ಮಾಧ್ಯಮದಲ್ಲಿ ಹಿಂದುಳಿದವರು, ದಲಿತರ ಕಳವಳಕಾರಿ ಪ್ರಾತಿನಿಧ್ಯ

Update: 2023-10-16 10:18 GMT
Editor : Thouheed | By : ಆರ್. ಜೀವಿ

ಬಿಜೆಪಿಗೆ ಅಪಥ್ಯವಾಗಿರುವ, ಅದು ಸಾಧ್ಯವಾದಷ್ಟೂ ಬದಿಗೆ ಸರಿಸಲು ಯತ್ನಿಸುತ್ತಲೇ ಬಂದಿರುವ ಸಾಮಾಜಿಕ ನ್ಯಾಯದ ಪ್ರಶ್ನೆ ಈಗ ರಾಷ್ಟ್ರ ರಾಜಕಾರಣದಲ್ಲಿ ಮುಖ್ಯವಾಗತೊಡಗಿದೆ. ವ್ಯವಸ್ಥಿತವಾಗಿ ಬದಿಗೆ ಸರಿಸಲ್ಪಟ್ಟಿದ್ದ ಈ ಮಹತ್ವದ ವಿಷಯ ಈಗ ಬಿಜೆಪಿ ನಿರ್ಲಕ್ಷಿಸಲಾಗದಷ್ಟು ದೊಡ್ಡದಾಗಿ ಬೆಳೆದು ನಿಂತಿದೆ.

ರಾಹುಲ್ ಗಾಂಧಿಯಂಥ ನಾಯಕರು ಈಗ ಜಾತಿ ಗಣತಿಯ ಅಗತ್ಯ ಎಷ್ಟಿದೆ ಎಂದು ಮತ್ತೆ ಮತ್ತೆ ಪ್ರತಿಪಾದಿಸುತ್ತಿರುವುದು ಈ ಹಿನ್ನೆಲೆಯಿಂದಲೇ.

ಸರ್ಕಾರಿ ಉದ್ಯೋಗ ಅಥವಾ ಮತ್ತಿತರ ವಲಯಗಳಲ್ಲಿ ಹಿಂದುಳಿದವರ, ದಲಿತರ ಪ್ರಾತಿನಿಧ್ಯ ಎಷ್ಟಿದೆ ಎಂಬ ಪ್ರಶ್ನೆಗಳು ಎದ್ದಿವೆ. ಪರಿಶೀಲಿಸಿದರೆ ಅವರ ಪ್ರಾತಿನಿಧ್ಯ ಅತ್ಯಲ್ಪ ಎಂಬ ಕಟು ಸತ್ಯವೂ ಬಹಿರಂಗವಾಗುತ್ತಿದೆ. ಮೊನ್ನೆ ರಾಹುಲ್ ಗಾಂಧಿಯವರು ಎತ್ತಿದ ಮತ್ತೊಂದು ಪ್ರಶ್ನೆಯೂ ಇವತ್ತಿನ ಮಡಿಲ ಮೀಡಿಯಾಗಳ ಕಾಲದಲ್ಲಿ ಬಹಳ ಮುಖ್ಯವಾದದ್ದಾಗಿದೆ.

ಮಾಧ್ಯಮಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಪ್ರಾತಿನಿಧ್ಯ ಎಷ್ಟಿದೆ?. ಇದು ರಾಹುಲ್ ಗಾಂಧಿಯವರು ಪತ್ರಿಕಾ ಗೋಷ್ಠಿ ಗೆ ಬಂದ ಪತ್ರಕರ್ತರ ಮುಂದೆ ಇಟ್ಟ ಪ್ರಶ್ನೆಯಾಗಿತ್ತು. ಇಲ್ಲಿ ವಾಸ್ತವ ಏನೆಂದರೆ, ರಾಹುಲ್ ಗಾಂಧಿಯವರ ಪ್ರಶ್ನೆಗೆ ಉತ್ತರ, ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಪ್ರಾತಿನಿಧ್ಯ ಮಾಧ್ಯಮಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಎಂಬುದು.

