ಕುಂದಾಪುರದಲ್ಲಿ ‘ಕಾರ್ಟೂನು ಹಬ್ಬ’ದ ಮೋಡಿ!

Update: 2023-12-11 07:26 GMT

ಕುಂದಾಪುರ: ಕುಂದಾಪುರದ ಜನತೆಗೆ ಊರಲ್ಲಿ ಎರಡೆರಡು ಹಬ್ಬದ ಸಂಭ್ರಮ. ಒಂದೆಡೆ ಕುಂದೇಶ್ವರ ದೀಪೋತ್ಸವದ ಗೌಜಿಯಾದರೆ ಮತ್ತೊಂದೆಡೆ ‘ಕಾರ್ಟೂನು ಹಬ್ಬ’. ಕರ್ನಾಟಕದ ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ಸತೀಶ್ ಆಚಾರ್ಯ ಕಳೆದ 10 ವರ್ಷಗಳಿಂದ ಆಯೋಜಿಸುತ್ತಿರುವ ‘ಕಾರ್ಟೂನು ಹಬ್ಬ’ವು ಡಿ.9ರಿಂದ ಡಿ.12ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ (ಬೋರ್ಡ್ ಹೈಸ್ಕೂಲ್ ಆವರಣ) ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಜನರನ್ನು ಬಹುವಾಗಿ ಸೆಳೆಯುತ್ತಿದೆ.

ಕಾರ್ಯಕ್ರಮದ ವಿಶೇಷತೆ: ನಾಲ್ಕು ದಿನಗಳ ಈ ಕಾರ್ಯಕ್ರಮವು ವೈವಿಧ್ಯಮಯವಾಗಿದೆ. ಉದ್ಘಾಟನೆಯ ದಿನದಂದು ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ನಡೆದ ಕಾರ್ಟೂನ್ ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ರವಿವಾರ ಬೆಳಗ್ಗೆ ಖ್ಯಾತ ವ್ಯಂಗ್ಯ ಚಿತ್ರಕಾರರಿಂದ ಲೈವ್ ಎಡಿಟೋರಿಯಲ್ ಕಾರ್ಟೂನ್ ರಚನೆ ಹಾಗೂ ಮಾತುಕತೆ ನಡೆದಿದ್ದು, ಸೌತ್ ಫಸ್ಟ್ ಕಾರ್ಯಕಾರಿಣಿ ಸಂಪಾದಕಿ ಅನುಷಾ ರವಿ ಸೂದ್ ವಿಶೇಷ ಅತಿಥಿ, ಸೂತ್ರಧಾರೆಯಾಗಿದ್ದರು. ಸಂಜೆ ವಿದ್ಯಾರ್ಥಿಗಳ ಕಾರ್ಟೂನ್ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಉಳಿದಂತೆ ಎರಡು ದಿನಗಳ ಕಾಲ ಚಿತ್ರ ಬಿಡಿಸುವುದಕ್ಕೆ ಓಪನ್ ಕ್ಯಾನ್ವಾಸ್, ವ್ಯಂಗ್ಯಚಿತ್ರ ಪ್ರದರ್ಶನ, ಜೊತೆಗೆ ಕ್ಯಾರಿಕೇಚರ್ ಬಿಡಿಸಿ, ಡೈಲಾಗ್ ಬರೆದು ನಗದು ಬಹುಮಾನ ಗೆಲ್ಲುವ ಅವಕಾಶವಿದೆ. ಸಾಮಾಜಿಕ ಸಂದೇಶಗಳ ಸೆಲ್ಫಿ ಪಾಯಿಂಟ್ಗಳು, ಮುಕ್ತ ಕಾರ್ಟೂನ್ ಕಾರ್ಯಾಗಾರ ಮತ್ತು ಕಾರ್ಟೂನಿಸ್ಟರರ ಜೊತೆ ಮಾತುಕತೆಯಿರಲಿದೆ. ಜೊತೆಗೆ ಚಿತ್ರನಿಧಿ - ದಾನಿಗಳ ಕ್ಯಾರಿಕೇಚರ್ ಬಿಡಿಸಿ ಚಾರಿಟಿಗಾಗಿ ನಿಧಿ ಸಂಗ್ರಹ ನಡೆಯಲಿದೆ. ಈ ವೇಳೆ ಕಾರ್ಟೂನ್ ಪುಸ್ತಕಗಳನ್ನು ಮಾರಾಟ ಸಹ ಮಾಡಲಾಗುತ್ತದೆ.

