ರಾಜ್ಯದ ಪುರಾತನ ರಾಮ ಮಂದಿರಗಳ ಜೀರ್ಣೋದ್ದಾರ; 100 ಕೋಟಿ ರೂ. ಮೀಸಲಿಟ್ಟ ಕಾಂಗ್ರೆಸ್ ಸರಕಾರ

Update: 2024-01-24 03:01 GMT

Photo: witter.com/INCIndia 

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್‌ಸಮರವೇರಿದ್ದು, ಈ ನಡುವೆಯೇ ರಾಜ್ಯ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿರುವ ಪುರಾತನ ರಾಮಮಂದಿರ ಜೀರ್ಣೋದ್ಧಾರಕ್ಕೆ 100 ಕೋಟಿ ರೂ. ಮೀಸಲಿಡಲಿದೆ.

ಅಲ್ಲದೇ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರಕಾರವು ನಿವೇಶನ ಹಂಚಿಕೆ ಮಾಡಿದರೆ 100 ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹ ನಿರ್ಮಾಣ ಮಾಡಲಿದೆ. ರಾಜ್ಯದ ವಿವಿಧ ಮಠಗಳಿಗೆ ಸಹಾಯಧನ ರೂಪದಲ್ಲಿ 210 ಕೋಟಿ ರೂ. ಸೇರಿ ಇಲಾಖೆಯ ಇನ್ನಿತರ ಯೋಜನೆಗಳಿಗೆ ಒಟ್ಟಾರೆ 690.28 ಕೋಟಿ ರೂ.ಗಳನ್ನು ಅಂದಾಜಿಸಿದೆ.

ಇದೇ ಫೆಬ್ರವರಿ-ಮಾರ್ಚ್‌ನಲ್ಲಿ ಮಂಡಿಸಲಿರುವ 2024-25ನೇ ಸಾಲಿನ ಆಯವ್ಯಯದಲ್ಲಿ ಪುರಾತನ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ಬೃಹತ್ ವಸತಿ ಗೃಹ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಘೋಷಿಸಲಿದ್ದಾರೆ.

2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ರೂಪಿಸಿರುವ ಹೊಸ ಯೋಜನೆಗಳ ಪಟ್ಟಿಯಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣವೂ ಸೇರಿದೆ. ಇಲಾಖೆಯು ಸಲ್ಲಿಸಿರುವ ಪ್ರಸ್ತಾವವು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ.

ಬೆಂಗಳೂರು ನಗರದ ಮಹದೇವಪುರದಲ್ಲಿ ನಡೆದಿದ್ದ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ರಾಮ ಮಂದಿರಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂ. ಮತ್ತು ಅಯೋಧ್ಯೆಯಲ್ಲಿ ವಸತಿ ಗೃಹ ನಿರ್ಮಾಣಕ್ಕೆ ಉದ್ದೇಶಿಸಿರುವುದು ಕುತೂಹಲ ಮೂಡಿಸಿದೆ.

‘ರಾಜ್ಯದಲ್ಲಿ 100 ಪುರಾತನ ರಾಮ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ತಲಾ 1 ಕೋಟಿ ರೂ. ವೆಚ್ಚದಲ್ಲಿ ಒಟ್ಟು 100 ಕೋಟಿ ರೂ.ಗಳನ್ನು ಒದಗಿಸಲು ಉದ್ದೇಶಿಸಿದೆ. ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರಕಾರವು ನಿವೇಶನ ಹಂಚಿಕೆ ಮಾಡಿದರೆ ರಾಜ್ಯ ಸರಕಾರವು 100 ಕೋಟಿ ರೂ. ವೆಚ್ಚದಲ್ಲಿ ವಸತಿ ಗೃಹ ನಿರ್ಮಿಸಲು ಉದ್ದೇಶಿಸಿದೆ. ಈ ಎರಡೂ ಯೋಜನೆಗಳಿಗೆ ನಿಗದಿಗೊಳಿಸಿರುವ ಮೊತ್ತವು ಆರ್ಥಿಕ ಇಲಾಖೆಯ ಸೂಚಿಸಿರುವ ಮೊತ್ತದೊಳಗೇ ಇದೆ’ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯು ಹೊಸ ಯೋಜನೆಗಳನ್ನು ವಿವರಿಸಿರುವುದು ಗೊತ್ತಾಗಿದೆ. ಅದೇ ರೀತಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಿಗಮ, ದೇವಾಲಯ, ಕೊಪ್ಪಳ ಜಿಲ್ಲೆ ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗಾಗಿ ಪ್ರಾಧಿಕಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅಭಿವೃದ್ಧಿಗಾಗಿ ಪ್ರಾಧಿಕಾರವನ್ನು ರಚಿಸಲಾಗುವುದು ಎಂದು ಘೋಷಿಸಲಿದೆ. ಈ ಎರಡೂ ಪ್ರಾಧಿಕಾರಗಳ ರಚನೆಯು ಆಯವ್ಯಯದ ಘೋಷಣೆಯಾಗಿದೆ.

