ವಿದ್ಯೆಯೊಂದಿಗೆ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಅಗತ್ಯ: ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ

Update: 2025-03-22 23:38 IST
ವಿದ್ಯೆಯೊಂದಿಗೆ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಅಗತ್ಯ: ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ
  • whatsapp icon

ಪುತ್ತೂರು: ವಿದ್ಯೆ ಇದ್ದರೆ ಮಾತ್ರ ಅದರೊಂದಿಗೆ ವಿನಯ ಹಾಗೂ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆಯೂ ಇರಬೇಕು. ವಿದ್ಯೆ ಕಲಿತು ಜೀವನದಲ್ಲಿ ಉನ್ನತ ಹುದೆಯನ್ನು ಅಲಂಕರಿಸಿದ್ದರೂ ಮಾನವೀಯ ಮೌಲ್ಯಗಳನ್ನು ಎಲ್ಲಿಯೂ ಮರೆಯಬಾರದು. ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ನಮ್ಮಲ್ಲಿರಬೇಕು. ನಮ್ಮೊಂದಿಗೆ ಇತರರನ್ನೂ ಬೆಳೆಸುವ ಒಳ್ಳೆಯ ಗುಣವಿರಬೇಕು. ಸ್ವಾಯತ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೋರ್ವರೂ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ಅಭಿಪ್ರಾಯಪಟ್ಟಿದ್ದಾರೆ.

ಅವರು ಮಂಗಳೂರಿನ ಕ್ಯಾಥೊಲಿಕ್ ಶಿಕ್ಷಣ ಮಂಡಳಿಗೆ ಒಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರಕಾರದ ಅನುಮೋದನೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಶನಿವಾರ ಕಾಲೇಜ್‌ನಲ್ಲಿ ನಡೆದ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾಯತ್ತ ಕಾಲೇಜಿನ ಲಾಂಛನವನ್ನು ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್ ಸೈಟ್‌ಅನ್ನು ಬಿಡುಗಡೆ ಗೊಳಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು.

ಕಾರ್ಯಕ್ರಮವನ್ನು ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಭಿಷಪ್ ಡಾ.ಪೀಟರ್ ಮಚಾದೋ ಉದ್ಘಾಟಿಸಿದರು.

ಸ್ವಾಯತ್ತ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಸೌಲಭ್ಯಗಳಾದ ಬೋರ್ಡ್ ರೂಮ್, ಪರೀಕ್ಷಾಂಗ ವಿಭಾಗ, ಶೈಕ್ಷಣಿಕ ವಿಭಾಗ, ಹಣಕಾಸು ವಿಭಾಗ, ನವೀಕರಿಸಿದ ಫುಡ್ ಕೋರ್ಟ್ ಮತ್ತು ಎಂಸಿಎ ಪ್ರಯೋಗಾಲಯಗಳನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ದೊರೆತ ಸಂದರ್ಭದ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ ‘‘ಫಿಲೋ ಜೆನೆಸಿಸ್’’ ನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಂಗಳೂರು ಸಂಸದ ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕವಿತಾ ಕೆ.ಆರ್., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಡಾ.ಪ್ರವೀಣ್ ಲಿಯೋ ಲಸ್ರಾದೊ, ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ಫಾ.ಆ್ಯಂಟನಿ ಮೈಕೆಲ್ ಶೆರಾ ಮಾತನಾಡಿದರು.

ಈ ಸಂದರ್ಭ ಸ್ವಾಯತ್ತ ಕಾಲೇಜಿಗೆ ನೇಮಕಗೊಂಡ ರಿಜಿಸ್ಟ್ರಾರ್ (ಅಕಾಡೆಮಿಕ್) ಡಾ.ನಾರ್ಬರ್ಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ, ಹಣಕಾಸು ಅಧಿಕಾರಿ ಡಾ.ಎಡ್ವಿನ್ ಎಸ್. ಡಿಸೋಜ, ಶೈಕ್ಷಣಿಕ ಉಪ ಕುಲಸಚಿ ವಿಪಿನ್ ನಾಯಕ್ ಎನ್.ಎಸ್. ಹಾಗೂ ಪರೀಕ್ಷಾಂಗ ಉಪ ಕುಲಸಚಿವರುಗಳಾದ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತು ಅಭಿಷೇಕ್ ಸುವರ್ಣ, ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಗಳಿಸುವ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಭಾನು ಪ್ರಕಾಶ್, ಹಾಗೂ ಅಪೇಕ್ಷಾರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕರಾಗಿದ್ದ ಫಾ.ಜೆರಾಲ್ಡ್ ಡಿಸೋಜ, ಪ್ರಾಂಶುಪಾಲರುಗಳಾಗಿದ್ದ ಫಾ. ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಮತ್ತು ಪ್ರೊ.ಲೊಯೋ ನೊರೊನ್ಹಾರನ್ನು ಗೌರವಿಸಲಾಯಿತು.

ಮಂಗಳೂರು ಧರ್ಮಪ್ರಾಂತದ ಧರ್ಮಗುರು ವಂ.ಮ್ಯಾಕ್ಸಿಮ್ ನೊರೊನ್ಹಾ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ. ಎಂ.ಅಬ್ದುಲ್ ಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಫಾ. ಲಾರೆನ್ಸ್ ಮಸ್ಕರೇನಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಕಾಲೇಜ್‌ನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಮತ್ತು ಉಪನ್ಯಾಸಕಿ ಡಾ.ಮೈತ್ರಿ ಭಟ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News