ಏಕರೂಪ ನಾಗರಿಕ ಸಂಹಿತೆ: ಇಲಾಖೆಗಳಿಂದ ಅಭಿಪ್ರಾಯ, ಸಲಹೆ, ಟಿಪ್ಪಣಿ ಸಂಗ್ರಹಿಸಲು ಮುಂದಾದ ರಾಜ್ಯ ಸರಕಾರ

Update: 2023-10-19 03:15 GMT

Photo: racolblegal.com

ಬೆಂಗಳೂರು, ಅ.18: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರಕಾರವು ಇದೀಗ ಇಲಾಖೆಗಳಿಂದ ಅಭಿಪ್ರಾಯ, ಸಲಹೆ, ಟಿಪ್ಪಣಿಗಳನ್ನು ಕ್ರೋಢೀಕರಿಸಲು ಮುಂದಾಗಿದೆ.

ಏಕರೂಪ ನಾಗರಿಕ ಸಂಹಿತೆಗೆ ನಮ್ಮ ಸರಕಾರವು ವಿರೋಧ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರ ಬೆನ್ನಲ್ಲೇ ಇದೀಗ ಅಭಿಪ್ರಾಯ, ಸಲಹೆ, ಟಿಪ್ಪಣಿ ಕ್ರೋಢೀಕರಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಅಭಿಪ್ರಾಯ, ಸಲಹೆ, ಟಿಪ್ಪಣಿ ಕ್ರೋಢೀಕರಿಸಲು ಉನ್ನತ ಶಿಕ್ಷಣ ಇಲಾಖೆ ತನ್ನ ಅಧಿಕಾರಿಗಳಿಗೆ ಸೂಚಿಸಿದೆ. ಈ ಸಂಬಂಧ 2023ರ ಅಕ್ಟೋಬರ್ 18ರಂದು ಇಲಾಖೆಯ ಉನ್ನತ ಶಿಕ್ಷಣ ಇಲಾಖೆಯ ನಂದಕುಮಾರ್ ಬಿ ಅವರು ಅನಧಿಕೃತ ಟಿಪ್ಪಣಿ (ಸಂಖ್ಯೆ; ಇಡಿ 83 ವಿವಿಧ 2023) ಹೊರಡಿಸಿದ್ದಾರೆ. ಇದರ ಪ್ರತಿಯು ‘The-file.in’ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲೇನಿದೆ?:

ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಭಾರತದ ಕಾನೂನು ಆಯೋಗವು ರಾಜ್ಯ ಸರಕಾರಗಳಿಂದ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಕೋರಿದೆ. ಏಕರೂಪ ನಾಗರಿಕ ಸಂಹಿತೆ ರಚಿಸುವ ಸಂದರ್ಭದಲ್ಲಿ ಮದುವೆ, ವಿಚ್ಛೇಧನ, ದತ್ತು, ನಿರ್ವಹಣೆ, ಉತ್ತರಾಧಿಕಾರ, ರಕ್ಷಕತ್ವ, ಮೊದಲಾದ ವಿಷಯಗಳಿಗೆ ಸಂಬಂಧಿಸಿ ಕ್ರೋಢೀಕೃತ ಅಭಿಪ್ರಾಯವನ್ನು 22ನೇ ಭಾರತದ ಕಾನೂನು ಆಯೋಗಕ್ಕೆ ಕಳಿಸಬೇಕಾಗಿದೆ. ಅದರಂತೆ ಕರ್ನಾಟಕ ಸರಕಾರ (ಕೆಲಸಗಳು ಹಂಚಿಕೆ) ನಿಯಮಗಳು, 1977ರ ಅನ್ವಯ ಸಂಬಂಧಿಸಿದ ಇಲಾಖೆಗಳ ಅಭಿಪ್ರಾಯವನ್ನು ಒಂದು ವಾರದೊಳಗಾಗಿ ಕಳಿಸಬೇಕೆಂದು ಅನಧಿಕೃತ ಟಿಪ್ಪಣಿಯಲ್ಲಿ ಅಧೀನ ಕಾರ್ಯದರ್ಶಿ ಕೋರಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ:

ಬೆಂಗಳೂರಿನಲ್ಲಿ ರಾಜ್ಯ ವಕೀಲರ ಪರಿಷತ್ ಇತ್ತೀಚೆಗಷ್ಟೇ ಆಯೋಜಿಸಿದ್ದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ಸರಕಾರವು ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದರು.