ಸರಕಾರದ ಸಂಚಿತ ನಿಧಿಯಿಂದ ಅನುದಾನ ಅಗತ್ಯವಿರುವುದಿಲ್ಲ ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.

ಉಳಿದಂತೆ ಮಾನಸ ಸರೋವರ ಭಕ್ತರಿಗೆ ನೆರವು ನೀಡಲು 2024-25ನೇ ಸಾಲಿನಲ್ಲಿ 3 ಕೋಟಿ ರೂ., ಚಾರ್ ಧಾಮ್ ಯಾತ್ರೆಗೆ 7 ಕೋಟಿ ರೂ., ಭಾರತ್ ಗೌರವ್ ಯೋಜನೆಯಡಿ ಪ್ರಸಿದ್ಧ ಸ್ಥಳಗಳಿಗೆ ರೈಲು ಮೂಲಕ ಪ್ರವಾಸಕ್ಕೆ 13.31 ಕೋಟಿ ರೂ., ಕಾಶಿ ಯಾತ್ರಾರ್ಥಿಗಳಿಗೆ 15 ಕೋಟಿ ರೂ., ಸೇರಿ ಒಟ್ಟಾರೆ 38.31 ಕೋಟಿ ರೂ., ಬೇಕಾಗಬಹುದು ಎಂದು ಇಲಾಖೆಯು ಅಂದಾಜಿಸಿದೆ.

ಆರಾಧನಾ ಯೋಜನೆಗೆ 22.40 ಕೋಟಿ ರೂ., ಪರಿಶಿಷ್ಟ ಜಾತಿ ಉಪಯೋಜನೆಗೆ 22.40 ಕೋಟಿ ರೂ., ಗಿರಿಜನ ಉಪ ಯೋಜನೆಗೆ 22.40 ಕೋಟಿ ರೂ., ಯಡಿಯೂರು ಅಭಿವೃದ್ಧಿಗೆ 20 ಲಕ್ಷ ರೂ., ಧಾರ್ಮಿಕ ಸ್ಥಳಗಳಲ್ಲಿ ಮೂಲಭೂತ ಹಾಗೂ ವಸತಿ ಸೌಕರ್ಯಗಳಿಗೆ 100 ಕೋಟಿ ರೂ., ರಾಜ್ಯದ ವಿವಿಧ ಮಠಗಳಿಗೆ 210 ಕೋಟಿ ರೂ., ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಗೆ 20 ಕೋಟಿ ರೂ., ಸಹಾಯನುದಾನಕ್ಕೆ 250 ಕೋಟಿ ರೂ., ಪ್ರಾಕೃತ ಅಧ್ಯಯನ ಮತ್ತು ಸಂಶೋಧನೆ ಸಂಸ್ಥೆಗೆ 1.05 ಕೋಟಿ ರೂ., ನ್ಯಾಸ ಮತ್ತು ಉಂಬಳಿಗಳ ಮೇಲಿನ ಬಡ್ಡಿ 70.20 ಲಕ್ಷ ರೂ., ನಗದು ಧನ ಸಹಾಯ/ಪರಿಹಾರಕ್ಕೆ 81.75 ಲಕ್ಷ ರೂ., ಕರ್ನಾಟಕ ರಾಜ್ಯ ಛತ್ರ ತಿರುಮಲ, ತಿರುಪತಿ ನಿರ್ವಹಣೆಗೆ 2 ಕೋಟಿ ರೂ. ಸೇರಿ ಒಟ್ಟಾರೆ 690.28 ಕೋಟಿ ರೂ. ಅಂದಾಜಿಸಿರುವುದು ಗೊತ್ತಾಗಿದೆ.

ಹೊಸ ಯೋಜನೆಗಳ ಪಟ್ಟಿಯಲ್ಲಿ ಇಲಾಖೆಯಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಅಭಿವೃದ್ಧಿ ಮತ್ತು ನಿಯೋಜನೆ ಕುರಿತು ಪ್ರಸ್ತಾವಿಸಿದೆ. ಇದಕ್ಕಾಗಿ 5.95 ಕೋಟಿ ರೂ. ಅಂದಾಜಿಸಿದೆ. ದೇವಾಲಯಗಳು ಮತ್ತು ಅವುಗಳ ಸಂಬಂಧಿತ ಸರಕಾರಿ ಯೋಜನೆ, ಕಾರ್ಯಕ್ರಮಗಳ ಕುರಿತ ಸಂಭಾವ್ಯ ಮಾಹಿತಿ ಪ್ರಸಾರ ಇದರ ಉದ್ದೇಶವಾಗಿದೆ ಎಂದು ಇಲಾಖೆ ವಿವರಿಸಿದೆ.

ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಬಾಕಿ ಉಳಿಕೆ ಮೊತ್ತದ ಹಂಚಿಕೆಗೆ 275.14. ಕೋಟಿ ರೂ. ಬೇಕು ಎಂದು ಹೆಚ್ಚುವರಿ ಬೇಡಿಕೆ ಪಟ್ಟಿಯಲ್ಲಿ ಸೇರಿಸಿದೆ. ಮಠಗಳು ಮತ್ತು ದೇವಾಲಯಗಳಿಗೆ ಅನುದಾನ ಹಂಚಿಕೆ ಮಾಡಲಾಗುತ್ತಿದೆಯಾದರೂ ಹೆಚ್ಚಿನ ಅನುದಾನ ಬೇಡಿಕೆ ಪ್ರಸ್ತಾವ ಸ್ವೀಕೃತವಾಗುತ್ತಿರುವ ಕಾರಣ ಹೆಚ್ಚುವರಿ ಅನುದಾನ ಒದಗಿಸಬೇಕೆಂದು ಇಲಾಖೆ ಕೋರಿರುವುದು ತಿಳಿದು ಬಂದಿದೆ.

ಯಾವುದೇ ಆದಾಯವಿಲ್ಲದ ಸಿ ವರ್ಗದ ಒಟ್ಟು 121 ಮುಜರಾಯಿ ದೇವಸ್ಥಾನಗಳ ಮಿತಿಗೊಳಪಟ್ಟು ಸಮಾನವಾಗಿ 15,000 ರೂ. ಸಹಾಯ ಅನುದಾನ ನೀಡುವ ಯೋಜನೆಗೆ 2024-25ನೇ ಸಾಲಿಗೆ 18.15 ಲಕ್ಷ ರೂ. ಬೇಕಿದೆ. ಹಾಗೆಯೇ ರಾಜ್ಯಾದ್ಯಂತ ಒಟ್ಟಾರೆ 545 ಸಂಸ್ಥೆಗಳಿವೆ. ಪ್ರಸ್ತುತ 121 ಮುಜರಾಯಿ ಸಂಸ್ಥೆಗಳನ್ನು ಹೊರತುಪಡಿಸಿ ಉಳಿದ 424 ಸಂಸ್ಥೆಗಳಿಗೆ 15,000 ರೂ.ನಂತೆ 63.60 ಲಕ್ಷ ರೂ. ಅಗತ್ಯವಿದೆ. ಒಟ್ಟಾರೆ 81.75 ಲಕ್ಷ ರೂ. ಹೆಚ್ಚುವರಿ ಅನುದಾನ ಬೇಕಿದೆ ಎಂದು ಇಲಾಖೆಯು ಪ್ರಸ್ತಾವಿಸಿರುವುದು ಗೊತ್ತಾಗಿದೆ.

ಇನಾಂ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 26,000 ಸಂಸ್ಥೆಗಳಿಗೆ ತಸ್ತೀಕ್ ಅನುದಾನ ನೀಡಲು 156.91 ಕೋಟಿ ರೂ. ಅನುದಾನ ಬೇಕಿದೆ. ಹಿಂದಿನ ಸಾಲಿನಲ್ಲಿ ಕೋವಿಡ್ ಪರಿಹಾರ ಧನ ಪ್ಯಾಕೇಜ್ ಮೊತ್ತಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ 5 ಜಿಲ್ಲೆಗಳಿಗೆ ಬಾಕಿ ಪಾವತಿಗಾಗಿ 5.61 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಹೇಳಿದೆ. ಇನಾಂಯೇತರ ಜಮೀನುಗಳಿಗೆ ಪರಿಹಾರ ಧನವಾಗಿ ಒಟ್ಟು 3,749 ಸಂಸ್ಥೆಗಳಿಗೆ ವರ್ಷಾಸನ ಅನುದಾನಕ್ಕಾಗಿ 22.67 ಕೋಟಿ ರೂ. ಬೇಕಿದೆ. ಹಿಂದಿನ ಸಾಲಿನಲ್ಲಿ ಈ ಸಂಬಂಧ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಬಾಕಿ ಪಾವತಿಗಾಗಿ 13.79 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಪ್ರಸ್ತಾವಿಸಿದೆ.

ಅಯೋಧ್ಯೆಯ ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಮತ ಯಾಚಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿಯೇ ರಾಜ್ಯ ಕಾಂಗ್ರೆಸ್ ಸರಕಾರ ಸಹ ರಾಮಮಂದಿರಗಳ ಜೀರ್ಣೋದ್ದಾರಕ್ಕೆ ೧೦೦ ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಲಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಬಿರುಸುಗೊಳಿಸಲಿದೆ.

ಹಿಂದಿನ ಬಿಜೆಪಿ ಸರಕಾರ ದೇವಾಲಯಗಳು ಮತ್ತು ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಲೆಕ್ಕ ಶೀರ್ಷಿಕೆ ಇರಲಿಲ್ಲ. ಹೀಗಾಗಿ ಯಾವುದೇ ಅನುದಾನ ಬಿಡುಗಡೆಯಾಗದಿರುವ ದೇವಾಲಯಗಳು, ಸಂಸ್ಥೆಗಳಿಗೆ 140.45 ಕೋಟಿ ರೂ. ಹೆಚ್ಚುವರಿಯಾಗಿ ಬೇಕೆಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News