ಹಾಗಾಗಿ ರಾಹುಲ್ ಗಾಂಧಿ ಯ ಪ್ರಶ್ನೆಗೆ ಅಲ್ಲಿ ಯಾರಿಂದಲೂ ಸೂಕ್ತ ಉತ್ತರ ಸಿಗಲೇ ಇಲ್ಲ. ಕೊಡಲು ಅವರ ಬಳಿ ಉತ್ತರವೂ ಇಲ್ಲ. ಎಂದಿನಂತೆ ರಾಹುಲ್ ಗಾಂಧಿ ಯ ಈ ಪ್ರಮುಖ ವಿಷಯದ ಬಗ್ಗೆ ಯಾವುದೇ ಮಡಿಲ ಮಾಧ್ಯಮಗಳು ಚರ್ಚಿಸುತ್ತಲೆ ಇಲ್ಲ. ಕಳೆದ 10 ವರ್ಷಗಳಲ್ಲಿ, ಮಾಧ್ಯಮಗಳಲ್ಲಿ ಮೇಲ್ಜಾತಿ ಪ್ರಭಾವದ ಬಗ್ಗೆ ಅನೇಕ ಸಮೀಕ್ಷೆಗಳು ಮತ್ತು ಪ್ರಶ್ನೆಗಳು ಎದ್ದಿವೆ. ಮಾಧ್ಯಮಗಳು, ಅದರಲ್ಲಿಯೂ ಮಡಿಲ ಮಾಧ್ಯಮಗಳು ಇದಕ್ಕೆ ಯಾವುದೇ ಉತ್ತರ ನೀಡಿಲ್ಲ.

ಆದರೆ, ದೇಶದ ಪ್ರಮುಖ ರಾಜಕೀಯ ನಾಯಕರೊಬ್ಬರು ಮಾಧ್ಯಮದಲ್ಲಿನ ದಲಿತ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಬಗ್ಗೆ ಮಾಧ್ಯಮದ ಎದುರೇ ಪ್ರಶ್ನೆಯಿಟ್ಟಿದ್ದು ಬಹುಶಃ ಇದೇ ಮೊದಲು. ಬಿಜೆಪಿ ಬಗ್ಗೆ ಪ್ರಶ್ನೆಗಳ ಸುರಿಮಳೆಗರೆಯಲು ತಮ್ಮನ್ನು ಸುತ್ತುವರಿದು ಬಕ ಪಕ್ಷಿಗಳಂತೆ ಕಾದು ಕುಳಿತಿದ್ದ ಮಡಿಲ ಮಾಧ್ಯಮದವರನ್ನು ಈ ಒಂದು ಪ್ರಶ್ನೆಯ ಮೂಲಕ ರಾಹುಲ್ ಗಾಂಧಿ ಬಾಯಿ ಮುಚ್ಚಿಸಿದರು.

ತಮ್ಮ ಪ್ರಶ್ನೆ ಬಿಜೆಪಿಯವರಿಗೆ ಮಾತ್ರವಲ್ಲ, ಮಾಧ್ಯಮಗಳಿಗೂ ಇದೆ ಎಂದು ಈ ಮೂಲಕ ರಾಹುಲ್ ತೋರಿಸಿದರು. ಆದರೆ, ರಾಹುಲ್ ಪ್ರಶ್ನೆಗೆ ಪತ್ರಕರ್ತರು ಉತ್ತರಿಸಲೇ ಇಲ್ಲ. 2019ರಲ್ಲಿ ಆನ್ ಲೈನ್ ಸುದ್ದಿ ಸಂಸ್ಥೆ ನ್ಯೂಸ್ ಲಾಂಡ್ರಿ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಸಂಸ್ಥೆ ಆಕ್ಸ್ ಫಾಮ್ ನಡೆಸಿದ್ದ ಜಂಟಿ ಸಮೀಕ್ಷೆಯೊಂದರ ಫಲಿತಾಂಶಗಳು ಆಘಾತಕಾರಿಯಾಗಿದ್ದವು. ದೇಶದ ಕೆಲವು ಪ್ರಮುಖ ದಿನಪತ್ರಿಕೆಗಳು, ನಿಯತಕಾಲಿಕಗಳು, ಟಿವಿ ನ್ಯೂಸ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ, ಪ್ರಧಾನ ಸಂಪಾದಕ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ ಮುಂತಾದ ಪ್ರಮುಖ ಹುದ್ದೆಗಳಲ್ಲಿ ಯಾರಿದ್ದಾರೆ ಎಂಬುದನ್ನು ಅರಿಯುವುದು ಸಮೀಕ್ಷೆಯ ಗುರಿಯಾಗಿತ್ತು.

