ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ: ವಂ. ಮೆಲ್ವಿನ್ ಪಿಂಟೊ

Update: 2023-11-08 17:24 GMT

ಮಂಗಳೂರು, ನ.8: ಕಾರ್ವಾಲ್ ಮನೆತನ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ನೀಡುವ 19 ನೇ ಕಲಾಕಾರ್ ಪುರಸ್ಕಾರ ಪ್ರದಾನ ಕಲಾಂಗಣದಲ್ಲಿ ನೆರವೇರಿತು.

ಸಂಗೀತಗಾರ ಆಪೊಲಿನಾರಿಸ್ ಡಿಸೋಜ ಇವರಿಗೆ ಶಾಲು, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರ ಮತ್ತು 50, 000 ರೂ ನೀಡಿ ಗೌರವಿಸಲಾಯಿತು.

ಸನ್ಮಾನ ನೆರವೇರಿಸಿದ ಸಂತ ಎಲೋಶಿಯಸ್ ಸಂಸ್ಥೆಗಳ ರೆಕ್ಟರ್ ವಂ ಮೆಲ್ವಿನ್ ಪಿಂಟೊ ‘‘ ಅಧ್ಯಾತ್ಮಿಕ ಅನುಭೂತಿ ಯಿಂದ ಮಾತ್ರ ಭಕ್ತಿ ಗೀತೆಗಳನ್ನು ರಚಿಸ ಬಹುದು. ತಮ್ಮ ಭಕ್ತಿಗೀತೆಗಳ ಮುಖಾಂತರ ನಮ್ಮ ಬಾಲ್ಯವನ್ನು ಸ್ಮರಣೀಯ ಗೊಳಿಸಿದ ಆಪೊಲಿನಾರಿಸ್ ಇವರನ್ನು ಸನ್ಮಾನಿಸಲು ಅತೀವ ಹರ್ಷವಾಗುತ್ತಿದೆ. ಕಲಾವಿದರನ್ನು ಗೌರವಿಸುವುದು ಸಮಾಜದ ಆದ್ಯ ಕರ್ತವ್ಯ. ಇದರಿಂದ ಅವರಿಗೆ ಪ್ರೋತ್ಸಾಹ ದೊರೆತು ಅವರು ಕಲೆಗೆ ಆ ಮುಖಾಂತರ ಸಮಾಜಕ್ಕೆ ಹೆಚ್ಚಿನ ದೇಣಿಗೆ ನೀಡುತ್ತಾರೆ ಮತ್ತು ಇತರರಿಗೆ ಪ್ರೇರಣೆ ನೀಡುತ್ತಾರೆ.’’ ಎಂದು ಅಭಿನಂದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಪೊಲಿನಾರಿಸ್ ಇವರು ‘‘ತನ್ನ ಕುಟಂಬದಲ್ಲಿ ಸಂಗೀತ ಪ್ರಕೃತಿದತ್ತವಾಗಿ ಬಂದಿದ್ದು, ಹಿರಿಯರು, ಒಡಹುಟ್ಟಿದವರು ಸಂಗೀತ ಕ್ಷೇತ್ರದಲ್ಲಿ ದುಡಿದವರು. ಆ ಪ್ರೋತ್ಸಾಹ, ಪ್ರೇರಣೆಯಿಂದ ನಾನೂ ಸಾಧನೆಗಳನ್ನು ಮಾಡುವಂತಾಯ್ತು. ಕ್ರೈಸ್ತರ ಧಾರ್ಮಿಕ ಕಾರ್ಯಗಳಲ್ಲಿ ಲ್ಯಾಟಿನ್ ಬದಲು ಕೊಂಕಣಿ ಬಳಸಲಾರಂಭಿಸಿದ ಬಳಿಕ ಕೊಂಕಣಿ ಧಾರ್ಮಿಕ ಗೀತೆಗಳ ಅನುವಾದ ಮಾಡುವ ಅವಕಾಶ ಲಭಿಸಿತು. ಎರಿಕ್ ಒಝೇರಿಯೊ ಅವರೊಡನೆಯೂ ಕೆಲಸ ಮಾಡುವ ಸಂದರ್ಭ ದೊರೆಯಿತು. ಇಂದು ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ, ಹೊಸತನ ಬಂದಿದೆ ಎಂದರೆ ಅದಕ್ಕೆ ಎರಿಕ್ ರವರು ಕಲಾವಿದರಿಗೆ ನೀಡಿದ ಅಪರಿಮಿತ ಪ್ರೋತ್ಸಾಹ ಕಾರಣ’’ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ವಾಲೊ ಮನೆತನದ ಪ್ರತಿನಿಧಿ ಡಾ. ಪ್ರತಾಪ್ ನಾಯ್ಕ್ ಕಾರ್ಯಕ್ರಮಕ್ಕೆ ಪ್ರಸ್ತಾವನೆ ನೀಡಿದರು.

ಇದೇ ಸಂದರ್ಭದಲ್ಲಿ ಅಸ್ಮಿತಾಯ್ ಚಲನಚಿತ್ರದ ಮನಾಂ ಮನಾಂ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಸುಂದರವಾಗಿ ಹಾಡಿದ ಬಾಲೆ ಆಲನಿ ಡಿಸೋಜ ಇವರಿಗೆ ಕಲಾಂಗಣ ಚೇರ್ ಮ್ಯಾನ್ ರೊನಾಲ್ಡ್ ಮೆಂಡೊನ್ಸಾ ನೀಡಿದ ನಗದು ಹಸ್ತಾಂತರಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News