ಪುತ್ರಿಯ ಕೊಲೆಗೈದ ಆರೋಪಿಯ ಬಂಧನ

Update: 2023-11-08 16:52 GMT

ಸಾಂದರ್ಭಿಕ ಚಿತ್ರ

ಎರ್ನಾಕುಲಂ: ಮರ್ಯಾದಾ ಹತ್ಯೆ ಪ್ರಕರಣವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಪುತ್ರಿಯನ್ನು ಕೊಲೆಗೈದ ಆರೋಪಿಯನ್ನು ಎರ್ನಾಕುಲಂ ಜಿಲ್ಲೆಯ ಅಲುವಾದ ಕರುಮಲ್ಲೂರು ಗ್ರಾಮದಲ್ಲಿ ಬುಧವಾರ ಬಂಧಿಸಲಾಗಿದೆ.

ಆರೋಪಿಯು ತನ್ನ 14 ವರ್ಷ ವಯಸ್ಸಿನ ಪುತ್ರಿಗೆ ಬಲವಂತವಾಗಿ ಕೀಟನಾಶಕವುಣಿಸಿ ಕೊಲೆಗೈದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ತನ್ನ ಪುತ್ರಿ ಅನ್ಯ ಧರ್ಮದ ಯುವಕನ ಜೊತೆಗೆ ಪ್ರೇಮಸಂಬಂಧ ಹೊಂದಿದ್ದರಿಂದ ರೊಚ್ಚಿಗೆದ್ದ ಆತ ಈ ಹೇಯಕೃತ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ.

ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟದಲ್ಲಿದ್ದ ಬಾಲಕಿಯು, ಮಂಗಳವಾರ ಅಸುನೀಗಿದ್ದಾಳೆ.

ಆರೋಪಿಯನ್ನು 43 ವರ್ಷದ ಅಬೀಸ್ ಎಂದು ಗುರುತಿಸಲಾಗಿದ್ದು, ಆತನ ಪುತ್ರಿಯು ಇನ್ನೊಂದು ಧರ್ಮದ ಹುಡುಗನನ್ನು ಪ್ರೇಮಿಸುತ್ತಿದ್ದಳೆನ್ನಲಾಗಿದೆ. ಅವರಿಬ್ಬರ ಸಂಪರ್ಕವನ್ನು ತಪ್ಪಿಸಲು ಅಬೀಸ್ ಪುತ್ರಿಯ ಮೊಬೈಲ್‌ ಫೋನ್ ಕಸಿದುಕೊಂಡಿದ್ದ. ಆದಾಗ್ಯೂ, ಆತನ ಪುತ್ರಿಯು ಆಕೆಯ ಗೆಳತಿಯ ಮೊಬೈಲ್‌ ಫೋನ್ ಮೂಲಕ ಆತನೊಂದಿಗೆ ಸಂಪರ್ಕದಲ್ಲಿದ್ದಳು. ಈ ವಿಷಯ ತಿಳಿದ ಆತ, ತನ್ನ ಮಗಳಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದ, ಆನಂತರ ಬಲವಂತವಾಗಿ ಆಕೆಗೆ ಕೀಟನಾಶಕವುಣಿಸಿ ಕೊಲೆ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿ ಅಬೀಸ್ ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದು, ಆತನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಅವರು ಬಾಲಕಿಯ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ, ಆಕೆಯ ಅಂತಿಮ ಹೇಳಿಕೆ ದಾಖಲಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News