ವಿವಿಧ ಸಂಸ್ಥೆಗಳಲ್ಲಿನ ಇಂಥ ಹುದ್ದೆಗಳನ್ನು ಅಲಂಕರಿಸಿದ್ದ 121 ಪತ್ರಕರ್ತರನ್ನು ಗುರುತಿಸಿ, ಅವರ ಜಾತಿ ಹಿನ್ನೆಲೆ ಜಾಲಾಡಿದಾಗ ಅಲ್ಲಿ ಎಸ್ಸಿ, ಎಸ್ಟಿ ಅಥವಾ ಒಬಿಸಿ ಪಂಗಡಗಳಿಗೆ ಸೇರಿದ ಒಬ್ಬರೂ ಕಾಣಸಿಗಲಿಲ್ಲ. ಒಬ್ಬೇ ಒಬ್ಬರು ಇರಲಿಲ್ಲ.

ಸಮೀಕ್ಷೆಯಿಂದ ಅನಾವರಣಗೊಂಡ ಇನ್ನೂ ಕೆಲವು ಕಟು ಸತ್ಯಗಳು ಹೀಗಿದ್ದವು :

ಪ್ರಮುಖ ಟಿವಿ ಡಿಬೇಟ್‌ಗಳನ್ನು ನಿರ್ವಹಿಸುವ, ಹಿಂದಿ ಚಾನೆಲ್‌ಗಳ 40 ಆ್ಯಂಕರ್‌ಗಳು ಮತ್ತು ಇಂಗ್ಲಿಷ್ ಚಾನೆಲ್‌ಗಳ 47 ಆ್ಯಂಕರ್‌ಗಳ ಪೈಕಿ ಶೇ. 75ರಷ್ಟು ಮಂದಿ ಮೇಲ್ಜಾತಿಯವರಾಗಿದ್ದರು. ಅವರಲ್ಲಿ ದಲಿತ, ಆದಿವಾಸಿ ಅಥವಾ ಒಬಿಸಿ ವರ್ಗಗಳಿಗೆ ಸೇರಿದ ಒಬ್ಬರೂ ಇರಲಿಲ್ಲ.ಹಾಗೆಯೆ, ನ್ಯೂಸ್ ಚಾನೆಲ್‌ಗಳಲ್ಲಿ ನಡೆಯುವ ಶೇ. 70ರಷ್ಟು ಡಿಬೇಟ್‌ಗಳಲ್ಲಿ ಭಾಗವಹಿಸಿದ ಪಾನೆಲಿಸ್ಟ್ಗಳಲ್ಲಿ ಹೆಚ್ಚಿನವರು ಮೇಲ್ಜಾತಿಯವರೇ ಆಗಿದ್ದರು.

ಅಧ್ಯಯನಕ್ಕೆ ಆರಿಸಿಕೊಳ್ಳಲಾದ 12 ನಿಯತಕಾಲಿಕಗಳ ಮುಖಪುಟಗಳಲ್ಲಿ ಪ್ರಕಟವಾದ 972 ಲೇಖನಗಳ ಪೈಕಿ ಕೇವಲ 10 ಲೇಖನಗಳು ಮಾತ್ರ ಜಾತಿ ಸಂಬಂಧಿ ಸಮಸ್ಯೆಗಳ ಕುರಿತಾಗಿದ್ದವು. ಸ್ವಾರಸ್ಯವೆಂದರೆ, ಈ ವಿಚಾರದಲ್ಲೂ ಬರೆಯಲು ಆರಿಸಿಕೊಳ್ಳಲಾದ ಲೇಖಕರಲ್ಲಿ ಹೆಚ್ಚಿನವರು ಮೇಲ್ಜಾತಿಯವರೇ ಆಗಿದ್ದರು. ಇದಕ್ಕಿಂತಲೂ ಗಮ್ಮತ್ತಿನ ಸಂಗತಿಯೇನೆಂದರೆ, ಯಾವ ನ್ಯೂಸ್ ಲಾಂಡ್ರಿಯ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ನಡೆದಿತ್ತೋ, ಅದರ ಸ್ಥಿತಿಯೂ ಜಾತಿಯ ವಿಷಯದಲ್ಲಿ ಸಮಾಧಾನಕಾರವಾಗಿರಲಿಲ್ಲ.

ನ್ಯೂಸ್ ಲಾಂಡ್ರಿ ಇಂಗ್ಲಿಷ್ ಆವೃತ್ತಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಲ್ಲದ ಜನರಲ್ ಕೆಟಗರಿಯವರ ಪ್ರಾಬಲ್ಯ ಶೇ. 49ರಷ್ಟಿದ್ದರೆ, ಆ ಸಂಸ್ಥೆಯ ಹಿಂದಿ ಆವೃತ್ತಿಯಲ್ಲಿ ಅವರ ಪ್ರಾತಿನಿಧ್ಯ ಶೇ. 60ರಷ್ಟಿತ್ತು. ಮಾಧ್ಯಮಗಳಲ್ಲಿ ಒಬಿಸಿಗಳು, ದಲಿತರು, ಆದಿವಾಸಿಗಳು ಮತ್ತು ಇತರರ ಶೇಕಡಾವಾರು ಎಷ್ಟು ಎಂಬ ರಾಹುಲ್ ಪ್ರಶ್ನೆ ಈ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ಪ್ರಶ್ನೆ.