10 ವರ್ಷಗಳ ಪಯಣ

ಯುವ ಸಮುದಾಯದಲ್ಲಿ ನ್ಯೂಸ್ ಹಾಗೂ ಕಾರ್ಟೂನ್ ಬಗೆಗಿನ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಕಂಡುಕೊಂಡಿದ್ದು ‘ಕಾರ್ಟೂನು ಹಬ್ಬ’ದ ಪರಿಕಲ್ಪನೆ. 2014ರಲ್ಲಿ ಪ್ರಾರಂಭಗೊಂಡ ಈ ಹಬ್ಬ ಸತತ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸತೀಶ್ ಆಚಾರ್ಯರಿಗೆ ಮನೆಯವರು, ಸಮಾನ ಮನಸ್ಕ ಒಂದಷ್ಟು ಮಂದಿ ಕಾರ್ಟೂನಿಸ್ಟರು, ಸ್ನೇಹಿತರು ಸಾಥ್ ನೀಡುತ್ತಿದ್ದಾರೆ.

ಪ್ರತಿವರ್ಷ ಕುಂದೇಶ್ವರ ದೀಪೋತ್ಸವ ಸಂದರ್ಭದಲ್ಲಿ ಆಯೋಜನೆಗೊಳ್ಳುವ ಕಾರ್ಟೂನು ಹಬ್ಬ ಹಲವರ ಫೇವರೇಟ್ ಕಾರ್ಯಕ್ರಮ. ಕಾರ್ಟೂನು ಹಬ್ಬಕ್ಕೆ ವಿವಿಧೆಡೆಗಳಿಂದ ಕಾರ್ಟೂನು ಆಸಕ್ತರು, ಸಾರ್ವಜನಿಕರು ಆಗಮಿಸುತ್ತಾರೆ.

‘ಸಾಹಿತ್ಯ ಹಬ್ಬಗಳಾಗುತ್ತವೆ. ಸಂಗೀತ, ನಾಟಕ ಮತ್ತಿತರ ಕಲಾ ಪ್ರಕಾರಗಳ ಹಬ್ಬಗಳೂ ನಡೆಯುವುದು ಹೊಸದಲ್ಲ. ಕಾರ್ಟೂನು ಹಬ್ಬ ಮಾಡಬಹುದೆಂಬುದನ್ನು ತೋರಿಸಿದವರು ಸತೀಶ್ ಆಚಾರ್ಯ. ಕಾರ್ಟೂನನ್ನು ನೋಡುವ ಬಗೆ, ಮೆಚ್ಚುವ ಗುಣಗಳು ಕೂಡಾ ಕಾರ್ಟೂನು ರಚಿಸುವ ಕಲೆಯಂತೆ ಕಲಿಯಬೇಕಾದ ಗುಣಗಳು. ಕಳೆದ ಹತ್ತು ವರ್ಷಗಳಲ್ಲಿ ಕಾರ್ಟೂನು ಹಬ್ಬ ಸಾಧಿಸಿದ್ದು ಬಹಳ. ದೇಶದ ಹೆಸರಾಂತ ಕಾರ್ಟೂನಿಸ್ಟರು ಇಲ್ಲಿ ಬಂದು ಮಾತನಾಡಿ, ಅನುಭವಗಳನ್ನು ಹಂಚಿಕೊಂಡಿದ್ದಾರೆ, ಕಾರ್ಟೂನುಗಳನ್ನು ಸ್ಥಳದಲ್ಲೇ ರಚಿಸಿ ಸಾವಿರಾರು ಯುವಕ- ಯುವತಿಯರಿಗೆ ಕಾರ್ಟೂನು ರಚಿಸಲು ಸ್ಫೂರ್ತಿಯಾಗಿದ್ದಾರೆ. ವಿಡಂಬನೆ, ಹಾಸ್ಯ, ಮೊನಚು ಗೆರೆಗಳ ಮೂಲಕ ಜಗತ್ತನ್ನು ಗ್ರಹಿಸುವ, ಜನಾಭಿಪ್ರಾಯವನ್ನು ರೂಪಿಸುವ, ಅಧಿಕಾರವನ್ನು ಪ್ರಶ್ನಿಸುವ ಕಾರ್ಟೂನುಗಳು ಪ್ರತಿದಿನವನ್ನೂ ಪ್ರಜಾಪ್ರಭುತ್ವದ ಹಬ್ಬವನ್ನಾಗಿಸುತ್ತವೆ. ಕಾರ್ಟೂನು ಹಬ್ಬ ಅದನ್ನೇ ಸಂಭ್ರಮಿಸುತ್ತಾ ಬಂದಿದೆ’.

