ಬಜೆಟ್ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ದ್ವೇಷ ಸಾಧನೆ: ಹರೀಶ್ ಕುಮಾರ್

ಮಂಗಳೂರು, ಮಾ. 22: ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶಯದಂತೆ ಮಂಡಿಸಲಾಗಿರುವ ರಾಜ್ಯ ಸರಕಾರದ ಬಜೆಟನ್ನು ಹಲಾಲ್ ಬಜೆಟ್ ಎಂದು ಟೀಕಿಸುವ ಮೂಲಕ ಬಿಜೆಪಿ ದ್ವೇಷ ಸಾಧನೆಯ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನಾಯಕರು ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಬಜೆಟ್ನ ಶೇ. 1ರಷ್ಟು ಪಾಲನ್ನು ಶೇ. 20ರಷ್ಟಿರುವ ರಾಜ್ಯ ಜನಸಂಖ್ಯೆಯ ಎಲ್ಲಾ ವರ್ಗದ ಅಲ್ಪಸಂಖ್ಯಾತರಿಗೆ ನೀಡಿದರೆ ಅದನ್ನು ಹಲಾಲ್ ಎನ್ನುವ ಮೂಲಕ ತಮ್ಮದೇ ನಾಯಕರ ಮಾತುಗಳಿಗೆ ವಿರುದ್ಧವಾಗಿ ವಿಭಜನಾಕಾರಿ ಮಾತುಗಳನ್ನಾಡುತ್ತಾರೆ ಎಂದರು.
ಬಿಜೆಪಿಯ ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎನ್ನುವುದು ಮಣಿಪುರ, ದೆಹಲಿ, ಉತ್ತರ ಪ್ರದೇಶ, ಬಿಹಾರ ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿ ನಾಯಕರು, ಮಧ್ಯ ಪ್ರದೇಶ, ಮಹಾರಾಷ್ಟ್ರ, ಹರಿಯಾಣದಲ್ಲಿ ಯಾಕೆ ನೀಡಿದ್ದಾರೆ. ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೊಸ ಹೆಸರು ಬೇರೆ. ಕರ್ನಾಟಕದಲ್ಲಿ ಐದೂ ಗ್ಯಾರಂಟಿಗಳು ಜಾರಿಯಾಗಿವೆ. ಅವುಗಳು ನಿಂತಿಲ್ಲ. ನಿಲ್ಲುವದದೂ ಇಲ್ಲ ಎಂದು ಹರೀಶ್ಕುಮಾರ್ ಹೇಳಿದರು.
ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳು ವಿರೋಧಿಸಿವೆ. ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷ್ನಲ್ಲಿಯೂ ಈ ಕಾಯ್ದೆ ವಾಪಾಸ್ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕಾಯ್ದೆಯನ್ನು ವಾಪಾಸು ಪಡೆಯಬೇಕೆಂಬುದು ಕಾಂಗ್ರೆಸ್ ಆಗ್ರಹವಾಗಿದೆ. ಆದರೆ ಎಸ್ಡಿಪಿಐ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಮೂಲಕ ತಾನು ಬಿಜೆಪಿಯ ಬಿ ಟೀಮ್ ಎಂಬುದನ್ನು ಸಾಬೀತುಪಡಿಸುತ್ತಿದೆ. ಅದು ರಾಜ್ಯ ಸರಕಾರ ಜಾರಿಗೆ ತಂದ ಕಾಯ್ದೆಯಲ್ಲ. ಬದಲಿಗೆ ಕೇಂದ್ರ ಸರಕಾರ ತಂದಿದ್ದು ಎಂಬುದು ಎಸ್ಡಿಪಿಐಗೆ ಗೊತ್ತಿಲ್ಲವೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಪ್ರತ್ಯೇಕ ಸಭೆಯ ಮೂಲಕ ರಾಜ್ಯ ಸರಕಾರ ಇಲ್ಲಿ ಪ್ರವಾಸೋದ್ಯಮ ಸೇರಿದಂತೆ ಅಭಿವೃದ್ಧಿಗೆ ಒತ್ತು ನೀಡಿದೆ. ಈ ರೀತಿ ಅಭಿವೃದ್ಧಿಯ ಬಗ್ಗಹೆ ಚರ್ಚೆ ನಡೆಯಬೇಕಾದ ಅಧಿವೇಶನದಲ್ಲಿ ಹನಿಟ್ರ್ಯಾಪ್ ವಿಚಾರದ ಕುರಿತಂತೆ ಚರ್ಚಿಸುವ ಮೂಲಕ ಶಾಸಕರು ತಮ್ಮ ಜವಾಬ್ಧಾರಿಯನ್ನು ಮರೆತಂತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಟೀಕಿಸಿದರು.
ಬಜೆಟ್ನಲ್ಲಿಯೂ ಉತ್ತಮ ಯೋಜನೆಗಳನ್ನು ರಾಜ್ಯ ಸರಕಾರ ನೀಡಿದೆ. ಜಿಲ್ಲೆಗೆ ವೈದ್ಯಕೀಯ ಮೆಡಿಕಲ್ ಕಾಲೇಜಿನ ಕೊಡುಗೆ ನೀಡಿದೆ ಎಂದು ಬಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪದ್ಮರಾಜ್, ಚುನಾವಣಾ ಪೂರ್ವದಲ್ಲಿ ವಿವಿಧ ಸಮಾಜಗಳಿಗೆ ಪೂರಕವಾಗಿ ನಿಗಮಗಳ ಬೇಡಿಕೆಯ ಅರಿವು ಇದೆ. ಸರಕಾರಕ್ಕೆ ಇನ್ನೂ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುವ ಭರವಸೆ ಇದೆ. ಇದೀಗ ಗ್ಯಾರಂಟಿಗಳ ಮೂಲಕ ಬಡ ಕುಟುಂಬವೊಂದಕ್ಕೆ ಮಾಸಿಕ 5 ಸಾವಿರದಿಂದ 7 ಸಾವಿರ ರೂ.ಗಳ ನೆರವು ನೀಡುತ್ತಿದೆ. ಯಾವ ನಿಗಮಗಳ ಮೂಲಕವೂ ಈ ರೀತಿಯ ಸೌಲಭ್ಯ ಒದಗಿಸಲು ಸಾಧ್ಯವಾಗದು ಅಂತಹ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ನೀಡಿದೆ ಎಂದವರು ಹೇಳಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪದ್ಮರಾಜ್, ಸಚಿವರು, ಶಾಸಕರ ಹನಿಟ್ರ್ಯಾಪ್ ವಿಚಾರ ಗಂಭೀರವಾದದ್ದೇ. ಆದರೆ ಈ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ಮುಖ್ಯಮಂತ್ರಿ, ಗೃಹ ಸಚಿವರು ನೀಡಿದ್ದಾರೆ. ದೂರು ನೀಡಿದರೆ ಖಂಡಿತಾ ಕ್ರಮ ಆಗಲಿದೆ. ಆದರೆ ಸದನದಲ್ಲಿ ವೈಯಕ್ತಿಕ ವಿಚಾರಕ್ಕಿಂದ ಜನಪ್ರತಿನಿಧಿಗಳಾಗಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಆದ್ಯತೆ ನೀಡಬೇಕು ಎಂದರು.
ಗೋಷ್ಟಿಯಲ್ಲಿ ಮುಖಂಡರಾದ ಶುಭೋದಯ ಆಳ್ವ, ವಿಕಾಸ್ ಶೆಟ್ಟಿ, ನೀರಜ್ ಪಾಲ್, ಅಭಿಲಾಷ್ ಉಪಸ್ಥಿತರಿದ್ದರು.