ಕ್ರಿಸ್ಮಸ್‌ ಆಚರಣೆ ವೇಳೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ಆರೋಪ: ನಟ ರಣಬೀರ್‌ ಕಪೂರ್‌ ವಿರುದ್ಧ ದೂರು ದಾಖಲು

Update: 2023-12-28 06:49 GMT

Image credit: indiatoday

ಹೊಸದಿಲ್ಲಿ: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅವರು ಕ್ರಿಸ್ಮಸ್‌ ಹಬ್ಬದ ಆಚರಣೆ ವೇಳೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂದು ಆರೋಪಿಸಿ ಮುಂಬೈ ನಿವಾಸಿ ಸಂಜಯ್‌ ತಿವಾರಿ ಎಂಬವರು ಘಾಟ್ಕೊಪರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯ ವೈರಲ್‌ ವೀಡಿಯೋದಲ್ಲಿ ರಣಬೀರ್‌ ಕಪೂರ್‌ ಅವರು ಕ್ರಿಸ್ಮಸ್‌ ಸಂಪ್ರದಾಯದಂತೆ ಪುಡ್ಡಿಂಗ್‌ ಮೇಲೆ ಸ್ಪಿರಿಟ್‌ ಸುರಿಯುತ್ತಿರುವುದು ಹಾಗೂ ಅದು ಸ್ವಲ್ಪ ಹೊತ್ತು ಉರಿಯುವುದು ಕಾಣಿಸುತ್ತದೆ. ಈ ಸಂದರ್ಭ ರಣಬೀರ್‌ ಕಪೂರ್‌ ಪತ್ನಿ, ನಟಿ ಆಲಿಯಾ ಭಟ್ ಅವರ ಪಕ್ಕದಲ್ಲಿಯೇ ಕೂತಿದ್ದರು.

ನಟ ರಣಬೀರ್‌ ಕಪೂರ್‌ ಕೇಕ್‌ ಮೇಲೆ ಮದ್ಯ ಸುರಿದು ಅದಕ್ಕೆ ಬೆಂಕಿ ಹಚ್ಚುವಾಗ “ಜೈ ಮಾತಾ ದೀ” ಎಂದು ಹೇಳಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.

ಆದರೆ ಈ ದೂರಿನ ಆಧಾರದಲ್ಲಿ ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. “ಹಿಂದು ಧರ್ಮದಲ್ಲಿ ಇತರ ದೇವರುಗಳಿಗೆ ಪ್ರಾರ್ಥಿಸುವ ಮೊದಲು ಅಗ್ನಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ ಆದರೆ ರಣಬೀರ್‌ ಮತ್ತು ಅವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಬೇರೊಂದು ಧರ್ಮದ ಹಬ್ಬ ಆಚರಿಸುವ ವೇಳೆ ಮದ್ಯ ಸುರಿದಿದ್ದೇ ಅಲ್ಲದೆ ಜೈ ಮಾತಾ ದೀ ಎಂದಿದ್ದಾರೆ,” ಎಂದು ದೂರಿನಲ್ಲಿ ಹೇಳಲಾಗಿದೆ.

ರಣಬೀರ್‌ ಕಪೂರ್‌ ಅವರು ಭಾಗವಹಿಸಿದ್ದ ಕ್ರಿಸ್ಮಸ್‌ ಊಟದ ಕಾರ್ಯಕ್ರಮವನ್ನು ಕುಣಾಲ್‌ ಕಪೂರ್‌ ಆಯೋಜಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News