| ಉದಯ ಗಾಂವ್ಕಾರ, ಟೀಚರ್ ಪತ್ರಿಕೆ ಸಂಪಾದಕರು



ಸಮಾಜದ ಆಗುಹೋಗುಗಳನ್ನು, ತಪ್ಪು-ಒಪ್ಪುಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ವ್ಯಂಗ್ಯಚಿತ್ರಕಲೆ ವಿಶಿಷ್ಟ ಮಾಧ್ಯಮ. ಮಕ್ಕಳಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಕಲೆಯ ಬಗೆಗಿನ ಆಸಕ್ತಿ ಹೆಚ್ಚಿಸುವುದು ಮತ್ತು ಚಿಂತನೆ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ೧೦-೧೫ ವರ್ಷಗಳಿಂದ ಯುವ ಕಾರ್ಟೂನಿಸ್ಟರು ಸೃಷ್ಟಿಯಾಗುತ್ತಿಲ್ಲ. ಅವರೆಲ್ಲರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕಾರ್ಟೂನು ಹಬ್ಬ ಆಯೋಜಿಸಿ ಅದರಡಿ ವಿವಿಧ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಿಧನರಾದ ಪತ್ರಕರ್ತ ಡಾ.ಶೇಖರ್ ಅಜೆಕಾರ್ರ ಕುಟುಂಬಕ್ಕೆ ಕ್ಯಾರಿಕೇಚರ್ ಮೂಲಕ ನಿಧಿ ಸಂಗ್ರಹ ಮಾಡಿಕೊಡುವುದು ಈ ಬಾರಿ ಕಾರ್ಟೂನು ಹಬ್ಬದ ಸದುದ್ದೇಶ. ಒಂದಷ್ಟು ಸವಾಲುಗಳಿದ್ದರೂ ಇಚ್ಛಾಶಕ್ತಿಯೊಂದಿಗೆ ಕಳೆದ ೧೦ ವರ್ಷಗಳಿಂದ ಈ ‘ಹಬ್ಬ’ ಮಾಡುತ್ತಿದ್ದೇವೆ.

| ಸತೀಶ್ ಆಚಾರ್ಯ, ವೃತ್ತಿಪರ ವ್ಯಂಗ್ಯ ಚಿತ್ರಕಾರ- ಕಾರ್ಟೂನು ಹಬ್ಬದ ಸಂಘಟಕ




ಇದು ಕಾರ್ಟೂನಿಸ್ಟರ ಕಾರ್ಯಕ್ರಮ

ವ್ಯಂಗ್ಯಚಿತ್ರಗಳು ಹಾಸ್ಯದ ಮೂಲಕ ಹಲವು ಸಂದೇಶ ನೀಡುವ ಜೊತೆಗೆ ಪಾಠಗಳನ್ನು ಕಲಿಸುತ್ತವೆ. ರಾಜಕೀಯ ಪ್ರಜ್ಞೆಯನ್ನು ವಿಸ್ತರಿಸುತ್ತವೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ವ್ಯಂಗ್ಯ ಚಿತ್ರ ಕಲಾವಿದರನ್ನು ಬೆಸೆಯುವುದರ ಜೊತೆಗೆ ಮಕ್ಕಳಲ್ಲಿ, ಯುವ ಜನಾಂಗದಲ್ಲಿ ಕಾರ್ಟೂನ್ ಪ್ರಜ್ಞೆ ಹೆಚ್ಚಿಸುವ ಪ್ರಯತ್ನ ಸತೀಶ್ ಆಚಾರ್ಯ ಅವರದ್ದು.

ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿ, ಕೇಶವ ಸಸಿಹಿತ್ಲು, ರಾಮಕೃಷ್ಣ ಹೇರ್ಳೆ, ಚಂದ್ರ ಗಂಗೊಳ್ಳಿ, ಚಂದ್ರಶೇಖರ ಶೆಟ್ಟಿ, ರಕ್ಷತ್ ಸಸಿಹಿತ್ಲು, ಅನನ್ಯಾ ಶೆಟ್ಟಿ, ಕಲೈಕಾರ್, ಸುಬ್ರಹ್ಮಣ್ಯರ ವೈವಿಧ್ಯಮಯ ಕಾರ್ಟೂನುಗಳು ಇಲ್ಲಿ ಪ್ರದರ್ಶನವಾಗುತ್ತಿದೆ. ಸತೀಶ್ ಆಚಾರ್ಯರು ರಚಿಸಿದ ಸೈಬರ್ ಕ್ರೈಂ, ಸಾಮಾಜಿಕ ಜಾಲತಾಣಗಳ ಮೋಸದಿಂದ ದೂರವಿರಿ ಎಂಬ ಶಿರ್ಷಿಕೆಯ ಒಂದಷ್ಟು ಕಾರ್ಟೂನುಗಳು ಪ್ರಸಕ್ತ ಕಾಲಘಟ್ಟಕ್ಕೆ ಹತ್ತಿರವಾಗಿವೆ. ವಿದ್ಯಾರ್ಥಿಗಳು ರಚಿಸಿದ ವಿರಾಟ್ ಕೊಹ್ಲಿಯ ವಿವಿಧ ಕಾರ್ಟೂನು ನೋಡುಗರ ಗಮನ ಸೆಳೆಯುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಯೋಗೀಶ್ ಕುಂಭಾಶಿ

contributor

Similar News