ಗುರುಗ್ರಾಮ: ಸ್ಮಶಾನದ ಗೋಡೆ ಕುಸಿದು ನಾಲ್ವರು ಮೃತ್ಯು

Update: 2024-04-21 03:58 GMT

Photo: PTI 

ಗುರುಗ್ರಾಮ: ಇಲ್ಲಿನ ಅರ್ಜುನ ನಗರ ಪ್ರದೇಶದಲ್ಲಿ ಸ್ಮಶಾನ ಗೋಡೆ ಕುಸಿದು ಸಂಭವಿಸಿದ ದುರಂತದಲ್ಲಿ ಹನ್ನೊಂದು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಧಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಅರ್ಜುನ್ ನಗರ ಬದಿಯ ಸ್ಮಶಾನ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ಬಾಲಕಿ ಸೇರಿದಂತೆ ನಾಲ್ಕು ಮಂದಿ ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ. ದುರಂತ ಸಂಭವಿಸಿದ ಸುದ್ದಿ ತಿಳಿಯುತ್ತಿದ್ದಂತೆ ಅರ್ಜುನ ನಗರದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿತು.

ದುರಂತವೆಂದರೆ, ಈ ಪ್ರಯತ್ನಗಳ ಹೊರತಾಗಿಯು ಒಂದು ಮಗು ಸೇರಿದಂತೆ ನಾಲ್ಕು ಮಂದಿ ರಕ್ಷಣಾ ಕಾರ್ಯಾಚರಣೆ ನಡುವೆಯೇ ತೀವ್ರ ಗಾಯಗಳಿಂದಾಗಿ ಕೊನೆಯುಸಿರೆಳೆದರು. ಮೃತಪಟ್ಟವರನ್ನು 11 ವರ್ಷದ ತಾನ್ಯಾ, 70 ವರ್ಷದ ದೇವಿ ದಯಾಳ್, 54 ವರ್ಷದ ಮನೋಜ್ ಗಾಬಾ, 52 ವರ್ಷದ ಕೃಷ್ಣ ಕುಮಾರ್ ಎಂದು ಗುರುತಿಸಲಾಗಿದೆ. ದೀಪಾ ಪ್ರಧಾನ್ ಎಂಬ ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ದುರಂತಕ್ಕೆ ಕಾರಣ ತಿಳಿಯಲು ಸೂಕ್ತ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಅಗತ್ಯ ಕಾನೂನಾತ್ಮಕ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News