ಕೇಂದ್ರ ಸರಕಾರ ಐಪಿಸಿ ಸೆಕ್ಷನ್‌ಗಳ ಹೆಸರನ್ನು ಬದಲಾಯಿಸಿದೆ. 1861ರಲ್ಲಿ ಜಾರಿಯಾದ ಕಾನೂನುಗಳನ್ನು ಬದಲಾಯಿಸಲು ಹೊರಟಿದೆ. ಏನು ಮಾಡಲಿದ್ದಾರೆ ಕಾದು ನೋಡೋಣ ಇವರು ಬದಲಾಯಿಸುವ ಮೊದಲು ತಿದ್ದುಪಡಿ ಮಾಡಬೇಕಿತ್ತು ಎಂದು ಹೇಳಿಕೆ ನೀಡಿದ್ದರು.

ವಿಸ್ತೃತ ಚರ್ಚೆ ಅಗತ್ಯ

‘ಸಂವಿಧಾನದ 44 ನೇ ವಿಧಿ ಅನ್ವಯ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಈ ಕುರಿತು ಕಾನೂನು ತಜ್ಞರ ಸಲಹೆಯನ್ನೂ ಕೇಳಿದೆ. ಆದರೆ, ಈ ಕುರಿತು ವಿಸ್ತೃತ ಚರ್ಚೆಯ ಅಗತ್ಯವಿದೆ’ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದರು.

ಅಲ್ಲದೇ ಜುಲೈ 26ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲೂ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಪ್ರತಿನಿಧಿಗಳು ಸಹ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಮುಸ್ಲಿಮರು, ಆದಿವಾಸಿ, ಬುಡಕಟ್ಟು ಹಾಗೂ ಇನ್ನಿತರ ಅಲ್ಪಸಂಖ್ಯಾತರ ಹಕ್ಕುಗಳಿಗೆ, ಕಾನೂನಿಗೆ ಧಕ್ಕೆಯಾಗುವ ಕುರಿತು ಆತಂಕ ವ್ಯಕ್ತಪಡಿಸಿದ್ದರು.

ಹಿಂದಿನ ಕಾನೂನು ಆಯೋಗವು ವೈವಿಧ್ಯತೆ ಇರುವ ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅನುಷ್ಠಾನ ಕಾರ್ಯ ಸಾಧುವಲ್ಲ ಎಂದು ಕೇಂದ್ರ ಸರಕಾರದ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಇದೀಗ ಮತ್ತೆ ಈ ಕುರಿತು ಪರಿಶೀಲಿಸುವಂತೆ ಪ್ರಸಕ್ತ ಕಾನೂನು ಆಯೋಗಕ್ಕೆ ಕೇಂದ್ರ ಸರಕಾರ ತಿಳಿಸಿತ್ತು. ಅದರಂತೆ, ಕಾನೂನು ಆಯೋಗವು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿದೆ. ತಮ್ಮ ಬೋರ್ಡ್ಸ್ ವತಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿ ವಿರೋಧಿಸಿ ಒಂದು ಕೋಟಿಗೂ ಹೆಚ್ಚು ಸಹಿ ಸಂಗ್ರಹ ಮಾಡಿ ಕಾನೂನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.

ಅಲ್ಪಸಂಖ್ಯಾತರ ಹಕ್ಕುಗಳ ದಮನಕ್ಕೆ ತಮ್ಮ ಸರಕಾರ ಎಂದಿಗೂ ಅವಕಾಶ ನೀಡದು. ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ಅಭಿಪ್ರಾಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಜಿ.ಮಹಾಂತೇಶ್

contributor

Similar News