ಭಾರತದ ಭವಿಷ್ಯದ ಆರ್ಥಿಕ ಮತ್ತು ರಾಜಕೀಯ ಮಾದರಿ, ಈ ಪ್ರಶ್ನೆಗಳನ್ನು ಆಧರಿಸಿದೆ. ಈ ಪ್ರಶ್ನೆಯನ್ನು ಮಾಧ್ಯಮಗಳು ಕೇಳಿಕೊಂಡಿಲ್ಲ ಎಂದೇನಲ್ಲ. ಹಲವು ಬಾರಿ ಕೇಳಿಕೊಂಡಿವೆ ಕೂಡ. ಆದರೆ ಬಹಳ ಸಲ ಅದು ಶೋಕಿಯ ಪ್ರಶ್ನೆ ಮಾತ್ರವಾಗಿದೆಯೆ ಹೊರತು ಆಂತರಿಕವಾಗಿ ಮಾಧ್ಯಮಗಳು ತಮ್ಮನ್ನು ತಾವು ತಿದ್ದಿಕೊಂಡಿಲ್ಲ ಎಂಬುದು ಸತ್ಯ. ಕಾರಣ ಏನೆಂಬುದನ್ನು ಮತ್ತೆ ಸ್ಪಷ್ಟಪಡಿಸಬೇಕಿಲ್ಲ. ಮಾಧ್ಯಮಗಳನ್ನು ಆಳುತ್ತಿರುವವರಿಗೆ ಅಂಥ ಕಳವಳವೇನೂ ಇಲ್ಲ ಎಂಬುದು ಒಂದು ಅಂಶವಾದರೆ, ಆಡುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ಎಂಬುದಕ್ಕೆ ಮಾಧ್ಯಮ ಕ್ಷೇತ್ರವೂ ಇವತ್ತಿನ ದಿನಗಳಲ್ಲಿ ಹೊರತಾಗಿಲ್ಲ.

ಆದರೆ, ಈಗ ರಾಹುಲ್ ಗಾಂಧಿಯವರು ಕೇಳುತ್ತಿರುವ ಪ್ರಶ್ನೆಗಳು ಈ ದೇಶದ ಆತ್ಮವನ್ನೇ ಮುಟ್ಟುವಂಥ ಪ್ರಶ್ನೆಗಳಾಗಿವೆ. ಅವರು ಪ್ರತಿಪಾದಿಸುತ್ತಿರುವ ಹಾಗೆ, ಜಾತಿ ಗಣತಿ ನಡೆದಾಗ ಹೊರಬೀಳುವ ಸತ್ಯವಿದೆಯಲ್ಲ, ಅದು ಈ ದೇಶವನ್ನು ನಿಜವಾದ ಅರ್ಥದಲ್ಲಿ ಶುಭ್ರಗೊಳಿಸಬಲ್ಲ ಸತ್ಯವಾಗಲಿದೆ. ಪ್ರಾತಿನಿಧ್ಯವೇ ಇಲ್ಲದೆ, ಲೆಕ್ಕಕ್ಕೇ ಇಲ್ಲದೆ ಮೂಲೆಗುಂಪಾಗಿರುವ ಈ ದೇಶದ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಸಾವಿರ ಸಾವಿರ ಸ್ವರಗಳು ಮೊಳಗಲು ಮುಹೂರ್ತವನ್ನು ಜಾತಿಗಣತಿ ಮುಂದಿಡಬಲ್ಲ ಫಲಿತಾಂಶ ನಿಶ್ಚಯಿಸಬಲ್ಲದು. ಅಂಥದೊಂದು ಭಯವೇ, ಕಡಿಮೆ ಸಂಖ್ಯೆಯಲ್ಲಿದ್ದೂ ಎಲ್ಲಡೆಯೂ ಆಕ್ರಮಿಸಿಕೊಂಡಿರುವ ಆಳುವವರ ಎದೆ ನಡುಗಿಸುತ್ತಿದೆ ಎಂಬುದೂ ಅಷ್ಟೇ ಸತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಆರ್. ಜೀವಿ

contributor

Similar News