ಬಡತನದ ನಡುವೆಯೂ ಚಿನ್ನದ ಸಾಧನೆ: ಉಪ್ಪಳದ ಜಗದೀಶ್ ಗೆ ಮೂರು ಚಿನ್ನದ ಪದಕ

ಕೊಣಾಜೆ: ಎಳವೆಯಲ್ಲಿಯೇ ನನಗೆ ಶೈಕ್ಷಣಿಕವಾಗಿ ಸಾಧನೆ ಮಾಡಬೇಕೆಂಬ ಕನಸಿತ್ತು. ಆ ಕನಸು ಇಂದು ನನಸಾಗಿದೆ. ಇದಕ್ಕೆ ನನ್ನ ತಂದೆ ತಾಯಿಯೇ ನನಗೆ ಪ್ರೇರಣೆಯಾಗಿದ್ದಾರೆ. ತಂದೆ ತೆಂಗಿನ ಕಾಯಿ ಚಿಪ್ಪು ಸುಳಿಯುವ ಕೆಲಸ ಮಾಡಿದರೆ ತಾಯಿ ಬೀಡಿ ಕಟ್ಟುತ್ತಾರೆ. ಅವರು ಕೂಲಿ ಕೆಲಸ ಮಾಡಿದರೂ ತನ್ನ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಇಲ್ಲದಂತೆ ನೋಡಿದ್ದಾರೆ ಎನ್ನುತ್ತಾರೆ ಕೈಗಾರಿಕಾ ರಸಾಯನಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದ ಜಗದೀಶ್ ಅವರು.
ಕಾಸರಗೋಡು ಉಪ್ಪಳ ನಿವಾಸಿಯಾಗಿರುವ ಯಾದವ ಶೆಟ್ಟಿಗಾರ್ ಹಾಗೂ ಲೀಲಾವತಿ ದಂಪತಿಯ ಪುತ್ರ. ಮೂರು ಜನ ಮಕ್ಕಳಲ್ಲಿ ಇವರು ಕಿರಿಯವನಾಗಿದ್ದಾರೆ.
ಮಂಗಳೂರು ವಿವಿ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಗಳಿಸಿದ ಬಗ್ಗೆ ಸಂತಸವನ್ನು ಹಂಚಿಕೊಂಡ ಅವರು ಮುಂದೆ ನನಗೆ ಪಿಎಚ್ ಡಿ ಮಾಡಬೇಕೆಂಬ ಕನಸು ಇದೆ. ಈಗ ಪ್ರಸ್ತುತ ಬೆಂಗಳೂರಿನ ಯುರೋಪಿನ್ಸ್ ಅಡ್ವಿನಸ್ ಕಂಪೆನಿಯಲ್ಲಿ ಸಂಶೋಧನಾ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು. ಪಿಯುಸಿ ವರೆಗೆ ಕೇರಳದಲ್ಲಿ ಕಲಿತಿದ್ದ ಜಗದೀಶ್ ಪದವಿಯನ್ನ ಕಾರಸ್ಟ್ರೀಟ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪೂರೈಸಿ ಬಳಿಕ ವಿವಿ ಕ್ಯಾಂಪಸ್ ನಲ್ಲಿ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗಕ್ಕೆ ಸೇರಿದ್ದರು.