ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನಿವಾಸಕ್ಕೆ ನುಗ್ಗಲು ಯತ್ನ | ಪ್ರತಿಭಟನಕಾರರ ವಿರುದ್ಧ ಪ್ರಕರಣ ದಾಖಲು

Update: 2024-06-15 15:15 GMT

ಧರ್ಮೇಂದ್ರ ಪ್ರಧಾನ್ | PTI 

ಹೊಸದಿಲ್ಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಇಲ್ಲಿನ ನಿವಾಸದ ಎದುರು ಪ್ರತಿಭಟನೆ ನಡೆಸಿದ ಹಾಗೂ ನುಗ್ಗಲು ಪ್ರಯತ್ನಿಸಿದ ಜನರ ಗುಂಪೊಂದರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಸೌತ್ ಅವೆನ್ಯು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 20 ಜನರು ನಾಲ್ಕು ಕಾರಿನಲ್ಲಿ ಆಗಮಿಸಿದರು ಹಾಗೂ ದಕ್ಷಿಣ ಅವೆನ್ಯೂನ ಕೌಶಕ್ ರಸ್ತೆಯಲ್ಲಿರುವ ಕೇಂದ್ರ ಸಚಿವರ ನಿವಾಸದ ಹೊರಗೆ ಸೇರಿ ಪ್ರತಿಭಟನೆ ನಡೆಸಿದರು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ.

ಪ್ರತಿಭಟನಕಾರ ಕೈಯಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ದ ಕರಪತ್ರಗಳು ಇದ್ದುವು. ಕೆಲವು ಮಾಧ್ಯಮ ಪ್ರತಿನಿಧಿಗಳು ಕೂಡ ಸ್ಥಳದಲ್ಲಿ ಇದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶದಲ್ಲಿ ಸಿಆರ್‌ಪಿಸಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಆದುದರಿಂದ ಇಲ್ಲಿ ಗುಂಪು ಸೇರಬಾರದು ಎಂದು ಪೊಲೀಸರು ಪ್ರತಿಭಟನಕಾರರಿಗೆ ಸೂಚನೆ ನೀಡಿದ್ದರು. ಆದರೂ ಅವರು ಚದುರಲಿಲ್ಲ ಹಾಗೂ ಘೋಷಣೆಗಳನ್ನು ಕೂಗುವುದನ್ನು ನಿಲ್ಲಿಸಲಿಲ್ಲ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.

ಅಲ್ಲದೆ, ಪ್ರತಿಭಟನಕಾರರು ಆಕ್ರೋಶಗೊಂಡು ಕೇಂದ್ರ ಸಚಿವರ ನಿವಾಸ ಪ್ರವೇಶಿಸಲು ಕೂಡ ಪ್ರಯತ್ನಿಸಿದರು. ಅನಂತರ ಪೊಲೀಸ್ ಠಾಣೆಯಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಸಲಾಯಿತು ಹಾಗೂ ಪ್ರತಿಭಟನಕಾರರನ್ನು ಚದುರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News