮೆಟೊಗಿಂತ ಕಡಿಮೆ ಬೆಲೆಯಲ್ಲಿ ಬೇಕಾದ್ರೂ ಸಿಗ್ತಾರೆ. ಆದರೆ ಇಡೀ ಪಕ್ಷ ಖರೀದಿಸುವಾಗ ಸ್ವಲ್ಪ ಬೆಲೆ ಜಾಸ್ತಿ ಆಗುತ್ತೆ, ಚೌಕಾಸಿ ಜಾಸ್ತಿ ಆಗುತ್ತೆ, ಅದನ್ನೆಲ್ಲ ಸಂಭಾಳಿಸೋದು ಬಹಳ ಕಷ್ಟ ನೋಡಿ. ನಿಮಗೆ ಬೆಲೆ ಏರಿಕೆಯಿಂದ ಬೇಜಾರಾದ್ರೆ ಮೋದೀಜಿ ಅವರ ಸರಕಾರ ಹಾಗು ಪಕ್ಷದಲ್ಲೇ ಹಲವರು ನಿಮಗೆ ಜೋಕು ಹೇಳುವವರೂ ಇದ್ದಾರೆ. ಆದರೆ ಒಂದೇ ಅಂದ್ರೆ ಅವೆಲ್ಲ ನಗಿಸೋ ಜೋಕುಗಳಲ್ಲ, ಅವೆಲ್ಲ ಅಳು ಬರಿಸೋ ಕ್ರೂರ ಜೋಕುಗಳು.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಪ್ರಕಾರ " ನಮ್ಮ ದೇಶದ ವಿದೇಶಾಂಗ ನೀತಿ ಇಷ್ಟೊಳ್ಳೆ ಇಲ್ಲದಿದ್ದರೆ ಪೆಟ್ರೋಲ್, ಅಡುಗೆ ಎಣ್ಣೆ ಬೆಲೆ ಇನ್ನಷ್ಟು ಜಾಸ್ತಿ ಆಗುತ್ತಿತ್ತಂತೆ ". ಹಾಗಾದರೆ ಪೆಟ್ರೋಲ್ ಗೆ ನೂರು ರೂಪಾಯಿ ತೀರಾ ಕಡಿಮೆ ಅಂತ ಅವರು ಹೇಳ್ತಾ ಇದ್ದಾರೆ. ಅವರ ಪ್ರಕಾರ ಮುನ್ನೂರೋ, ನಾನುರೋ ಆಗಿಲ್ಲ, ಹಾಗಾಗಿ ನಿಮಗೆ ಇನ್ನೂರು, ಮುನ್ನೂರು ರೂಪಾಯಿ ಉಳಿತಾಯವಾಗ್ತಾ ಇದೆ.

ಪಿಯೂಷ್ ಗೋಯಲ್ ನೋಡಿದ್ರೆ ರಾಷ್ಟ್ರೀಯ ಸರಾಸರಿ ಬೆಲೆಯ ಬಗ್ಗೆ ಹೇಳಿ ನಿಮ್ಮನ್ನು ರಂಜಿಸುತ್ತಾರೆ. ಈ ಕ್ರೂರ ಜೋಕು ಕೇಳಿ ನೀವು ಅಳ್ತಾ ಇದ್ರೆ, ದೇವೇಂದ್ರ ಫಡ್ನವಿಸ್ ನೋಡಿ ಬಿಟ್ಟಾರು. ಅವರು ಚಕ್ಕಿ ಪೀಸಿಂಗ್ ಖ್ಯಾತಿಯ ಅಜಿತ್ ಪವಾರ್ ಅವರನ್ನು ಡಿಸಿಎಂ ಮಾಡಿದ ಮೇಲೆ ಒಂದು ಅಣಿಮುತ್ತು ಉದುರಿಸಿದ್ದಾರೆ. " ಈಗ ಬೆಲೆ ಏರಿಕೆ ಹಾಗು ನಿರುದ್ಯೋಗದ ಬಗ್ಗೆ ಮಾತಾಡೋದು ಫ್ಯಾಶನ್ ಆಗಿ ಬಿಟ್ಟಿದೆ " ಎಂದು ಹೇಳಿದ್ದಾರೆ ಫಡ್ನವಿಸ್. ಅವರಿಗೆ ಗೊತ್ತಿರೋದು ಶಾಸಕರ ಬೆಲೆಯ ಬಗ್ಗೆ ಮಾತ್ರ. ಯಾಕಂದ್ರೆ ಟೊಮೆಟೊ, ಶುಂಠಿ ಖರೀದಿಸೋ ಟೆನ್ಷನ್ ಅವರಿಗಿಲ್ಲ. ಆದರೆ ಶಾಸಕರನ್ನು ಖರೀದಿಸೋದು ಮಾತ್ರ ನಿಲ್ತಾನೆ ಇಲ್ಲ.

