ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್; ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ

Update: 2025-03-29 17:20 IST
ಉದ್ಯಮಿಗಳಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್; ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ
  • whatsapp icon

ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯವು ತನ್ನ ಘಟಿಕೋತ್ಸವದ ಸಂದರ್ಭ ಮೂವರು ಶ್ರೀಮಂತ ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿರುವುದನ್ನು ಮಂಗಳೂರಿನ ಪ್ರಗತಿಪರ ಚಿಂತಕರು ಬಲವಾಗಿ ಖಂಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ವಿದ್ಯಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ವಿ ವಿ ಕಳೆದ ಒಂದು ದಶಕದ ಹಿಂದಿನವರೆಗೂ ರಾಜ್ಯದ ಶೈಕ್ಷಣಿಕ ಹಾಗೂ ಬೌದ್ದಿಕ ವಲಯದಲ್ಲಿ ಘನತೆಯ ಸ್ಥಾನಮಾನವನ್ನು ಹೊಂದಿತ್ತು. ಹಲವು ಖ್ಯಾತನಾಮರು ಈ ವಿ ವಿಯ ಕುಲಪತಿಗಳಾಗಿ, ವಿವಿಧ ವಿಭಾಗಗಳ ಜವಾಬ್ದಾರಿ ಹೊತ್ತು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಹೆಸರಾಂತ ಪ್ರಾಧ್ಯಾಪಕರು, ಇತಿಹಾಸಕಾರರು ವಿ ವಿ ಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಮಹತ್ವದ ಸಂಶೋಧನೆಗಳು ಮಂಗಳೂರು ವಿ ವಿ ಯಿಂದ ನಡೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಭ್ರಷ್ಟಾಚಾರ, ಕೋಮುವಾದಿ, ಜಾತಿವಾದಿ ಶಕ್ತಿಗಳಿಗೆ ಮನ್ನಣೆ, ಹಣವಂತರ ಮುಂದೆ ತಲೆಬಾಗುವ ಘನತೆಯಿಲ್ಲದ ನಡವಳಿಕೆಯಿಂದ ಹೆಸರು ಕೆಡಿಸಿಕೊಂಡಿದೆ. ಕಳೆದ ಐದಾರು ವರ್ಷಗಳಿಂದ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಕೇವಲ ಶ್ರೀಮಂತಿಕೆಯನ್ನು ಅರ್ಹತೆಯಾಗಿಸಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನಿಸುವ ತೀರಾ ಕೆಟ್ಟದಾದ ಪರಂಪರೆಯನ್ನು ಅಳವಡಿಸಿಕೊಂಡಿದೆ. ಇದು ಕಾಸು ಪಡೆದು ಗೌರವ ಡಾಕ್ಟರೇಟ್ ನೀಡುವ ನಕಲಿ ವಿ ವಿ ಗಳ ಪರಿಪಾಠದ ನಕಲಿನಂತೆ ಜನ ಸಾಮಾನ್ಯರಿಗೆ ಕಂಡರೆ ಅಚ್ಚರಿ ಇಲ್ಲ. ಅದರಲ್ಲೂ, ಕಳೆದ ಎರಡು ವರ್ಷಗಳಿಂದ ಹೆಚ್ಚು ಸಂಪತ್ತು ಹೊಂದಿರುವುದನ್ನೆ ಅರ್ಹತೆಯನ್ನಾಗಿಸಿ ತಲಾ ಮೂರು ಜನ ದೊಡ್ಡ ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡುವ ನಿರ್ಲಜ್ಜ ನಡೆಯನ್ನು ಅನುಸರಿಸುತ್ತಿದೆ. ಈ ರೀತಿ ಗೌರವ ಡಾಕ್ಟರೇಟ್ ಪಡೆದ ಕೆಲವರ ಕುರಿತು ಸಮಾಜದಲ್ಲಿ ಕನಿಷ್ಟ ಒಳ್ಳೆಯ ಅಭಿಪ್ರಾಯಗಳೂ ಇಲ್ಲ ಎಂಬುದು ಗಮನಾರ್ಹ. ಕಳೆದ ವರ್ಷ ಇದೇ ರೀತಿ ಮೂರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರಧಾನಿಸಿದ ಸಂದರ್ಭ ವಿ ವಿ ನಡೆಗೆ ನಾಗರಿಕ ವಲಯದಿಂದ ದೊಡ್ಡ ವಿರೋಧ ವ್ಯಕ್ತವಾಗಿತ್ತು. ಆದರೂ ತಿದ್ದಿಕೊಳ್ಳದ ವಿ ವಿ ಆಡಳಿತ ಈ ಬಾರಿಯೂ ತನ್ನ ಅದೇ ಚಾಳಿಯನ್ನು ಮುಂದುವರಿಸಿದೆ. ಆ ಮೂಲಕ ತನ್ನದು ಅಧಿಕಾರಸ್ಥ ರಾಜಕಾರಣಿಗಳಿಗೆ, ಶ್ರೀಮಂತ ಉದ್ಯಮಿಗಳಿಗೆ ಬಹು ಪರಾಕ್ ಹಾಕುವ ವಿದೂಷಕ ಮನಸ್ಥಿತಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಗೌರವ ಡಾಕ್ಟರೇಟ್ ನೀಡುವುದು ವಿಶ್ವ ವಿದ್ಯಾನಿಲಯದ ಕರ್ತವ್ಯದ ಭಾಗ ಅಲ್ಲ. ಪ್ರತಿ ವರ್ಷ ಗೌರವ ಡಾಕ್ಟರೇಟ್ ನೀಡುವ ಪರಿಪಾಠ ಬೆಳೆಸಿಕೊಳ್ಳುವ ಅಗತ್ಯವೂ ಇಲ್ಲ. ವಿಶೇಷ ಸಾಧಕರಿಗೆ ವಿಶೇಷ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡುವುದಾದರೆ ಅದಕ್ಕೆ ಒಂದು ಅರ್ಥ ಇರುತ್ತದೆ, ಗೌರವವೂ ಇರುತ್ತದೆ. ದೊಡ್ಡ ಉದ್ಯಮಿಗಳು, ಶ್ರೀಮಂತರ ಹೆಸರುಗಳನ್ನು ಪಟ್ಟಿ ಮಾಡಿ ಪ್ರತಿ ವರ್ಷ ಅದರಲ್ಲಿ ಮೂರು ಜನರನ್ನು ಗೌರವ ಪದವಿಗೆ ಆಯ್ಕೆ ಮಾಡುವುದು ವಿ ವಿಯ ಘನತೆ, ಗೌರವಕ್ಕೆ ಮಾತ್ರ ಅಲ್ಲ, ವರ್ಷಗಳ ಕಾಲ ಕ್ಷೇತ್ರ ಕಾರ್ಯ ಮಾಡಿ, ಹಗಲು ರಾತ್ರಿ ಕಷ್ಟ ಪಟ್ಟು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆಯುವ ಸಾಧಕರಿಗೆ ಮಾಡುವ ಅವಮಾನವೂ ಹೌದು. ಮಂಗಳೂರು ವಿ ವಿ ತನ್ನ ಈ ಚಾಳಿಯನ್ನು ಈಗಲಾದರು ಬದಲಾಯಿಸಿಕೊಳ್ಳಬೇಕು, ಸಂಪತ್ತಿನ ಮಾನದಂಡದಲ್ಲಿ ನೀಡಿರುವ ಗೌರವ ಡಾಕ್ಟರೇಟ್ ಪದವಿಗಳನ್ನು ವಾಪಾಸು ಪಡೆಯಬೇಕು ಆ ಮೂಲಕ ವಿ ವಿ ಯ ಗೌರವವನ್ನು ಉಳಿಸಬೇಕು ಎಂದು ಚಿಂತಕರ ವೇದಿಕೆಯ ಮೂಲಕ ನೀಡಿರುವ ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಪ್ರೊ. ನರೇಂದ್ರ ನಾಯಕ್ ( ಮಾಜಿ ಸದಸ್ಯರು (ಚುನಾಯಿತ) ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮಂಗಳೂರು ವಿ ವಿ)

