ಲೋಕಾಯುಕ್ತಕ್ಕೆ ವರ್ಗಾವಣೆ: ಕರ್ತವ್ಯಕ್ಕೆ ಹಾಜರಾಗದ 15 ಇನ್‌ಸ್ಪೆಕ್ಟರ್‌ಗಳು

Update: 2023-12-15 03:16 GMT

ಬೆಂಗಳೂರು, ಡಿ.14: ಲೋಕಾಯುಕ್ತ ಸಂಸ್ಥೆಯಲ್ಲಿನ ಪೊಲೀಸ್ ವಿಭಾಗಕ್ಕೆ ಬಲ ನೀಡಲು  ಗಳನ್ನು ವರ್ಗಾಯಿಸಿದ್ದರೂ 15 ಇನ್‌ಸ್ಪೆಕ್ಟರ್‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವುದು ಇದೀಗ ಬಹಿರಂಗವಾಗಿದೆ.

ಕಳೆದ ಆರು ವರ್ಷಗಳಿಂದ ‘ಬಲಹೀನ’ವಾಗಿದ್ದ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹೈಕೋರ್ಟ್ ತೀರ್ಪಿನಿಂದಾಗಿ ಅಧಿಕಾರ ಮರು ಸ್ಥಾಪನೆಯಾದರೂ ಇನ್‌ಸ್ಪೆಕ್ಟರ್‌ಗಳು ಲೋಕಾಯುಕ್ತದ ಸೇವೆಯಿಂದ ದೂರ ಉಳಿಯುತ್ತಿದ್ದಾರೆ.

ಆರೋಪಿಗಳ ವಿರುದ್ಧ ‘ಎಫ್‌ಐಆರ್’ ದಾಖಲಿಸುವ ಅಧಿಕಾರ ಹೊಂದಿದ್ದರೂ ಇನ್‌ಸ್ಪೆಕ್ಟರ್‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಹಿಂದೇಟು ಹೊಡೆಯುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದರ ಬೆನ್ನಲ್ಲೇ ಲೋಕಾಯುಕ್ತ ಸಂಸ್ಥೆಯಲ್ಲಿ ನೂರಾರು ಹುದ್ದೆಗಳು ಖಾಲಿ ಉಳಿದಿರುವ ವಿಚಾರವೂ ಬೆಳಕಿಗೆ ಬಂದಿದೆ. ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾವಣೆಯಾಗಿರುವ ಇನ್‌ಸ್ಪೆಕ್ಟರ್‌ಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಕಾರಣ ಚಾರ್ಜ್‌ಶೀಟ್ ಸೇರಿದಂತೆ ಮತ್ತಿತರ ಕಾರ್ಯಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಗೊತ್ತಾಗಿದೆ.

ವರ್ಗಾಯಿಸಿರುವ ಸ್ಥಳಕ್ಕೆ ತಕ್ಷಣವೇ ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಮಾನತು, ಇಲಾಖೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಡಿಜಿಪಿ ನೋಟಿಸ್ ಜಾರಿಗೊಳಿಸಿದ್ದರು. ಆದರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದು ಸರಕಾರಕ್ಕೇ ಸವಾಲು ಎಸೆದಂತಾಗಿದೆ.

ಲೋಕಾಯುಕ್ತ ಸಂಸ್ಥೆಗೆ ಎಫ್‌ಐಆರ್ ದಾಖಲಿಸುವ ಅಧಿಕಾರ ಮರಳಿ ಬಂದಿದ್ದರಿಂದಾಗಿ ದೂರುಗಳ ಸಂಖ್ಯೆಯೂ ಹೆಚ್ಚಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗೆ ಕಾರ್ಯಭಾರ ಹೆಚ್ಚಾಗಿದೆ. ಹೀಗಾಗಿ ಪರಿಣಾಮಕಾರಿ ಹಾಗೂ ತ್ವರಿತಗತಿಯ ತನಿಖೆಗೆ ಸಿಬ್ಬಂದಿ ಕೊರತೆಯನ್ನು ನೀಗಿಸಲು ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾಯಿಸಿತ್ತು.

ಸರಕಾರಿ ಅಧಿಕಾರಿಗಳು ನೂರಾರು ಕೋಟಿ ರೂ. ಮೊತ್ತದಷ್ಟು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ವಿಭಾಗವು ಈಚಿನ ದಿನಗಳಲ್ಲಿ ಬೆನ್ನು ಹತ್ತಿದೆ. ಆದರೆ ಇನ್‌ಸ್ಪೆಕ್ಟರ್‌ಗಳ ಹುದ್ದೆ ಖಾಲಿ ಇರುವ ಕಾರಣ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ಬಹುತೇಕ ಅರ್ಧದಷ್ಟು ಹುದ್ದೆಗಳು ಖಾಲಿ ಇರುವುದರಿಂದ ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೂ ಹೊಸ ಪ್ರಕರಣಗಳ ತನಿಖೆಗೆ ಅಡ್ಡಿಯಾಗಿದೆ. ಲೋಕಾಯುಕ್ತ ಪೊಲೀಸ್, ಆಡಳಿತ, ನ್ಯಾಯಾಂಗ, ತಾಂತ್ರಿಕ, ಕಾನೂನು ವಿಭಾಗ ‘ಡಿ’ ದರ್ಜೆ ಸೇರಿದಂತೆ 1,403 ಹುದ್ದೆಗಳ ಪೈಕಿ 434ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಗೊತ್ತಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇವಾವಧಿಯಲ್ಲಿ ಪ್ರಾಮಾಣಿಕತೆ, ದಕ್ಷವಾಗಿ ಕಾರ್ಯನಿರ್ವಹಿಸುವ ಹಿನ್ನೆಲೆ ಹೊಂದಿರಬೇಕು. ಹೀಗಾಗಿ, ಲೋಕಾಯುಕ್ತ ಸಂಸ್ಥೆಗೆ ಅಧಿಕಾರಿಗಳು/ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮುನ್ನ ಮಾಹಿತಿ ನೀಡಿ ಎಂದು ಸರಕಾರಕ್ಕೆ ತಿಳಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News