ಈ ದೇಶದಲ್ಲಿ ಟೊಮೆಟೊ, ಶುಂಠಿ ಬೆಲೆ ಏರಿದ ಹಾಗೆ ಇಳೀತಾ ಇರೋದು ಶಾಸಕರ ಬೆಲೆ ಮಾತ್ರ ಅಲ್ಲ. ರೂಪಾಯಿ ಬೆಲೆನೂ ಪಾತಾಳ ಸೇರಿದೆ. ಒಂದು ಡಾಲರ್ ಗೆ ಹದಿನೈದು ರೂಪಾಯಿ ಸಿಗೋ ಕಾಲ ಮೋದೀಜಿ ಅವರಿಂದಾಗಿ ಬರುತ್ತೆ ಅಂತ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದನ್ನು ನೆನಪಿಸಿಕೊಳ್ಳಬೇಡಿ. ಅದನ್ನು ಬಿಟ್ಟು ಬಿಡಿ. ತೀರಾ ಇತ್ತೀಚಿಗೆ ರೂಪಾಯಿಯನ್ನೇ ಅಂತರ್ ರಾಷ್ಟ್ರೀಯ ಕರೆನ್ಸಿಯಾಗಿ ಬಳಸುವ ಬಗ್ಗೆ ಟಿವಿ ಚಾನಲ್ ಗಳೂ, ಪತ್ರಿಕೆಗಳೂ , ಐಟಿ ಪಡೆಗಳೂ ಭಾರೀ ಪ್ರಚಾರ ಮಾಡಿದ್ದವು. ಆದರೆ ಈಗ ಭಾರತವೇ ರಷ್ಯಾಕ್ಕೆ ಚೀನೀ ಕರೆನ್ಸಿಯಲ್ಲಿ ಪಾವತಿ ಮಾಡುತ್ತಿದೆ. " ರೂಪಾಯಿಯನ್ನು ಯಾವುದೇ ದೇಶ ಸ್ವೀಕರಿಸುತ್ತಿಲ್ಲ. ರೂಪಾಯಿ ಅಂತರ್ ರಾಷ್ಟ್ರೀಕರಣ ಈಗ ಅಸಾಧ್ಯ " ಎಂದಿದ್ದಾರೆ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಸಿ ರಂಗರಾಜನ್.

ಅಲ್ಲಿಗೆ ಈ ಸರಕಾರ ಬಂದ ಮೇಲೆ ಮನುಷ್ಯರ ಜೀವ ಹಾಗು ಘನತೆಯ ಬೆಲೆ , ಶಾಸಕರ ಬೆಲೆ, ಸಾಂವಿಧಾನಿಕ ಸಂಸ್ಥೆಗಳ ಮೌಲ್ಯ ಮಾತ್ರವಲ್ಲ, ರೂಪಾಯಿಯ ಬೆಲೆಯೂ ಪಾತಾಳ ಸೇರಿದೆ ಅಂತಾಯ್ತು. ಹೀಗೇ ಮುಂದುವರಿದ್ರೆ ರಾಮ್ ಸೇತು ಹುಡುಕಲು ಹೋದ ಹಾಗೆ ಅಕ್ಷಯ್ ಕುಮಾರ್ ರೂಪಾಯಿಯನ್ನು ಹುಡುಕಲು ಹೋಗೋ ಸಿನಿಮಾನೂ ಮಾಡಬಹುದಾ ಏನೋ ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಆರ್. ಜೀವಿ

contributor

Similar News