ವಾಸುದೇವ ಉಚ್ಚಿಲ (ವಿಚಾರವಾದಿಗಳು, ಮಂಗಳೂರು)

ಎಂ ದೇವದಾಸ್ (ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ)

ಡಾ. ಕೃಷ್ಣಪ್ಪ ಕೊಂಚಾಡಿ (ಬರಹಗಾರರು, ಮಂಗಳೂರು)

ಶ್ಯಾಮಸುಂದರ ರಾವ್ (ಚಿಂತಕರು)

ಪ್ರಭಾಕರ ಕಾಪಿಕಾಡ್ (ರಂಗ ಕಲಾವಿದರು)

ಕೆ. ಯಾದವ ಶೆಟ್ಟಿ (ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತ ಸಂಘ)

ಎರಿಕ್ ಲೋಬೊ (ವಿಚಾರವಾದಿಗಳು)

ಸಂತೋಷ್ ಬಜಾಲ್ (ಜಿಲ್ಲಾ ಕಾರ್ಯದರ್ಶಿ, ಡಿವೈಎಫ್ಐ ದಕ್ಷಿಣ ಕನ್ನಡ)

ಮನೋಜ್ ವಾಮಂಜೂರು (ಕಾರ್ಯದರ್ಶಿ, ಸಮುದಾಯ ಮಂಗಳೂರು)

ಪ್ರಗತಿಪರ ಚಿಂತಕರ ವೇದಿಕೆ, ಮಂಗಳೂರು

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News